ಕದ್ರಿ ಮಂಜುನಾಥ ದೇವಾಲಯದ ಮೈಕ್ಗೆ ಕೊಕ್?
ಮಂಗಳೂರು, ಡಿಸೆಂಬರ್ 23: ಇಲ್ಲಿನ ಕದ್ರಿ ಮಂಜುನಾಥ ದೇವಸ್ಥಾನದಲ್ಲಿ ಧ್ವನಿವರ್ಧಕ ಬಳಕೆ ಬಗ್ಗೆ ಸ್ಥಳಿಯರೊಬ್ಬರು ಆಕ್ಷೇಪಣಾ ಪತ್ರ ಬರೆದಿರುವುದು ವಿವಾದಕ್ಕೆ ಕಾರಣವಾಗಿದ್ದು, ದೇವಾಲಯದ ಬಳಿ ಉದ್ವಿಘ್ನ ವಾತಾವರಣ ನಿರ್ಮಾಣವಾಗಿದೆ.
ದೇವಸ್ಥಾನದಲ್ಲಿ ಧ್ವನಿವರ್ಧಕ ಬಳಸುವುದರಿಂದ ಸುತ್ತಮುತ್ತಲಿನ ಮನೆಗಳಲ್ಲಿ ಇರುವವರಿಗೆ ತೊಂದರೆ ಆಗುತ್ತಿದೆ ಎಂದು ಆರೋಪಿಸಿ ಸ್ಥಳೀಯರಾದ ಬ್ಲೇನಿ ಡಿಸೋಜ ಎಂಬವರು ಮೇಯರ್ ಹಾಗೂ ಮುಜರಾಯಿ ಇಲಾಖೆಗೆ ಪತ್ರ ಬರೆದಿದ್ದರು.
ಇವರ ದೂರಿಗೆ ಪ್ರತಿಕ್ರಿಯಿಸಿದ್ದ ಮುಜರಾಯಿ ಇಲಾಖೆ, ಸಮಸ್ಯೆ ಸರಿಪಡಿಸುವಂತೆ ದೇವಾಲಯಕ್ಕೆ ಪತ್ರ ಬರೆದಿತ್ತು. ಇದರಿಂದ ಉದ್ರಿಕ್ತಗೊಂಡ ಸ್ಥಳಿಯರು ಹಾಗೂ ವಿಶ್ವ ಹಿಂದೂ ಪರಿಷದ್ ಸದಸ್ಯರು ದೇವಾಲಯದ ಮುಂದೆ ಜಮಾಯಿಸಿ ಪ್ರತಿಭಟನೆಗೆ ಮುಂದಾದ ಕಾರಣ ಸ್ಥಳದಲ್ಲಿ ಉದ್ವಿಘ್ನ ಪರಿಸ್ಥಿತಿ ಉಂಟಾಗಿ ಪೊಲೀಸರು ಸ್ಥಳಕ್ಕೆ ದೌಡಾಯಿಸಿ ದೇವಾಲಯಕ್ಕೆ ಭದ್ರತೆ ಒದಗಿಸಿದ್ದಾರೆ.
ಮೊಸರು ಕುಡಿಕೆ, ನವಮಿ, ದೀಪಾವಳಿ, ಭಜನೆ, ಹರಿಕತೆ, ನೇಮ, ಜಾತ್ರೆ, ಯಕ್ಷಗಾನ ಮುಂತಾದ ಕಾರ್ಯಕ್ರಮಗಳು ದೇವಾಲಯದಲ್ಲಿ ನಡೆಯುತ್ತಲೇ ಇರುತ್ತವೆ ಈ ಸಮಯದಲ್ಲೆಲ್ಲಾ ಧ್ವನಿ ವರ್ಧಕಲ್ಲಿ ಹಾಕುವ ಹಾಡುಗಳಿಂದ ದೇವಾಲಯದ ಸುತ್ತಮುತ್ತಲಿನ ಮನೆಗಳವರಿಗೆ ತೋಂದರೆ ಆಗುತ್ತಿದೆ, ಧ್ವನಿವರ್ಧಕಗಳನ್ನು ದೇವಾಲಯದ ಒಳ ಅಂಗಳದಲ್ಲಿ ಕಟ್ಟುವಂತೆ ಸೂಚನೆ ನೀಡಬೇಕು ಎಂದು ಬೇನ್ಲಿ ಡಿಸೋಜ ಪತ್ರ ಬರೆದಿದ್ದರು.
ಮೇಯರ್ ಹಾಗೂ ಮುಜರಾಯಿ ಇಲಾಖೆಗೆ ಬರೆದ ಪತ್ರದಲ್ಲಿ ಭೇನ್ಲಿ ಡಿಸೋಜ ಅವರು ತಮ್ಮ ಸುತ್ತಮುತ್ತಲಿನ ಮನೆಗಳವರ ಸಹಿಯನ್ನು ನಕಲು ಮಾಡಿದ್ದಾರೆ ಎಂದು ಹಿಂದೂ ಸಂಘಟನೆ ಸದಸ್ಯರೊಬ್ಬರು ಪೊಲೀಸರಿಗೆ ದೂರು ನೀಡಿದ್ದು, ಈ ಬಗ್ಗೆಯೂ ವಿಚಾರಣೆ ನಡೆಸಲಾಗುತ್ತಿದೆ. ಆದರೆ ಬೇನ್ಲಿ ಡಿಸೋಜಾ ಈ ಆರೋಪವನ್ನು ತಳ್ಳಿ ಹಾಕಿದ್ದಾರೆ.
ಈ ಪ್ರಕರಣದ ಬಗ್ಗೆ ಸಾಮಾಜಿಕ ಜಾಲತಾಣಗಳಲ್ಲಿ ಪರವಿರೋಧ ಚರ್ಚೆ ಆರಂಭವಾಗಿದ್ದು, ದರ್ಗಾಗಳಲ್ಲಿ ಮೊಳಗುವ ಆಜಾನ್ ಗೆ, ಚರ್ಚ್ಗಳಲ್ಲಿ ಹಾಡುವ ಕೆರೊಲ್ಗಳಿಗೆ ಇಲ್ಲದ ಸಮಸ್ಯೆ ಶ್ಲೋಕಗಳಿಗೇಕೆ ಎಂಬಿತ್ಯಾದಿ ಪೋಸ್ಟ್ಗಳು ಹರಿದಾಡುತ್ತಿವೆ.