ಮಂಗಳೂರಿನ ಜೈವಿಕ ಉದ್ಯಾನವನ ಈಗ ಕ್ಯಾಶ್ ಲೆಸ್
ಇನ್ನು ಮುಂದೆ ಮಂಗಳೂರಿನ ಶಿವರಾಮ ಕಾರಂತ ಜೈವಿಕ ಉದ್ಯಾನವನ, ಪಿಲಿಕುಳದಲ್ಲಿ ವೀಕ್ಷಕರು ನಗದು ರಹಿತ ವ್ಯವಹಾರ ಮಾಡಬಹುದು. ಜತೆಗೆ ಫೆಬ್ರವರಿ ಅಂತ್ಯಕ್ಕೆ ಉದ್ಯಾನವನಕ್ಕೆ ಹೊಸ ಅತಿಥಿಗಳಾಗಿ ಘೇಂಡಾಮೃಗಗಳು ಬರಲಿವೆ.
ಮಂಗಳೂರು, ಜನವರಿ24 : ಮಾಲ್, ಹೋಟೆಲ್, ಅಂಗಡಿ ಸೇರಿದಂತೆ ಹಲವು ಕಡೆ ನಗದು ಮುಕ್ತ ವ್ಯವಹಾರ ಮಾಡುವುದುನ್ನು ನೀವು ಕೇಳಿದ್ದೀರಿ. ಆದರೆ ಜೈವಿಕ ಉದ್ಯಾನವನದಲ್ಲೂ ನಗದು ಮುಕ್ತ ವ್ಯವಹಾರ ಮಾಡುವುದನ್ನು ಕೇಳಿದ್ದೀರಾ? ಇಲ್ಲ ಅಂದರೆ ಈ ಸ್ಟೋರಿ ನೋಡಿ.
ನಗದು ಮುಕ್ತ ಆರ್ಥಿಕತೆಯತ್ತ ದೇಶ ಹೆಜ್ಜೆ ಇಡುತ್ತಿರುವ ಸಂದರ್ಭದಲ್ಲಿ ಮಂಗಳೂರಿನ ಪ್ರಖ್ಯಾತ ಶಿವರಾಮ ಕಾರಂತ ಜೈವಿಕ ಉದ್ಯಾನವನ, ಪಿಲಿಕುಳದಲ್ಲೂ ಡಿಜಿಟಲ್ ಇಂಡಿಯಾ ಯೋಜನೆ ಕಾಲಿಟ್ಟಿದೆ. ಇನ್ನು ಮುಂದೆ ಜೈವಿಕ ಉದ್ಯಾನವನಕ್ಕೆ ಭೇಟಿ ನೀಡುವವರು ಪ್ರವೇಶ ಶುಲ್ಕ ಪಾವತಿಸಲು ಡೆಬಿಟ್ ಅಥವಾ ಕ್ರೆಡಿಟ್ ಕಾರ್ಡ್ ಬಳಸಲು ಅವಕಾಶ ನೀಡಲಾಗಿದೆ.
ಕ್ಯಾಶ್ ಲೆಸ್ ಉದ್ಯಾನವನ
ಈ ಕುರಿತು ಮಾಹಿತಿ ನೀಡಿದ ಉದ್ಯಾನವನದ ನಿರ್ದೇಶಕ ಎಚ್ ಜಯಪ್ರಕಾಶ್ ಭಂಡಾರಿ ಉದ್ಯಾನವನಕ್ಕೆ ಭೇಟಿ ನೀಡುವವರಿಗಾಗಿ ಸಂಪೂರ್ಣವಾಗಿ ನಗದು ರಹಿತ ವ್ಯವಹಾರದ ಅವಕಾಶ ಕಲ್ಪಿಸಲಾಗಿದೆ. ಪ್ರವೇಶ ಶುಲ್ಕವನ್ನು ಕಾರ್ಡ್ ಬಳಸಿ ಪಾವತಿಸುವ ವ್ಯವಸ್ಥೆಯನ್ನು ಜನವರಿ 20ರಿಂದಲೇ ಜಾರಿಗೆ ತರಲಾಗಿದೆ. ಮುಂಬರುವ ದಿನಗಳಲ್ಲಿ ಡಿಜಿಟಲ್ ಇಂಡಿಯಾದ ವ್ಯವಸ್ಥೆಯಾದ ಡಿಜಿಟಲ್ ವಾಲೆಟ್ ಹಾಗು ಯುನಿವರ್ಸಲ್ ಪೇಮೆಂಟ್ ಇಂಟರ್ಫೇಸ್ (UPI) ಮೂಲಕ ಪಾವತಿ ಆರಂಭಿಸಲಾಗುವುದು," ಎಂದರು.
ಪ್ರವೇಶ ಶುಲ್ಕ ಎಷ್ಟು?
ಈ ಜೈವಿಕ ಉದ್ಯಾನವನದ ಪ್ರವೇಶ ಶುಲ್ಕ ವಯಸ್ಕರಿಗೆ ರೂ. 50 ಮತ್ತು ಹತ್ತು ವರ್ಷದ ಒಳಗಿನ ಮಕ್ಕಳಿಗೆ ರೂ. 20. ಇನ್ನು ಮೂರು ವರ್ಷಕ್ಕಿಂತ ಸಣ್ಣ ಮಕ್ಕಳಿಗೆ ಯಾವುದೇ ಶುಲ್ಕ ಇಲ್ಲ.. ಇದಲ್ಲದೆ ಶಾಲಾ ಪ್ರವಾಸಕ್ಕೆ ಪಾರ್ಕ್ ಗೆ ಆಗಮಿಸುವವರಿಗೆ ತಲಾ ಶುಲ್ಕ ರೂ. ೧೫ ನಿಗದಿ ಮಾಡಲಾಗಿದೆ. ಮುಂಬರುವ ದಿನಗಳಲ್ಲಿ ಪಾರ್ಕ್ ಬಳಿ ಎಟಿಎಂ ಯಂತ್ರ ಅಳವಡಿಸಲಾಗುವುದು ಎಂದು ನಿರ್ದೇಶಕರು ಹೇಳಿದ್ದಾರೆ.
ಉದ್ಯಾನವನಕ್ಕೆ ಹೊಸ ಅತಿಥಿಗಳ ಆಗಮನ
ಇದಲ್ಲದೆ ಹೊಸ ಆಕರ್ಷಣೆಯೆಂದರೆ ಉದ್ಯಾನವನಲ್ಲೆ ಘೇಂಡಾ ಮೃಗಗಳು ಬರಲಿವೆ. ಫೆಬ್ರವರಿ 15 ರೊಳಗೆ ಮೂರು ಘೇಂಡಾಮೃಗಗಳನ್ನು ಬನ್ನೇರುಘಟ್ಟ ನ್ಯಾಷನಲ್ ಪಾರ್ಕ್ ನಿಂದ ಪಡೆಯಲು ಸಿದ್ಧತೆ ನಡೆಸಿದ್ದೇವೆ. ಇದಕ್ಕಾಗಿ ಬೆಂಗಳೂರಿನಲ್ಲಿ ಪಂಜರ ತಯಾರಿಕೆ ಕಾರ್ಯ ನಡೆಯುತ್ತಿದೆ. ಮತ್ತೊಂದು ಸಂತೋಷದ ವಿಷಯವೆಂದರೆ ಪಾರ್ಕ್ ಗೆ ಚೈನ್ನೈನಿಂದ ಅನಕೊಂಡ ಹಾವನ್ನು ತರಲು ಪ್ರಯತ್ನಿಸುತ್ತಿದ್ದೇವೆ. ಇದಕ್ಕಾಗಿ ಸರ್ಕಾರದಿಂದ ಅನುಮತಿ ಪಡೆಯಬೇಕಾಗಿದೆ ಎಂದು ಹೇಳಿದರು. ಫೆಬ್ರವರಿ ತಿಂಗಳಾಂತ್ಯದೊಳಗೆ ವೀಕ್ಷಕರಿಗೆ ಘೇಂಡಾಮೃಗ ವೀಕ್ಷಿಸುವ ಅವಕಾಶ ಸಿಗಲಿದೆ.