ಮಂಗಳೂರಿನಲ್ಲಿ ಕುಖ್ಯಾತ ದನಗಳ್ಳ ಮುಸ್ತಫಾ ಪೊಲೀಸರಿಗೆ ಸಿಕ್ಕಿಬಿದ್ದ
ಮಂಗಳೂರು ಜುಲೈ 2: ದಕ್ಷಿಣ ಕನ್ನಡ , ಉಡುಪಿ ಸೇರಿದಂತೆ ಇತರ ಜಿಲ್ಲೆಗಳಲ್ಲಿ ಸಕ್ರಿಯವಾಗಿದ್ದ ದನಗಳ್ಳತನದ ಜಾಲವನ್ನು ಭೇದಿಸುವಲ್ಲಿ ಮಂಗಳೂರು ಪೊಲೀಸರು ಯಶಸ್ವಿಯಾಗಿದ್ದಾರೆ. ಮಂಗಳೂರು ರೌಡಿ ನಿಗ್ರಹ ದಳದ ಪೊಲೀಸರು ನಡೆಸಿದ ಕಾರ್ಯಾಚರಣೆಯಲ್ಲಿ ಕುಖ್ಯಾತ ದನಗಳ್ಳನನ್ನು ಬಂಧಿಸಿದ್ದಾರೆ.
2017ರ ನವೆಂಬರ್ 18ರಂದು ನಡೆದ ಗೋಕಳ್ಳತನ ಪ್ರಕರಣಕ್ಕೆ ಸಂಬಂಧಿಸಿದಂತೆ ಬಂಧಿಸಲಾಗಿದೆ. ಬಂಧಿತನನ್ನು ಮಂಗಳೂರು ತಾಲೂಕಿನ ಮಲ್ಲೂರು ಉದ್ದಬೆಟ್ಟು ಗುಡ್ಡದ ಮೇಲ್ ಮನೆ ನಿವಾಸಿ ಮಹಮ್ಮದ್ ಮುಸ್ತಫಾ (20) ಎಂದು ಗುರುತಿಸಲಾಗಿದೆ.
ಗೋರಕ್ಷಕರಿಂದ ಅಮಾನವೀಯ ಥಳಿತ: ಮತ್ತೊಂದು ವೈರಲ್ ವಿಡಿಯೋ
2017 ನವೆಂಬರ್ 18ರಂದು ಮಂಗಳೂರು ಹೊರವಲಯದ ಮಲ್ಲೂರು ಗ್ರಾಮದ ಪಲ್ಲಿಬೆಟ್ಟು ಮಸೀದಿಯ ಬಳಿ ನಿಯಮ ಮೀರಿ ದನ-ಕರುಗಳನ್ನು ಸಾಗಾಟ ಮಾಡುತ್ತಿದ್ದಾರೆ ಎಂಬುದಾಗಿ ಬಂದ ಮಾಹಿತಿ ಮೇರೆಗೆ ಪೊಲೀಸರು ಕಾರ್ಯಾಚರಣೆ ನಡೆಸಿದ್ದರು. ಈ ಸಂದರ್ಭದಲ್ಲಿ ಪೊಲೀಸರು ಸುತ್ತುವರೆಯುತ್ತಿರುವದನ್ನು ಗಮನಿಸಿದ ಇಮ್ರಾನ್, ನಿಜಾಮುದ್ದೀನ್ , ಮುಸ್ತಾಪಾ ಹಾಗೂ ಫೌಝಾನ್ ಕಾರನ್ನು ಅಲ್ಲಿಯೇ ಬಿಟ್ಟು ಪರಾರಿಯಾಗಿದ್ದರು.
ತಲೆ ಮರೆಸಿಕೊಂಡಿದ್ದ ಆರೋಪಿಗಳ ಪೈಕಿ ಮಹಮ್ಮದ್ ಮುಸ್ತಫಾನನ್ನು ಬಂಧಿಸುವಲ್ಲಿ ರೌಡಿ ನಿಗ್ರಹ ದಳದ ಪೊಲೀಸರು ಯಶಸ್ವಿಯಾಗಿದ್ದಾರೆ. ಇದೊಂದು ಕುಖ್ಯಾತ ದನಗಳ್ಳರ ತಂಡವಾಗಿದ್ದು, ಇತರ ಸದಸ್ಯರ ಬಂಧನಕ್ಕೆ ಪೊಲೀಸರು ಬಲೆ ಬೀಸಿದ್ದಾರೆ.