'ರಾಹುಲ್ ಗೆ ಕೊನೆ ದಿಕ್ಕು ಕರ್ನಾಟಕ, ಉಳಿದೆಡೆ ಮಾತನಾಡೋರು ಗತಿಯಿಲ್ಲ'
ಮಂಗಳೂರು, ಫೆಬ್ರವರಿ 21 : ರಾಹುಲ್ ಗಾಂಧಿ ಅವರು ಬಂದರೆ ಕರ್ನಾಟಕಕ್ಕೆ, ಬೆಂಗಳೂರಿಗೆ ಬರಬೇಕು. ಏಕೆಂದರೆ ಬೇರೆಲ್ಲೂ ಕಾಂಗ್ರೆಸ್ ಅಧಿಕಾರದಲ್ಲಿಲ್ಲ. ಇವರು ಹೋದರೆ ಮಾತನಾಡಿಸುವವರು ಸಹ ಗತಿ ಇಲ್ಲ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್.ಯಡಿಯೂರಪ್ಪ ಮಂಗಳೂರಿನಲ್ಲಿ ಶಕ್ತಿ ಕೇಂದ್ರ ಪ್ರಮುಖರ ಸಮಾವೇಶದಲ್ಲಿ ಬುಧವಾರ ವ್ಯಂಗ್ಯವಾಡಿದರು.
ಕಾಂಗ್ರೆಸ್ ದೀಪ ರಾಜ್ಯವನ್ನೇ ಸುಡುತ್ತಿದೆ: ಯಡಿಯೂರಪ್ಪ
ಉತ್ತರಪ್ರದೇಶದಲ್ಲಿ ಬಿಜೆಪಿ ಮೂನ್ನೂರಾ ಇಪ್ಪತ್ತೈದು ಸ್ಥಾನ ಗೆಲ್ಲುತ್ತದೆ ಅಂತ ಯಾವ ಮಾಧ್ಯಮದ ಬಂಧುಗಳು ನಿರೀಕ್ಷೆ ಮಾಡಿರಲಿಲ್ಲ. ಉತ್ತರ ಪ್ರದೇಶದಲ್ಲಿ ಕ್ರಾಂತಿಯಾಯಿತು. ಕರ್ನಾಟಕದಲ್ಲಿ ಬಿಜೆಪಿಯನ್ನು ಅಧಿಕಾರಕ್ಕೆ ತಂದು, ರಾಹುಲ್ ಗಾಂಧಿಯವರು ಇಲ್ಲೂ ಕಾಲಿಡದಂತೆ ಮಾಡಬೇಕು ಎಂದರು.
ಕರ್ನಾಟಕದಲ್ಲಿ ಅಧಿಕಾರದಲ್ಲಿ ಇರುವುದು ಭ್ರಷ್ಟ ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಅವರ ಕಂಪೆನಿ. ಆಲಿಬಾಬಾ ನಲವತ್ತು ಕಳ್ಳರು ಅಂತ ಕಥೆ ಕೇಳಿದ್ದಿವಿ. ಅದನ್ನು ಮೀರಿಸುವ ನಡವಳಿಕೆ ಒಬ್ಬೊಬ್ಬ ಮಂತ್ರಿಗಳ ಕಥೆಯಿದೆ. ನಾನು ಹೆಚ್ಚು ಮೂಲಕ್ಕೆ ಹೋಗುವುದಿಲ್ಲ. ಏಕೆಂದರೆ ನಾನಾ ಭಾಗಗಳಿಂದ ಬಂದಿರುವ ನಿಮಗೆ ಈ ಬಗ್ಗೆ ಎಲ್ಲ ಗೊತ್ತಿದೆ ಎಂದು ಬಿ.ಎಸ್.ಯಡಿಯೂರಪ್ಪ ಅವರು ಹೇಳಿದರು.