ರಾಜಕಾರಣಿಗಳಿಗೆ ಬಂದ್ ಆಗಲಿದೆಯೇ ಧರ್ಮಸ್ಥಳ ಶಾಂತಿವನ ಪ್ರಕೃತಿ ಚಿಕಿತ್ಸಾಲಯ?
Recommended Video
ಬೆಳ್ತಂಗಡಿ, ಜೂನ್.28: ಧರ್ಮಸ್ಥಳದ ಶಾಂತಿವನ ಕಳೆದ 12 ದಿನಗಳಿಂದ ಅಶಾಂತಿಯ ತಾಣವಾಗಿ ಮಾರ್ಪಾಡಾಗಿದೆ. ನಗರಗಳ ಜಂಜಾಟದಿಂದ ಮುಕ್ತಿಹೊಂದಲು, ಪ್ರಕೃತಿಯ ಮಡಿಲಲ್ಲಿ ಯೋಗ ಮತ್ತು ಪ್ರಕೃತಿ ಚಿಕಿತ್ಸೆ ಮೂಲಕ ರಿಲಾಕ್ಸ್ ಆಗಲು ಬರುತ್ತಿದ್ದ ಜನರಿಗೆ ಕಳೆದ 12 ದಿನಗಳಿಂದ ಶಾಂತಿಯೇ ಇಲ್ಲದಂತಾಗಿದೆ.
ಶಾಂತಿವನದ ಪ್ರಕೃತಿ ಚಿಕಿತ್ಸೆಯ ಈ ತಾಣ ಕಳೆದ ಕೆಲ ದಿನಗಳಿಂದ ರಾಜಕೀಯ ತಾಣವಾಗಿ ಬದಲಾಗಿದೆ. ರಾಜಕೀಯ ಮೇಲಾಟದಿಂದಾಗಿ ಶಾಂತಿವನದ ಆಡಳಿತ ಮಂಡಳಿಯೇ ಕಂಗಾಲಾಗಿದೆ. ಇನ್ನು ಮುಂದೆ ರಾಜಕಾರಣಿಗಳಿಗೆ ಪ್ರಕೃತಿ ಚಿಕಿತ್ಸಾಲಯದಲ್ಲಿ ಚಿಕಿತ್ಸೆ ನೀಡೋದೇ ಬೇಡ ಎನ್ನುವ ತೀರ್ಮಾನಕ್ಕೂ ಬಂದಿದೆ ಎಂದು ಹೇಳಲಾಗಿದೆ.
ಮಂಜುನಾಥನ ಸನ್ನಿಧಿಗೆ ಸಿದ್ದು, ಮೈತ್ರಿ ಸರಕಾರದ ಮುಂದಿನ ದೃಶ್ಯ ಏನು?
ಹೆಸರಾಂತ ಪುಣ್ಯಕ್ಷೇತ್ರ ಧರ್ಮಸ್ಥಳ ಯಾವಾಗಲೂ ರಾಜಕೀಯ ದೂರ ಉಳಿದುಕೊಂಡಿದ್ದು, ಇಲ್ಲಿ ಯಾವುದೇ ರಾಜಕೀಯ ಚಟುವಟಿಕೆಗಳು ನಡೆಯುವುದಿಲ್ಲ, ಇಲ್ಲಿ ಎಲ್ಲಾ ರಾಜಕೀಯ ಪಕ್ಷಗಳ ಮುಖಂಡರು ದೇವಸ್ಥಾನಕ್ಕೆ ಭೇಟಿ ನೀಡಿ ಧರ್ಮಾಧಿಕಾರಿಗಳ ಆಶೀರ್ವಾದ ಪಡೆಯುತ್ತಾರೆ.
ಇಡೀ ಧರ್ಮಸ್ಥಳ ರಾಜಕೀಯ ಚಟುವಟಿಕೆಗಳಿಂದ ದೂರವೇ ಉಳಿದಿತ್ತು, ಆದರೆ ಈ ಬಾರಿ ಮಾತ್ರ ಮಾಜಿ ಸಿಎಂ ಸಿದ್ದರಾಮಯ್ಯ ಧರ್ಮಸ್ಥಳದ ಶಾಂತಿವನವನ್ನು ತಮ್ಮ ರಾಜಕೀಯ ಚಟುವಟಿಕೆಗಳ ತಾಣವನ್ನಾಗಿ ಬಳಸಿಕೊಂಡರು.
ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಕಳೆದ 12 ದಿನಗಳ ಕಾಲ ಈ ಪ್ರಕೃತಿ ಚಿಕಿತ್ಸಾಲಯದಲ್ಲಿ ಚಿಕಿತ್ಸೆ ಪಡೆದುಕೊಳ್ಳುತ್ತಿದ್ದರು. ಆರಾಮಾಗಿ ಇದ್ದು ಫಿಟ್ ಆಗಿ ಹೊರ ಬರಬೇಕೆಂದಿದ್ದ ಸಿದ್ದರಾಮಯ್ಯ ಮಾತ್ರ ಶಾಂತಿವನದ ಒಳಗೂ ರಾಜಕೀಯದ ಚದುರಂಗ ಆಟವಾಡಿದ್ದಾರೆ.
ಸಮ್ಮಿಶ್ರ ಸರ್ಕಾರದ ಭವಿಷ್ಯದ ಬಗ್ಗೆ ಇಲ್ಲಿಂದಲೇ ದಿನವೊಂದಕ್ಕೆ ಹೊಸ ಹೊಸ ಬಾಂಬ್ ಗಳನ್ನು ಸಿಡಿಸುತ್ತಾ ಸಮ್ಮಿಶ್ರ ಸರ್ಕಾರದ ಬುಡವನ್ನೇ ಅಲುಗಾಡಿಸಿದ್ದಾರೆ.
ಸಿದ್ದರಾಮಯ್ಯ ಶಾಂತಿವನಕ್ಕೆ ದಾಖಲಾದ ದಿನದಿಂದ ಡಿಸ್ಚಾರ್ಜ್ ಆಗುವ ಇಂದಿನವರೆಗೂ ಶಾಂತಿವನದ ವೈದ್ಯರು, ಸಿಬ್ಬಂದಿ, ರೋಗಿಗಳು ಸೇರಿದಂತೆ ಯಾರಿಗೂ ನೆಮ್ಮದಿ ಇಲ್ಲದಂತಾಗಿದೆ. ಪ್ರತಿದಿನ ಸಿದ್ದರಾಮಯ್ಯನವರ ಆಪ್ತರು, ಶಾಸಕರುಗಳು, ಬೆಂಬಲಿಗರು ಮತ್ತು ಮಾಧ್ಯಮದವರು ಸೇರಿದಂತೆ ಎಲ್ಲರೂ ಮುಗಿಬಿದ್ದು ಬರುತ್ತಿದ್ದರು.
ಶಾಂತಿಯಾಗಿರಬೇಕಾಗಿದ್ದ ಶಾಂತಿವನದಲ್ಲಿ ಅಶಾಂತಿ ಹುಟ್ಟಿಸಿತ್ತು. ಅದರಲ್ಲೂ ಸಿದ್ದರಾಮಯ್ಯ ಅವರ ಮೈತ್ರಿ ಸರ್ಕಾರದ ವಿರುದ್ಧ ಅಸಮಧಾನ ಹೊರ ಹಾಕಿದ ನಂತರವಂತೂ ಶಾಂತಿವನ ಪ್ರಕೃತಿ ಚಿಕಿತ್ಸಾಲಯ ರಾಜ್ಯಮಟ್ಟದಲ್ಲಿ ಸುದ್ದಿಯಾಯಿತು.
ರಾಜಕಾರಣಿಗಳ ದಂಡೆ ಶಾಂತಿವನದತ್ತ ಹರಿದು ಬರಲಾರಂಭಿಸಿತು. ಶಾಂತಿಯಿಂದ ಇರಬೇಕಾಗಿದ್ದ ಶಾಂತಿವನ ಸಂಪೂರ್ಣ ರಾಜಕಾರಣಿಗಳ ರೆಸಾರ್ಟ್ ವಾಸದ ಪರಿಸ್ಥಿತಿಯನ್ನು ಕಾಣಬೇಕಾಗಿ ಬಂದಿತ್ತು.
ಇದು ಇಲ್ಲಿನ ಆಡಳಿತ ಮಂಡಳಿಗೆ ತಲೆ ನೋವು ತಂದಿದ್ದು, ರಾಜಕಾರಣಿಗಳು ಇಲ್ಲಿ ಚಿಕಿತ್ಸೆಗೆಂದು ದಾಖಲಾದರೆ ಏನೆಲ್ಲಾ ತೊಂದರೆಗಳಾಗುತ್ತೆ ಅನ್ನೋದನ್ನು ಶಾಂತಿವನ ಆಡಳಿತ ಮಂಡಳಿ ಈ ಘಟನೆಯಿಂದ ಕಂಡುಕೊಂಡಿದೆ.
ಹೀಗಾಗಿ ಇನ್ನು ಮುಂದೆ ಶಾಂತಿವನ ಪ್ರಕೃತಿ ಚಿಕಿತ್ಸಾಲಯದಲ್ಲಿ ಯಾವುದೇ ರಾಜಕಾರಣಿಗಳಿಗೂ ಚಿಕಿತ್ಸೆ ನೀಡಬಾರದು ಎಂದು ಆಡಳಿತ ಮಂಡಳಿ ನಿರ್ಧರಿಸಿದೆ ಎಂದು ಹೇಳಲಾಗಿದೆ.