ಮೌಢ್ಯ ನಿಷೇಧ ಮಸೂದೆಯಿಂದ ಮೂಲ ನಂಬಿಕೆಗೆ ಧಕ್ಕೆ: ಪಾಲೆಮಾರ್
ಮಂಗಳೂರು, ಸೆಪ್ಟೆಂಬರ್ 28: ಮೂಢನಂಬಿಕೆಗೆ ಕಡಿವಾಣ ಹಾಕುವ ದೃಷ್ಟಿಯಿಂದ ಮೌಢ್ಯ ಪ್ರತಿಬಂಧಕ ವಿಧೇಯಕವನ್ನು ಅನುಮೋದಿಸಿರುವುದು ಸ್ವಾಗತಾರ್ಹ. ಆದರೆ, ಕೇವಲ ಒಂದು ವರ್ಗದವರನ್ನು ಟಾರ್ಗೆಟ್ ಮಾಡಿ ವಿಧೇಯಕ ರಚಿಸಿರುವುದು ಸರಿಯಲ್ಲ ಎಂದು ಮಾಜಿ ಸಚಿವ ಕೃಷ್ಣ ಜೆ ಪಾಲೇಮಾರ್ ಆಕ್ರೋಶ ವ್ಯಕ್ತಪಡಿಸಿದರು.
ಮಂಗಳೂರಿನಲ್ಲಿ ಮಾಧ್ಯಮ ಗೋಷ್ಠಿಯಲ್ಲಿ ಮಾತನಾಡಿದ ಅವರು, ಯಾವುದೇ ಕಾಯ್ದೆ ಸಾರ್ವತ್ರಿಕವಾಗಿರಬೇಕೇ ಹೊರತು ಪಕ್ಷಪಾತದಿಂದ ಕೂಡಿರಬಾರದು ಎಂದು ಅಭಿಪ್ರಾಯ ವ್ಯಕ್ತಪಡಿಸಿದರು . ಕಾಯ್ದೆಯಲ್ಲಿ ಹಲವು ಲೋಪದೋಷಗಳಿದ್ದು ಹಿಂದೂ ಸಮಾಜವನ್ನು ಗುರಿಯಾಗಿಸಿ ಕಾಯ್ದೆ ರಚಿಸಲಾಗಿದೆ ಎಂದು ಅವರು ಕಿಡಿಕಾರಿದರು .
ಮೂಢನಂಬಿಕೆಯನ್ನು ನಿಷೇಧಿಸಿ, ಆದರೆ ಮೂಲ ನಂಬಿಕೆಗೆ ತೊಂದರೆ ನೀಡಬಾರದೆಂದು ಅವರು ಹೇಳಿದರು. ಎಡೆಸ್ನಾನ ಹಾಗೂ ಮಡೆಸ್ನಾನವನ್ನು ಗುರಿಯಾಗಿಸಿ ಈ ವಿಧೇಯಕ ರಚಿಸಲಾಗಿದೆ ಎಂದು ಹೇಳಿದ ಅವರು ಕೋಳಿ ಅಂಕವನ್ನು ನಿಷೇಧಿಸಿ ಆದರೆ, ಕಂಬಳಕ್ಕೂ ಅಡ್ಡಗಾಲು ಹಾಕುತ್ತಿದ್ದಿರಿ ಎಂದು ಅಸಮಾಧಾನ ವ್ಯಕ್ತಪಡಿಸಿದರು .
ರಾಜ್ಯ ಸರ್ಕಾರ ಅನುಮೋದಿಸಿದ "ಕರ್ನಾಟಕ ಅಮಾನವೀಯ ದುಷ್ಟ ಮತ್ತು ವಾಮಾಚಾರ ಪ್ರತಿಬಂಧಕ ಹಾಗೂ ನಿರ್ಮೂಲನೆ ವಿಧೇಯಕ - 2017", ತುಳುನಾಡಿನ ಭೂತ ಕೋಲಗಳಿಗೂ ಸಮಸ್ಯೆ ಉಂಟು ಮಾಡುವ ಸಾಧ್ಯತೆ ಇದೆ ಎಂದು ಪಾಲೆಮಾರ್ ಅಭಿಪ್ರಾಯ ವ್ಯಕ್ತಪಡಿಸಿದರು .