ಹೆಚ್ಚಾದ ಕಡಲ ಅಬ್ಬರ: ನಷ್ಟ ಅನುಭವಿಸುತ್ತಿರುವ ನಾಡದೋಣಿ ಮೀನುಗಾರರು
ಮಂಗಳೂರು, ಜುಲೈ 23: ಕರಾವಳಿಯಲ್ಲಿ ಮಳೆ ಬಿರುಸುಗೊಂಡ ಹಿನ್ನಲೆಯಲ್ಲಿ ಕಡಲ ಅಬ್ಬರ ಕೂಡ ಹೆಚ್ಚಾಗಿದೆ. ಈ ಪರಿಣಾಮ ನಾಡದೋಣಿ ಮೀನುಗಾರಿಕೆಯೂ ಸ್ಥಗಿತ ಗೊಂಡಿದೆ.
ಮಳೆಗಾಲದ ಮೀನುಗಾರಿಕಾ ನಿಷೇಧ ಅವಧಿ ಕೊನೆಗೊಳ್ಳುತ್ತಾ ಬರುತ್ತಿದೆ. ಆದರೆ ಕಡಲಲ್ಲಿ ಎದ್ದಿರುವ ತೂಫಾನ್ ನಿಂದಾಗಿ ನಾಡ ದೋಣಿ ಮೀನುಗಾರರು ಕಡಲಿಗಿಳಿಯದೇ ಭಾರೀ ನಷ್ಟ ಅನುಭವಿಸುತ್ತಿದ್ದಾರೆ.
ಮೀನುಗಾರಿಕೆಗೆ ವಿದಾಯ : ಕರ್ನಾಟಕ ಕರಾವಳಿಯ ಪಾಲಿಗೆ ಕರಾಳ ವರ್ಷ!
ಕಡಲಲ್ಲಿ ಏಳುತ್ತಿರುವ ಆಳೆತ್ತರದ ಅಲೆಗಳಿಂದಾಗಿ ಈ ಬಾರಿ ನಾಡದೋಣಿ ಮೀನುಗಾರರು ಸಮುದ್ರಕ್ಕೆ ಇಳಿಯಲೇ ಇಲ್ಲ. ಪ್ರತಿಕೂಲ ವಾತಾವರಣದಿಂದಾಗಿ ಕಡಲಿಗಿಳಿಯದ ನಾಡದೋಣಿ ಮೀನುಗಾರರಿಗೆ ಮತ್ಸ್ಯ ಕ್ಷಾಮ ಒಂದೆಡೆ ಬಾಧಿಸಿದರೆ ಇನ್ನೊಂದೆಡೆ ಪ್ರಕೃತಿ ವಿಕೋಪ ಗಾಯದ ಮೇಲೆ ಬರೆ ಎಳೆದಂತೆ ಆರ್ಥಿಕ ಹೊಡೆತ ನೀಡಿದೆ.
ರಾಜ್ಯ ಕರಾವಳಿಯಲ್ಲಿ ಮಳೆಗಾಲ ಸಂದರ್ಭ ಆಳ ಸಮುದ್ರ ಮೀನುರಾರಿಗೆಗೆ ನಿಷೇಧ ಹೇರಲಾಗುತ್ತದೆ. ಆದರೆ ಈ ನಿಷೇಧ ನಾಡದೋಣಿ ಮೀನುಗಾರಿಕೆಗೆ ಅನ್ವಯಿಸುವುದಿಲ್ಲ. ಈ ಹಿನ್ನೆಲೆಯಲ್ಲಿ ಮಳೆಗಾಲ ಆರಂಭವಾಯಿತೆಂದರೆ ಕರಾವಳಿಯಲ್ಲಿ ನಾಡದೋಣಿಗಳು ನೀರಿಗಿಳಿಯುತ್ತವೆ.
ಆದರೆ ಈ ಬಾರಿ ಪರಿಸ್ಥಿತಿ ನಾಡದೋಣಿ ಮೀನುಗಾರರ ಕೈ ಹಿಡಿದಿಲ್ಲ. ಇನ್ನು ಕೆಲವೇ ದಿನಗಳಲ್ಲಿ ಆಳ ಸಮುದ್ರ ಮೀನುಗಾರಿಕಾ ಅವಧಿ ಅರಂಭಗೊಳ್ಳಲಿದೆ. ಈ ನಡುವೆ ಗಳಿಕೆಯ ಕನಸು ಕಂಡಿದ್ದ ನಾಡ ದೋಣಿ ಮೀನುಗಾರರು ನಿರಾಸೆ ಅನುಭವಿಸುತ್ತಿದ್ದಾರೆ.
ಪ್ರಸ್ತುತ ಮಳೆಗಾಲದಲ್ಲಿ ಮಳೆಗಿಂತ ಗಾಳಿಯ ಅಬ್ಬರವೇ ಹೆಚ್ಚಾಗಿದೆ. ಈ ಪರಿಣಾಮ ಕಡಲಿನಲ್ಲಿ ಗಾಳಿಯ ಅಬ್ಬರವೇ ಆಧಿಕವಾಗಿದೆ. ಕಡಲಲ್ಲಿ ಉಂಟಾಗಿರುವ ತೂಫಾನ್ ನಿಂದಾಗಿ ಈ ಬಾರಿ ನಾಡದೋಣಿ ಮೀನುಗಾರು ಕಡಲಿಗೆ ಇಳಿದಿಲ್ಲ.
ಆದರೆ ಈ ನಡುವೆ ಹವಾಮಾನ ಎಚ್ಚರಿಕೆ ಲೆಕ್ಕಿಸದೇ ಸಮುದ್ರಕ್ಕಿಳಿದ ಕಡಲ ಮಕ್ಕಳು ಮತ್ಸ್ಯ ಕ್ಷಾಮದಿಂದ ಬರಿಗೈಯಲ್ಲಿ ಮರಳುವಂತಾಗಿದೆ. ಈ ಹಿನ್ನಲೆಯಲ್ಲಿ ನಷ್ಟ ಪರಿಹಾರಕ್ಕೆ ನಾಡದೋಣಿ ಮೀನುಗಾರರು ಸರಕಾರದತ್ತ ದೃಷ್ಠಿನೆಟ್ಟಿದ್ದಾರೆ.
ನಾಡದೋಣಿ ಗಳು ಈ ಬಾರಿ ಸಮುದ್ರಕ್ಕೆ ಇಳಿಯದ ಕಾರಣ ಮೀನು ಮಾರುಕಟ್ಟೆಗೆ ತಾಜಾ ಮೀನುಗಳೇ ಬರುತ್ತಿಲ್ಲ. ಮಂಗಳೂರು ಉಡುಪಿ, ಮಾರುಕಟ್ಟೆಗೆ ದೂರದ ತಮಿಳುನಾಡು, ಕೇರಳ, ಮಹಾರಾಷ್ಟ್ರದ ಮೀನು ಸಂರಕ್ಷಣಾ ಘಟಕಗಳಿಂದ ಮೀನುಗಳನ್ನು ಅಮದು ಮಾಡಿ ಮಾರಾಟ ಮಾಡಲಾಗುತ್ತಿದೆ.
ನಾಡದೋಣಿ ಮೀನುಗಾರರು ಕಡಲಿಗೆ ಇಳಿಯದ ಕಾರಣ ಮೀನು ಮಾರುಕಟ್ಟೆಯಲ್ಲಿ ತಾಜಾ ಮೀನುಗಳ ಕೊರತೆ ಉಂಟಾಗಿದೆ.