ಶಾಸಕರ ಬಲವಿದ್ದಲ್ಲಿ ಪವಿತ್ರ-ಅಪವಿತ್ರ ಪ್ರಶ್ನೆಯೇ ಇಲ್ಲ: ಎಚ್ಡಿಕೆ
ಮಂಗಳೂರು, ಮೇ 22: ಕುಮಾರಸ್ವಾಮಿ ಅವರ ಸಮ್ಮಿಶ್ರ ಸರ್ಕಾರ ಅಪವಿತ್ರ ಎಂದು ಅನೇಕರು ಹೇಳುತ್ತಾರೆ. ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಸರ್ಕಾರ ನಡೆಯುವುದು ಶಾಸಕರ ಬೆಂಬಲದ ಸಂಖ್ಯೆಯ ಆಧಾರದಲ್ಲಿ.
ಎಲ್ಲಿಯವರೆಗೆ ಶಾಸಕರ ಸಂಪೂರ್ಣ ಬೆಂಬಲ ಇರುತ್ತದೆಯೋ ಅಲ್ಲಿವರೆಗೆ ಸರ್ಕಾರ ನಡೆಯುತ್ತದೆ. ಇದು ಪ್ರಜಾಪ್ರಭುತ್ವದ ನಿಯಮ. ಇಲ್ಲಿ ಪವಿತ್ರ ಅಪವಿತ್ರ ಪ್ರಶ್ನೆಯೇ ಬರುವುದಿಲ್ಲ ಎಂದು ನಿಯೋಜಿತ ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ ಹೇಳಿದರು.
ಕುಮಾರಣ್ಣ ಪ್ರಮಾಣ ಅಸಾಂವಿಧಾನಿಕ : ತ್ವರಿತ ವಿಚಾರಣೆಗೆ ಸುಪ್ರೀಂ ನಕಾರ
ಧರ್ಮಸ್ಥಳಕ್ಕೆ ಭೇಟಿ ನೀಡಿ ಮಂಜುನಾಥಸ್ವಾಮಿಯ ದರ್ಶನ ಪಡೆದ ಅವರು, ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದರು.
In Pics: ಧರ್ಮಸ್ಥಳಕ್ಕೆ ಭೇಟಿ ನೀಡಿದ ನಿಯೋಜಿತ ಸಿಎಂ ಕುಮಾರಸ್ವಾಮಿ
ಮೈತ್ರಿ ಸರ್ಕಾರ ರಚನೆಯ ಪ್ರಸ್ತಾಪವಾದಾಗಿನಿಂದ ನಿರಂತರವಾಗಿ ಧಾರ್ಮಿಕ ಕ್ಷೇತ್ರಗಳಿಗೆ ತೆರಳಿ ದೇವರಲ್ಲಿ ಪೂಜೆ ಸಲ್ಲಿಸುತ್ತಿದ್ದೇನೆ. ಉತ್ತಮ ಮಳೆ ಆಗಿ, ಉತ್ತಮ ಬೆಳೆ ಸಿಗಲು ದೇವರ ಅನುಗ್ರಹ ಸಿಗಬೇಕು.
ಕುಮಾರಸ್ವಾಮಿ ಜತೆ ಪ್ರಮಾಣವಚನ ಸ್ವೀಕರಿಸುವವರು ಯಾರು?
ಇದರಿಂದ ನಾಡಿನ ಅರ್ಧ ಸಮಸ್ಯೆಗೆ ಪರಿಹಾರ ಸಿಗಲಿದೆ. ಹೀಗಾಗಿ ದೇವರಲ್ಲಿ ಪ್ರಾರ್ಥನೆ ಸಲ್ಲಿಸಿದ್ದೇನೆ ಎಂದು ಹೇಳಿದರು.
ಸರ್ಕಾರ ರಚನೆಗೆ ದೈವವೇ ಪ್ರೇರಣೆ
ರಾಹುಲ್ ಗಾಂಧಿ, ಸೋನಿಯಾ ಗಾಂಧಿ ಮತ್ತು ಕಾಂಗ್ರೆಸ್ ನಾಯಕರ ಮನವೊಲಿಸಿ ಸಮ್ಮಿಶ್ರ ಸರ್ಕಾರ ರಚನೆ ಮಾಡುವ ತೀರ್ಮಾನ ಸಾಧ್ಯ ಆಗಿರುವುದಕ್ಕೆ ಮೂಲ ಕಾರಣ ದೈವ ಪ್ರೇರಣೆ ಎನ್ನುವುದು ನನ್ನ ಅಭಿಪ್ರಾಯ.
ಅದರ ಹಿನ್ನೆಲೆಯಲ್ಲಿ ರಾಜ್ಯದ ಜವಾಬ್ದಾರಿಯನ್ನು ನಿರ್ವಹಣೆ ಮಾಡುವ ಮುಂಚೆ ನಾಡಿನ ಹಲವಾರು ಧಾರ್ಮಿಕ ಕ್ಷೇತ್ರಗಳಿಗೆ ಭೇಟಿ ನೀಡಿ, ದೇವರ ದರ್ಶನ ಮತ್ತು ಗುರುಹಿರಿಯರ ಆಶೀರ್ವಾದ ಪಡೆಯುತ್ತಿದ್ದೇನೆ. ಜವಾಬ್ದಾರಿ ನಿರ್ವಹಣೆಯಲ್ಲಿ ಕುಂದುಕೊರತೆಯಿಲ್ಲದೆ ನಾಡಿನ ಜನರ ಆಶಯಗಳನ್ನು ಕಾರ್ಯರೂಪಕ್ಕೆ ತರುವ ನಿಟ್ಟಿನಲ್ಲಿ ದೇವರಲ್ಲಿ ಪ್ರಾರ್ಥನೆ ಸಲ್ಲಿಸಿದ್ದೇನೆ.
ಇಬ್ಬರು ಉಪಮುಖ್ಯಮಂತ್ರಿ ನೇಮಕ ಎಚ್ ಡಿಕೆ ಗೆ ಸುತಾರಾಂ ಇಷ್ಟವಿಲ್ಲ!
ಎರಡೂ ಪಕ್ಷದ ಪ್ರಣಾಳಿಕೆ
ನಾಡಿನ ಜನತೆಗೆ ಚುನಾವಣೆಗೂ ಮುನ್ನ ಕಾಂಗ್ರೆಸ್ ಮುಖಂಡರು ಪ್ರಣಾಳಿಕೆ ನೀಡಿದ್ದರು. ನಾವೂ ಪ್ರಣಾಳಿಕೆಯಲ್ಲಿ ಕಾರ್ಯಕ್ರಮಗಳನ್ನು ಘೋಷಣೆ ಮಾಡಿದ್ದೆವು. ಇವೆಲ್ಲವನ್ನೂ ಜಾರಿಗೆ ತರಲು ಸರ್ಕಾರದ ಆರ್ಥಿಕ ಪರಿಸ್ಥಿತಿಯನ್ನು ಸದೃಢಗೊಳಿಸಬೇಕಿದೆ. ರಾಜ್ಯದ ಜನತೆ ಮೇಲೆ ಹೆಚ್ಚಿನ ತೆರಿಗೆ ಹಾಕದೆ ಸಾಲದ ಹೊರೆ ಹೊರಿಸದೆ ಕೆಲಸ ಮಾಡಬೇಕೆಂಬ ಕನಸು ಕಂಡಿದ್ದೇನೆ. ಅಭಿವೃದ್ಧಿಗೆ ಪೂರಕವಾಗಿ ನೆಮ್ಮದಿಯ ಬದುಕು ಸಾಗಿಸಲು ಕೆಲವು ಕಾರ್ಯಕ್ರಮಗಳನ್ನು ಅನುಷ್ಠಾನಕ್ಕೆ ತರಲು ಬಯಸಿದ್ದೇನೆ.
ದೇವರ ಅನುಗ್ರಹ ಬೇಕು
ನಮ್ಮ ಕನಸು ಈಡೇರಲು ಜನರ ಸಹಕಾರ ಬೇಕು. ಸಚಿವರು, ಶಾಸಕರು ಮತ್ತು ಎಲ್ಲ ಪಕ್ಷಗಳ ಮುಖಂಡರ ನೆರವು ಬೇಕು. ಅದೆಲ್ಲದಕ್ಕಿಂತ ಹೆಚ್ಚಾಗಿ ದೇವರ ಅನುಗ್ರಹ ಬೇಕು. ನಮ್ಮ ಕಣ್ಣಮುಂದೆ ಹಲವು ಪವಾಡಗಳು ಆಗಿವೆ. ಇವೆಲ್ಲವರೂ ದೇವರ ಅನುಗ್ರಹದಿಂದ ನಡೆದಿರುವುದು. ಅದೇ ನಂಬಿಕೆ ಆಧಾರದಲ್ಲಿ ಮುಂದಿನ ಐದು ವರ್ಷ ನಮ್ಮ ಸರ್ಕಾರ ಸುಭದ್ರವಾಗಿ ನಡೆಯಲಿದೆ. ನಾಡಿನ ಸಮಸ್ತ ಜನತೆಯ ಸಂಪೂರ್ಣ ಸಮಸ್ಯೆಗಳಿಗೆ ಪರಿಹಾರ ನೀಡುತ್ತೇವೆ.
ಪ್ರತಿಯೊಂದು ಕುಟುಂಬವೂ ನೆಮ್ಮದಿಯಿಂದ, ಸ್ವಾಭಿಮಾನದಿಂದ ಬದುಕುವಂತಾಗಬೇಕು. ಆ ವಾತಾವರಣ ನಿರ್ಮಾಣ ಮಾಡಲು ನನಗೆ, ನನ್ನ ಪಕ್ಷ ಮತ್ತು ಬೆಂಬಲ ನೀಡಿದ ಕಾಂಗ್ರೆಸ್ ಪಕ್ಷದ ಸ್ನೇಹಿತರಿಗೆ, ಮಂತ್ರಿಮಂಡಲಕ್ಕೆ ದೇವರ ಅನುಗ್ರಹ ಪಡೆದುಕೊಳ್ಳಲು ಬಂದಿದ್ದೇನೆ.
ದ್ವೇಷಕ್ಕೆ ಬಲಿಯಾಗಬೇಡಿ
ಜನರಿಗೆ ನನ್ನ ಮನವಿ. ಕರಾವಳಿ ಪ್ರದೇಶದ ಜನತೆ ಕೆಲವು ಸಣ್ಣಪುಟ್ಟ ಘರ್ಷಣೆಗೆ ಅವಕಾಶ ನೀಡುವ ಘಟನೆಗಳಿಗೆ ಆಸ್ಪದ ನೀಡಬಾರದು. ಎಲ್ಲ ಸಮುದಾಯಗಳ, ವಿಶೇಷವಾಗಿ ಯುವಕರ ಸಹಕಾರ ಬೇಕು.
ನಿಮ್ಮ ಬದುಕನ್ನು ಸರಿಯಾದ ದಿಕ್ಕಿನಲ್ಲಿ ಕೊಂಡೊಯ್ಯಲು ಹೊಸ ವಾತಾವರಣ ಸೃಷ್ಟಿ ಮಾಡಲು ಗಮನ ಇರಬೇಕು. ಕ್ಷುಲ್ಲಕ ವಿಷಯ ತೆಗೆದುಕೊಂಡು ದ್ವೇಷ ಹೊಡೆದಾಟಕ್ಕೆ ಬಲಿಯಾಗುವ ಘಟನೆಗಳು ಪುನರಾವರ್ತನೆಯಾಗುತ್ತಿವೆ. ಅದಕ್ಕೆ ಅವಕಾಶ ಕೊಡಬೇಡಿ. ನಾನು ನಿಮ್ಮ ಜತೆ ಇರುತ್ತೇನೆ. ಸಮಸ್ಯೆಗಳಿದ್ದರೆ ನೇರವಾಗಿ ಖುದ್ದು ದೂರವಾಣಿ ಕರೆ ಮಾಡಿ, ನೆರವಿಗೆ ಬರುತ್ತೇನೆ. ಕಾನೂನಿಗೆ ಭಂಗ ತರುವ, ಸಾಮಾಜಿಕ ಸಂಘರ್ಷಕ್ಕೆ ಎಡೆಮಾಡಿಕೊಡುವ ಭಾವೋದ್ವೇಗದ ವಿಷಯಗಳಿಗೆ ಆಸ್ಪದ ನೀಡಬೇಡಿ. ಕರಾವಳಿ ಪ್ರದೇಶದ ಏಳ್ಗೆಗೆ ಹೆಚ್ಚಿನ ಸಹಕಾರ ನೀಡಿ. ಇಲ್ಲಿನ ವಾತಾವರಣ ಕಲುಷಿತಗೊಳಿಸುವ ವ್ಯಕ್ತಿ ಯಾವುದೇ ಸಮಾಜದಲ್ಲಿ ಇದ್ದರೂ ಅವರ ಬಗ್ಗೆ ಎಚ್ಚರವಹಿಸುವ ಕೆಲಸವನ್ನು ಯುವಕರು ಮಾಡಬೇಕು.
ಪಕ್ಷ ವ್ಯಾಮೋಹ ತಪ್ಪಲ್ಲ
ವೈಯಕ್ತಿಕ ವಿಚಾರಗಳಲ್ಲಿ ಜನರಿಗೆ ಕೆಲವು ಪಕ್ಷ ನಾಯಕರ ಬಗ್ಗೆ ವ್ಯಾಮೋಹ ಇರುತ್ತದೆ. ಅದು ತಪ್ಪಲ್ಲ. ಆದರೆ ಆ ವ್ಯಾಮೋಹಕ್ಕಾಗಿ ನೀವು ಸಾಮಾಜಿಕ ಜಾಲತಾಣಗಳಲ್ಲಿ ನೀಡುವ ಪ್ರತಿಕ್ರಿಯೆಗಳನ್ನು ಬದಲಾವಣೆ ಮಾಡಿಕೊಳ್ಳಬೇಕು. ನಾವು ನೀವು ಸೇರಿ ದೇಶ ಕಟ್ಟುವ ಕೆಲಸ ಮಾಡೋಣ ಹೊರತು, ದೇಶ ಕೆಡಗುವ ಕೆಲಸ ಮಾಡವುದು ಬೇಡ.
ರಾಜ್ಯದಲ್ಲಿ ಸಮೃದ್ಧಿ, ಶಾಂತಿಯುತ ವಾತಾವರಣದಲ್ಲಿ ಪ್ರತಿ ಕುಟುಂಬ ನೆಮ್ಮದಿಯ ಬದುಕನ್ನು ಕಾಣುವ ದಿನಗಳನ್ನು ನೋಡುವ ದಿನಕ್ಕಾಗಿ ಬಯಸುತ್ತೇನೆ.
ನೀವೇ ಸಚಿವರನ್ನು ಆಯ್ಕೆ ಮಾಡಿದ್ದೀರಿ
ಹಲವಾರು ಮಾಧ್ಯಮಗಳಲ್ಲಿ ಗೊಂದಲ ಸೃಷ್ಟಿಸುವ ಕಟ್ಟುಕಥೆಗಳು ನಿರಂತರವಾಗಿ ಪ್ರಸಾರವಾಗುತ್ತಿದೆ. ಇದುವರೆಗೂ ಮಂತ್ರಿ ಮಂಡಲದ ರೂಪುರೇಷೆಗಳ ಚರ್ಚೆಗಳೇ ಶುರುವಾಗಿಲ್ಲ.
ಮಾಧ್ಯಮದ ಸ್ನೇಹಿತರು ಕೆಲವರನ್ನು ನೀವೇ ಸಚಿವರಾಗಿ ಆಯ್ಕೆ ಮಾಡಿದ್ದೀರಿ. ಕೆಲವರಿಗೆ ಮಂತ್ರಿ ಸ್ಥಾನವನ್ನೂ ನೀವೇ ನೀಡಿದ್ದೀರಿ. ಅದೆಲ್ಲ ನೋಡುತ್ತಿದ್ದೇನೆ. ಸಮ್ಮಿಶ್ರ ಸರ್ಕಾರದ ಮಂತ್ರಿಮಂಡಲದಲ್ಲಿ ಯಾರಿರಬೇಕು, ಯಾವ ಖಾತೆ ಇರಬೇಕು ಎಂಬ ಸುದ್ದಿ ನೀಡುತ್ತಿದ್ದೀರಿ. ಅದಾವುದೂ ಚರ್ಚೆಯಾಗಿಲ್ಲ.
ವಿಧಾನಸಭಾಧ್ಯಕ್ಷರ ಕುರಿತು ಗೊಂದಲಗಳಿಲ್ಲ. ಯಾವ ವಿಷಯವೂ ಚರ್ಚೆಯಾಗಿಲ್ಲ. ಐದು ವರ್ಷದ ಸುಭದ್ರ ಸರ್ಕಾರ ನೀಡಬೇಕು ಎಂಬ ರಾಹುಲ್ ಗಾಂಧಿ ಅವರ ಅಪೇಕ್ಷೆಗೆ ನಮ್ಮ ಚರ್ಚೆ ಸೀಮಿತವಾಗಿದೆ.
ದೇವರು ನಿರ್ಣಯ ಮಾಡುತ್ತಾನೆ
ನಮ್ಮ ಸರ್ಕಾರ ಮೂರು ತಿಂಗಳಲ್ಲಿ ಬಿದ್ದು ಹೋಗುತ್ತದೆ ಎಂದು ಬಿಜೆಪಿಯವರು ಅಭಿಪ್ರಾಯ ಹೇಳುತ್ತಿದ್ದಾರೆ. ಭಗವಂತನ ಇಚ್ಛೆ ಯಾರಿಗೆ ಗೊತ್ತು. ಅವನು ನಿರ್ಣಯ ಮಾಡುತ್ತಾನೆ. ನಾವೊಂದು ಬಯಸಿದರೆ ದೇವರೊಂದು ಅಂತಿಮವಾಗಿ ತೀರ್ಮಾನ ಕೊಡುತ್ತಾನೆ. ಬಿಜೆಪಿ ನಾಯಕರು ಆ ಭಾವನೆಯಲ್ಲೇ ಇರಲಿ. ಅವರ ಮೇಲೆ ಆಕ್ರೋಶ ಅಥವಾ ಅಸಮಾಧಾನ ಇಲ್ಲ.
ವಿಶ್ವಾಸಕ್ಕೆ ತೆಗೆದುಕೊಂಡೇ ಸರ್ಕಾರ
ಎರಡು, ಮೂರು ಅಥವಾ ಒಂದು ಡಿಸಿಎಂ ಹೀಗೆ ಯಾವ ವಿಷಯಗಳೂ ಚರ್ಚೆಯಾಗಿಲ್ಲ. ನಾವೆಲ್ಲ ಒಟ್ಟಾಗಿದ್ದೇವೆ. ಯಾವ ವಿಚಾರದಲ್ಲೂ ನನ್ನದು ಹೆಚ್ಚುಗಾರಿಕೆಯಿಲ್ಲ. ಪ್ರತಿ ಸಂಗತಿಯಲ್ಲೂ ನಮ್ಮ ಪಕ್ಷ ಹಾಗೂ ಕಾಂಗ್ರೆಸ್ನ ಎಲ್ಲರನ್ನೂ ವಿಶ್ವಾಸಕ್ಕೆ ತೆಗೆದುಕೊಂಡೇ ಕೆಲಸ ಮಾಡುತ್ತೇವೆ. ಸಣ್ಣಪುಟ್ಟ ವಿಷಯಗಳಲ್ಲಿ ಮನಸ್ತಾಪ ಉಂಟಾಗದಂತೆ ಎಚ್ಚರಿಕೆಯಿಂದ ನೋಡಿಕೊಳ್ಳುತ್ತೇವೆ.
ಎತ್ತಿನ ಹೊಳೆ ಅಕ್ರಮಕ್ಕೆ ಕಡಿವಾಣ
ದಕ್ಷಿಣ ಕನ್ನಡ ಜಿಲ್ಲೆಗೆ ಮಾರಕ ಎಂದು ಹೇಳಲಾಗುವ ಎತ್ತಿನಹೊಳೆ ಯೋಜನೆಯನ್ನು ನಿಲ್ಲಿಸುತ್ತೇನೆ ಎಂದು ಹೇಳಿರಲಿಲ್ಲ. ಆದರೆ ಯೋಜನೆಯಲ್ಲಿ ಅಕ್ರಮ ತಡೆಯುತ್ತೇನೆ ಎಂದಿದ್ದೆ. ಅದಕ್ಕೆ ನಾನು ಬದ್ಧನಾಗಿದ್ದೇನೆ. ಇಲ್ಲಿ ಮಾತ್ರವಲ್ಲ ರಾಜ್ಯದ ಯಾವುದೇ ಜನತೆಗೆ ಅನಾನುಕೂಲ ಉಂಟುಮಾಡುವ ಯೋಜನೆ ಜಾರಿಯಾಗುವುದಿಲ್ಲ. ಇಲ್ಲಿ ನಡೆದಿರುವ ಅಕ್ರಮಗಳನ್ನು ನಿಲ್ಲಿಸುತ್ತೇನೆ. ಯೋಜನೆ ಬಗ್ಗೆ ಜನರಲ್ಲಿ ಆತಂಕ ಬೇಡ.