ಮಂಗಳೂರು ಜೈಲಿನಲ್ಲಿ ಅಕ್ರಮಗಳಿಗೆ ಇಲ್ಲ ಕಡಿವಾಣ
ಮಂಗಳೂರು, ಜುಲೈ 30 : ಮಂಗಳೂರಿನ ಜಿಲ್ಲಾ ಕಾರಾಗೃಹದಲ್ಲಿ ಕಳೆದ ವರ್ಷ ಜೋಡಿ ಕೊಲೆ ಬಳಿಕ ರಾಜ್ಯ ಬಂಧಿಖಾನೆ ಇಲಾಖೆ ಕಾರಾಗೃಹದ ಭದ್ರತೆಗಾಗಿ ಕರ್ನಾಟಕ ಕೈಗಾರಿಕಾ ಭದ್ರತಾ ಪಡೆಯನ್ನು ನೇಮಿಸಿದೆ. ಆದರೂ ಮೊಬೈಲ್ ಬಳಕೆ ಸೇರಿದಂತೆ ಜೈಲಿನೊಳಗೆ ನಡೆಯುವ ಅಕ್ರಮ ಚಟುವಟಿಕೆಗಳಿಗೆ ಇನ್ನೂ ಕಡಿವಾಣ ಬಿದ್ದಲ್ಲ.
ಮಂಗಳೂರಿನ ಕೊಡಿಯಾಲ್ ಬೈಲ್ನಲ್ಲಿರುವ ಜಿಲ್ಲಾ ಕಾರಾಗೃಹದಲ್ಲಿ ಅಗತ್ಯ ಸಿಬ್ಬಂದಿ ಇಲ್ಲದೆ ಹಲವು ವರ್ಷಗಳಿಂದ ನಿರಂತರ ಹಲ್ಲೆ, ಸಂಘರ್ಷಗಳಿಗೆ ಕಾರಣವಾಗಿತ್ತು. ಕಳೆದ ನವೆಂಬರ್ ತಿಂಗಳಲ್ಲಿ ಜೈಲಿನಲ್ಲಿ ವಿಚಾರಣಾಧೀನ ಕೈದಿಗಳಾಗಿದ್ದ ಕುಖ್ಯಾತ ಪಾತಕಿ ಮಡೂರು ಇಸಾಬು ಹಾಗೂ ಗಣೇಶ ಶೆಟ್ಟಿ ಎಂಬವರ ಹತ್ಯೆ ನಡೆದಿತ್ತು.[ಮಂಗಳೂರು ಜೈಲಿನಲ್ಲಿ ಪೊಲೀಸರ ಮೇಲೆ ಕೈದಿಗಳ ದಾಳಿ]
ಆ ಬಳಿಕ ಕರ್ನಾಟಕ ಕೈಗಾರಿಕೆ ಭದ್ರತಾ ಪಡೆ ಸಿಬ್ಬಂದಿಯನ್ನು ಮಂಗಳೂರು ಕಾರಾಗೃಹಕ್ಕೆ ನೇಮಿಸಿತ್ತು. ಆದರೆ, ಈ ಸಿಬ್ಬಂದಿ ಕಾವಲು ಕಾದರೂ ಅಕ್ರಮಗಳ ಕಡಿವಾಣ ಹಾಕುವಲ್ಲಿ ಯಶಸ್ಸು ಸಾಧಿಸಿಲ್ಲ. ಜೈಲಿನೊಳಗೆ ಗಾಂಜಾ ಪೂರೈಕೆ ನಿಂತಿಲ್ಲ.
ವಿಚಾರಣಾಧೀನ ಕೈದಿಗಳನ್ನು ಭೇಟಿ ಮಾಡಲು ತೆರಳುವ ಸಾರ್ವಜನಿಕರನ್ನು ಕಟ್ಟುನಿಟ್ಟಾಗಿ ತಪಾಸಣೆ ನಡೆಸದೆ ನಿರ್ಲಕ್ಷ್ಯ ವಹಿಸುತ್ತಿರುವ ಕಾರಣ ನಿಷೇಧಿತ ವಸ್ತುಗಳು ಆರಾಮವಾಗಿ ಜೈಲಿನೊಳಗೆ ಸೇರುತ್ತಿವೆ. ಕಳೆದ ವಾರ ನಡೆದ ತಪಾಸಣೆ ವೇಳೆ ಗಾಂಜಾ ಪತ್ತೆಯಾಗಿದೆ.[ಕೈದಿಗಳ ಬಿಡುಗಡೆಗೆ ಹೊಸ ಮಾರ್ಗಸೂಚಿ]
ಗೇಟ್ ಬಳಿ ಮಾತ್ರ ಕಾವಲು: ಕೆಐಎಸ್ಎಫ್ ಸಿಬ್ಬಂದಿ ಹೊರಗಡೆಯಿಂದ ಇಡೀ ಜೈಲಿಗೆ ಕಾವಲು ಕಾಯಬೇಕು ಎಂಬ ನಿಯಮವಿದೆ. ಆದರೆ ಸಿಬ್ಬಂದಿ ಕೇವಲ ಗೇಟ್ ಎದುರುಗಡೆ ಮಾತ್ರ ತಪಾಸಣೆ ನಡೆಸುತ್ತಿದ್ದಾರೆ. ಹಳೇ ಜೈಲ್ ನ ಆವರಣ ಗೋಡೆಯಿಂದ ನಿಷೇಧಿತ ವಸ್ತುಗಳನ್ನು ಪೂರೈಕೆ ಮಾಡಲು ಸಾಕಷ್ಟು ಅವಕಾಶ ಇದೆಯಾದರೂ ಈ ಭಾಗದ ಕಾಂಪೌಂಡ್ ಹೊರಗಡೆ ಯಾವುದೇ ಭದ್ರತೆ ಕಂಡು ಬರುತ್ತಿಲ್ಲ.
ಕೈದಿಗಳಿಂದ ಪ್ರತ್ಯೇಕ ಅಡುಗೆ : ಕಾರಾಗೃಹದಲ್ಲಿ ವಿಚಾರಣಾಧೀನ ಕೈದಿಗಳಿಗೆ ಯಾವುದೇ ಹಸಿ ತರಕಾರಿ ಒಳಗಡೆ ಕೊಂಡೊಯ್ಯಲು ಅವಕಾಶ ಇಲ್ಲ. ಆದರೆ, ಹಲವರು ಒಳಗಡೆ ಮೊಟ್ಟೆ, ಈರುಳ್ಳಿ, ಟೊಮ್ಯಾಟೋ ಸೇರಿದಂತೆ ಅಡಿಗೆ ಸೊತ್ತುಗಳನ್ನು ಕೊಂಡೊಯ್ದು ಸ್ಟವ್ ಉರಿಸಿ ಆರಾಮವಾಗಿ ಆಮ್ಲೆಟ್ ತಯಾರಿಸಿ ತಿನ್ನುತ್ತಿದ್ದಾರೆ.[ಮಂಗಳೂರು ಜೈಲಿನಲ್ಲಿ ಮೊಬೈಲ್ ಜಾಮರ್ ಅಳವಡಿಕೆಗೆ ಕ್ರಮ]
ಜಾಮರ್ ನೆಪ ಮಾತ್ರಕ್ಕಿದೆ : ಕಳೆದ ಎರಡು ವರ್ಷಗಳಿಂದ ಮೊಬೈಲ್ ಜಾಮರ್ ಅಳವಡಿಕೆ ಬಗ್ಗೆ ಇದ್ದ ಗೊಂದಲ ನಿವಾರಣೆಯಾಗಿ ಕೊನೆಗೂ ಜಾಮರ್ ವ್ಯವಸ್ಥೆ ಅಳವಡಿಕೆಯಾಗಿದೆ. ಆದರೆ, ಈ ಸಮಸ್ಯೆ ಹೊರಗಿರುವ ಜನಸಾಮಾನ್ಯರಿಗೆ ಹೆಚ್ಚು ಬಾಧಕವಾಗುತ್ತಿದ್ದು, ಜೈಲ್ ಒಳಗಡೆ ನೆಟ್ ವರ್ಕ್ ಸರಾಗವಾಗಿ ದೊರೆಯುತ್ತಿದೆ.