ನಿಟ್ಟೆ ವಿಶ್ವವಿದ್ಯಾಲಯದ ಏಳನೇ ಘಟಿಕೋತ್ಸವದ ಸಂಭ್ರಮ
ಮಂಗಳೂರು, ಸೆಪ್ಟೆಂಬರ್ 11 : 'ಪದವಿ ಪಡೆಯುವುದರಲ್ಲಿ ವಿದ್ಯಾರ್ಥಿಗಳ ಶ್ರಮಕ್ಕೆ ಪೂರಕವಾಗಿ ಹೆತ್ತವರ ತ್ಯಾಗ ಬಹಳಷ್ಟಿದೆ. ತಮ್ಮ ವಿದ್ಯಾಭ್ಯಾಸಕ್ಕಾಗಿ ಪೋಷಕರು ಪಟ್ಟ ನಾನಾ ಬಗೆಯ ಶ್ರಮ, ಕಷ್ಟಗಳನ್ನು ಪದವೀಧರರು ನೆನಪಿಟ್ಟುಕೊಂಡು ವೃತ್ತಿ ಜೀವನದಲ್ಲಿ ಮುಂದುವರಿಯಬೇಕು' ಎಂದು ಎಸ್ಐಸಿಟಿ ಅಧ್ಯಕ್ಷ ಹಾಗೂ ಕೊಯಮತ್ತೂರು ಗಂಗಾ ಆಸ್ಪತ್ರೆಯ ಅಧ್ಯಕ್ಷ ಪ್ರೊ.ಎಸ್ ರಾಜಶೇಖರನ್ ಹೇಳಿದರು.
ಮಂಗಳೂರಿನ ದೇರಳಕಟ್ಟೆಯ ನಿಟ್ಟೆ ವಿಶ್ವವಿದ್ಯಾಲಯದ ಕೆಎಸ್ ಹೆಗ್ಡೆ ಆಡಿಟೋರಿಯಂನಲ್ಲಿ ನಡೆದ ಏಳನೇ ಘಟಿಕೋತ್ಸವದಲ್ಲಿ ಅವರು ಘಟಿಕೋತ್ಸವ ಭಾಷಣ ಮಾಡಿದರು.
'ನಿಟ್ಟೆ ವಿವಿಯಂತಹ ಗುಣಮಟ್ಟದ ಶಿಕ್ಷಣ ಕೊಡುವ ಸಂಸ್ಥೆಯ ಜೊತೆಗೆ ಅತ್ಯುತ್ತಮ ಬೋಧಕರ ಮಾರ್ಗದರ್ಶನದಲ್ಲಿ ಶಿಕ್ಷಣ ಪಡೆದಿರುವುದು ಪದವೀಧರರ ಅದೃಷ್ಟ. ಒಳ್ಳೆಯ ಗುರಿ ಮತ್ತು ಪರಿಶ್ರಮದೊಂದಿಗೆ ಮುಂದೆ ಸಾಗುವಂತೆ' ಅವರು ವಿದ್ಯಾರ್ಥಿಗಳಿಗೆ ಕರೆ ನೀಡಿದರು.
'ಮಾಡುವ ಕೆಲಸವನ್ನು ಪ್ರೀತಿಸಬೇಕು. ಕೆಲಸದಿಂದ ಬೇಸರಗೊಳ್ಳದೆ ಒತ್ತಡಗಳಿಂದ ಕಾರ್ಯ ನಿರ್ವಹಿಸದೆ ಇಚ್ಛಿಸುವ ಕ್ಷೇತ್ರದಲ್ಲಿ ಮುಂದುವರಿಯುವರಿಂದ ಭವಿಷ್ಯದಲ್ಲಿ ಯಶಸ್ವಿಯಾಗಲು ಸಾಧ್ಯ. ವಿವಿಧ ಕ್ಷೇತ್ರಗಳಲ್ಲಿ ಸಾಧಿಸಿದವರಿಂದ ಸಿಗುವ ಜ್ಞಾನವು ಜೀವನಕ್ಕೆ ದಾರಿದೀಪವಾಗಬಹುದು' ಎಂದರು.
ಘಟಿಕೋತ್ಸವದಲ್ಲಿ ಡಾಕ್ಟರ್ ಆಫ್ ಫಿಲೋಸಫಿಯಲ್ಲಿ 31, ವೈದ್ಯಕೀಯ ವಿಭಾಗದಲ್ಲಿ ಸ್ನಾತಕೋತ್ತರ ಮತ್ತು ಪದವಿ ವಿಭಾಗದ 221, ದಂತ ವೈದ್ಯಕೀಯ ವಿಭಾಗದ ಸ್ನಾತಕೋತ್ತರ ಮತ್ತು ಪದವಿ ಸೇರಿದಂತೆ 136, ಫಾರ್ಮಸಿಯ 123, ನರ್ಸಿಂಗ್ ವಿಭಾಗದ 111, ಫಿಸಿಯೋಥೆರಪಿಯ ಸ್ನಾತಕೋತ್ತರ ಮತ್ತು ಪದವಿ ವಿಭಾಗದ 33, ಅಲೈಡ್ ಹೆಲ್ತ್ ಸೈನ್ಸಸ್ನ 39, ಪತ್ರಿಕೋದ್ಯಮ ಮತ್ತು ಸಮೂಹ ಸಂವಹನ ವಿಭಾಗದ 15, ಬಯೋಲಾಜಿಕಲ್ ಸೈನ್ಸ್ನ 36 ಸೇರಿದಂತೆ ಒಟ್ಟು 745 ಮಂದಿ ವಿದ್ಯಾರ್ಥಿಗಳಿಗೆ ಪದವಿ ಪ್ರದಾನ ಮಾಡಲಾಯಿತು.
ಕಾರ್ಯಕ್ರಮದಲ್ಲಿ ಡಾಕ್ಟರ್ ಆಫ್ ಸೈನ್ಸ್ ಪಿಎಚ್ಡಿ ಗೌರವ ಡಾಕ್ಟರೇಟ್ ಅನ್ನು ಅಂತಾರಾಷ್ಟ್ರೀಯ ಮಕ್ಕಳ ಸೀಳ್ದುಟಿ ಫೌಂಡೇಶನ್ ಸ್ಥಾಪಕ ಜರ್ಮನಿಯ ಖ್ಯಾತ ಮೆಕ್ಸಿಲೋ ಫೇಷಿಯಲ್ ಸರ್ಜನ್, ಪ್ರೊ. ಹರ್ಮನ್ ಎಫ್.ಸೇಲರ್ ಮತ್ತು ಫಿಲಾಂತ್ರೋಫಿಸ್ಟ್ ಹಾಗೂ ಉದ್ಯಮಿ ಲಾಲ್ಚಂದ್ ಗಜ್ರಿಯಾ ಅವರಿಗೆ ಪ್ರದಾನ ಮಾಡಲಾಯಿತು.
ಕಾರ್ಯಕ್ರಮದಲ್ಲಿ ನಿಟ್ಟೆ ವಿವಿಯ ಸಹ ಕುಲಾಧಿಪತಿ ಪ್ರೊ. ಡಾ. ಶಾಂತಾರಾಮ ಶೆಟ್ಟಿ, ಉಪ ಕುಲಪತಿ ಪ್ರೊ.ಎಸ್.ರಮಾನಂದ ಶೆಟ್ಟಿ, ಕುಲಸಚಿವ ಪ್ರೊ.ಎಂ.ಎಸ್ ಮೂಡಿತ್ತಾಯ, ಪರೀಕ್ಷಾಂಗ ಕುಲಸಚಿವೆ ಡಾ. ಅಲ್ಕಾ ಕುಲಕರ್ಣಿ, ಕ್ಷೇಮ ಡೀನ್ ಡಾ. ಸತೀಶ್ ಕುಮಾರ್ ಭಂಡಾರಿ, ದಂತ ಮಹಾವಿದ್ಯಾಲಯದ ಡೀನ್ ಯು.ಎಸ್. ಕೃಷ್ಣ ನಾಯಕ್ ಮುಂತಾದವರು ಉಪಸ್ಥಿತರಿದ್ದರು.