ನವ ವಿವಾಹಿತೆ 'ಗೃಹ ಬಂಧನ', ಕೊಟ್ಟ ದೂರು ಏನಾಯಿತು?
ಮಂಗಳೂರು, ಜನವರಿ 5: ಆಕೆ ಹೆಸರು ವಂದನಾ. 5 ತಿಂಗಳ ಹಿಂದಷ್ಟೇ ಮದುವೆಯಾಗಿತ್ತು. ಹೊಸ ನಿರೀಕ್ಷೆ, ಹೊಸ ಬದುಕಿನ ಕನಸು ಕಂಡಿದ್ದ ಆಕೆಯನ್ನು ಅಪಹರಿಸಿ, ಗೃಹಬಂಧನದಲ್ಲಿ ಇರಿಸಲಾಗಿದೆ ಎಂದು ದೂರು ಸಲ್ಲಿಸಲಾಗಿದ್ದು, ಈ ಪ್ರಕರಣ ತಡವಾಗಿ ಬೆಳಕಿಗೆ ಬಂದಿದೆ.
ಧರ್ಮಸ್ಥಳ ಗ್ರಾಮದ ಪ್ರೀತಿ ನಗರ ನಿವಾಸಿ ಸೂರ್ಯಕಾಂತ ಭಟ್ ಮತ್ತು ಮಾಲಾ ಭಟ್ ದಂಪತಿ ಮಗಳು ವಂದನಾರನ್ನು ಉಜಿರೆ ನಿವಾಸಿ ಉಷಾ ರಾವ್ ಎಂಬುವವರ ಮಗ ಸುಬ್ರಹ್ಮಣ್ಯ ಜೊತೆ 2016ರ ಜುಲೈ 13ರಂದು ಉಜಿರೆಯ ಸೀತಾರಾಮ ಕಲಾ ಮಂದಿರದಲ್ಲಿ ಮದುವೆ ಮಾಡಿಕೊಡಲಾಗಿತ್ತು.
ಸುಳ್ಯ ತಾಲೂಕಿನ ಕಾವು ಸಮೀಪದ ಪಟ್ಟಾಜೆ ನಿವಾಸಿ ರಾಜೇಶ್ ಬಳ್ಳಕ್ಕುರಾಯ, ಈತನ ಪತ್ನಿ ವಿನಯ ಹಾಗೂ ಸುಳ್ಯ ತಾಲೂಕಿನ ಹರಿಹರ ಪಲ್ಲತಡ್ಕ ಸಮೀಪದ ಕಜ್ಜೋಡಿ ನಿವಾಸಿ ಎಸ್.ಶರತ್ ಎಂಬುವವರು ಕೆಲ ತಿಂಗಳಲ್ಲೇ ಆಕೆಯನ್ನು ಅಪಹರಿಸಿದ್ದಾರೆ. ಆ ಮೂಲಕ ಗಂಡ ಹಾಗೂ ಹೆತ್ತವರಿಂದ ಬೇರ್ಪಡಿಸಿ ಗೃಹಬಂಧನದಲ್ಲಿರಿಸಿದ್ದಾರೆ ಎಂದು ಪುತ್ತೂರು ಗ್ರಾಮಾಂತರ ಠಾಣಾ ಪೊಲೀಸರಿಗೆ ದೂರು ನೀಡಲಾಗಿದೆ.
ವಂದನಾರ ಪೋಷಕರು ಮಗಳನ್ನು ಕಳುಹಿಸುವಂತೆ ಕೇಳಿಕೊಂಡಾಗ ರಾಜೇಶ್ ಮತ್ತು ಈತನ ಮನೆಯವರು ಬಂದೂಕು ತೋರಿಸಿ ಜೀವಬೆದರಿಕೆಯೊಡ್ಡಿದ್ದಾರೆ ಎಂದು ಎಸ್ಪಿಗೆ ನೀಡಿದ ದೂರಿನಲ್ಲಿ ವಿವರಿಸಲಾಗಿದೆ. ಆಗಸ್ಟ್ 16ರಂದು ರಾಜೇಶ್, ಆತನ ಪತ್ನಿ ಹಾಗೂ ವಂದನಾರ ಚಿಕ್ಕಮ್ಮ ವಿನಯ ಹಾಗೂ ಎಸ್.ಶರತ್ ಸೇರಿ ಆಕೆಯನ್ನು ಅಪಹರಿಸಿ, ಗೃಹಬಂಧನದಲ್ಲಿರಿಸಿದ್ದಾರೆ ಎಂದು ಪೊಲೀಸರಿಗೆ ನೀಡಿದ ದೂರಿನಲ್ಲಿ ಆರೋಪಿಸಿದ್ದಾರೆ.
ವಂದನಾರನ್ನು ಗೃಹಬಂಧನದಲ್ಲಿಟ್ಟಿರುವ ವ್ಯಕ್ತಿಗಳು ಅಕೆ ತಾಯಿಗೆ ದೂರವಾಣಿ ಕರೆ ಮಾಡಿ, '20 ಲಕ್ಷ ರೂಪಾಯಿ ಕೊಡದಿದ್ದಲ್ಲಿ ನಿನ್ನ ಮಗಳನ್ನು ಮಾರಾಟ ಮಾಡುತ್ತೇವೆ' ಎಂದು ಬೆದರಿಸುತ್ತಿರುವುದಾಗಿ ದೂರಿನಲ್ಲಿ ವಿವರಿಸಲಾಗಿದೆ.