ಮೂಡಬಿದಿರೆ: ನೆಹರೂ ಜಾತ್ಯಾತೀತ ಭಾರತ ನಲುಗುತ್ತಿದೆ-ಮಣಿಶಂಕರ್ ಅಯ್ಯರ್
ಮಂಗಳೂರು, ನವೆಂಬರ್ 14: ಮುಸ್ಲಿಂರನ್ನು ಅನ್ಯರಂತೆ ಕಾಣುವ ಮನಸ್ಥಿತಿ ನಿರ್ಮಾಣಗೊಳ್ಳುತ್ತಿದೆ. ಕೋಮುವಾದಿಗಳ ಸಂಕುಚಿತ ಮನೋಭಾವನೆಯಿಂದ ನೆಹರೂ ಕಂಡಿದ್ದ ಜಾತ್ಯಾತೀತ ಭಾರತ ನಲುಗುತ್ತಿದೆ ಎಂದು ಕೇಂದ್ರ ಮಾಜಿ ಸಚಿವ ಮಣಿಶಂಕರ್ ಅಯ್ಯರ್ ಕಿಡಿಕಾರಿದ್ದಾರೆ.
ಮೂಡಬಿದರೆಯ ಆಳ್ವಾಸ್ ಇಂಜಿನಿಯರಿಂಗ್ ಕಾಲೇಜಿನ ರೋಸ್ಟ್ರುಂ ಸ್ಪೀಕರ್ ಕ್ಲಬ್ ಮಿಜಾರಿನಲ್ಲಿರುವ ಎಐಇಟಿ ಅಡಿಟೋರಿಯಂನಲ್ಲಿ ಇಂದು ಅಯೋಜಿಸಿದ್ದ ನೆಹರೂ ಚಿಂತನೆಗಳ ಕುರಿತ ವಿಶೇಷ ಉಪನ್ಯಾಸ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ಕಾರ್ಯಕ್ರಮದಲ್ಲಿ ಸಂಪನ್ಮೂಲ ವ್ಯಕ್ತಿಯಾಗಿ ಭಾಗವಹಿಸಿದ್ದ ಅಯ್ಯರ್, "ಜಾತಿ, ಧರ್ಮದ ತಾರಾತಮ್ಯದಲ್ಲಿ ರಾಷ್ಟ್ರೀಯತೆಯನ್ನು ಅಳೆಯುವುದು ಸಲ್ಲದು ಎನ್ನುವುದನ್ನು ನೆಹರೂ ಅಚಲವಾಗಿ ನಂಬಿದ್ದರು. ಯಾವ ವ್ಯಕ್ತಿ ಇತರ ಭಾರತೀಯನನ್ನು ಮುಕ್ತ ಮನಸ್ಸಿನಿಂದ ಒಪ್ಪಿಕೊಳ್ಳುತ್ತಾನೋ, ಆತನೇ ನಿಜವಾದ ಭಾರತೀಯ ಎಂದು ನೆಹರು ನಂಬಿದ್ದರು," ಎಂದು ಅವರು ಹೇಳಿದರು.
"ನೈಜ್ಯ ಜಾತ್ಯತೀತತೆ ಮನೋಭಾವನೆಯಿಂದಲೇ ಪ್ರಜಾಪ್ರಭುತ್ವ ನಿಜಾರ್ಥದಲ್ಲಿ ಕಾಣಿಸಿಕೊಳ್ಳಲು ಸಾಧ್ಯ ಎನ್ನುವುದು ಅವರ ಪ್ರತಿಪಾಧನೆಯಾಗಿತ್ತು. ನೆಹರೂ ಅವರ ಚಿಂತನೆಗಳು ಮೌಲ್ಯಯುತವಾಗಿದ್ದು, ಸರ್ವಧರ್ಮವನ್ನು ಸಮಾನತೆಯ ದೃಷ್ಟಿಕೋನದಿಂದ ಮುನ್ನಡೆಸುವಂತದ್ದು," ಎಂದು ಅವರು ಅಭಿಪ್ರಾಯ ಪಟ್ಟರು.
"ಇಂದು ಒಂದು ಸಿದ್ದಾಂತದ ಹಿಂದೆ ಬಿದ್ದು, ಮುಸ್ಲಿಂರನ್ನು ಅನ್ಯರಂತೆ ಕಾಣುವ ಮನಸ್ಥಿತಿ ನಿರ್ಮಾಣಗೊಳ್ಳುತ್ತಿದೆ. ಕೋಮುವಾದಿಗಳ ಸಂಕುಚಿತ ಮನೋಭಾವನೆಯಿಂದ ನೆಹರೂ ಕಂಡಿದ್ದ ಜಾತ್ಯಾತೀತ ಭಾರತ ನಲುಗುತ್ತಿದೆ," ಎಂದು ಆಕ್ರೋಶ ವ್ಯಕ್ತಪಡಿಸಿದ ಅವರು, "ಸಾಮಾಜಿಕ ಜಾಲತಾಣಗಳನ್ನು ಬಳಸಿ ಮನಸ್ಸುಗಳನ್ನು ವಿಕೃತಗೊಳಿಸುವ ಕೆಲಸಗಳು ನಡೆಯುತ್ತಿವೆ. ನೆಹರೂ ಅವರನ್ನು ತಾರ್ಕಿಕವಾಗಿ ವಿಮರ್ಶಿಸುವ ಬದಲು ಸಾಮಾಜಿಕ ಜಾಲತಾಣಗಳಲ್ಲಿ ಇಂದು ಬುದ್ಧಹೀನರ ರೀತಿಯಲ್ಲಿ ಟೀಕಿಸಲಾಗುತ್ತಿದೆ. ಇಂತಹದೊಂದು ಬೆಳವಣಿಗೆ ಸಭ್ಯ ಸಮಾಜದ ಲಕ್ಷಣವಲ್ಲ," ಎಂದು ಕಿಡಿಕಾರಿದರು.
ಬಳಿಕ ವಿದ್ಯಾರ್ಥಿಗಳೊಂದಿಗೆ ಸಂವಾದದಲ್ಲಿ ಭಾಗವಹಿಸಿದರು.ಈ ಸಂದರ್ಭದಲ್ಲಿ ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಟ್ರಸ್ಟಿ ವಿವೇಕ್ ಆಳ್ವ, ಆಳ್ವಾಸ್ ಪದವಿ ಕಾಲೇಜಿನ ಪ್ರಾಂಶುಪಾಲ ಡಾ.ಕುರಿಯನ್, ರೋಸ್ಟ್ರುಂ ಸಂಚಾಲಕ ರೋಹನ್ ಉಪಸ್ಥಿತರಿದ್ದರು.