ದಕ್ಷಿಣ ಕನ್ನಡ-ಕೊಡಗು ಗಡಿಯಲ್ಲಿ 700 ಜನರ ರಕ್ಷಣೆ
ಮಂಗಳೂರು, ಆಗಸ್ಟ್ 19 : ದಕ್ಷಿಣ ಕನ್ನಡ ಜಿಲ್ಲೆಯ ಗಡಿಭಾಗದ ಕೊಡಗಿನ ಜೋಡುಪಾಳದಲ್ಲಾದ ಜಲಪ್ರಳಯ ದುರಂತ ದ್ರಶ್ಯಗಳು ಒಂದೊಂದಾಗಿ ಬೆಳಕಿಗೆ ಬರುತ್ತಿದೆ. ಜೋಡುಪಾಳದಲ್ಲಿ ಅಪಾಯದಲ್ಲಿದ್ದ ಹಾಗು ಸಂತ್ರಸ್ತರಾದ 700 ಕ್ಕೂಹೆಚ್ಚು ಜನರ ರಕ್ಷಣೆ ಮಾಡಿ ಸುರಕ್ಷಿತ ಸ್ಥಳಕ್ಕೆ ಕರೆತರಲಾಗಿದೆ.
ಜೋಡುಪಾಳದ ದುರಂತ ಮಾನವ ಸಂಬಂಧಗಳನ್ನೂ ತಟ್ಟುವ ಕೆಲ ಅಪರೂಪದ ಪ್ರಸಂಗಗಳಿಗೂ ಸಾಕ್ಷಿಯಾಗಿದೆ. ಜೋಡುಪಾಳದ ಮನೆಯೊಂದರಲ್ಲಿ ಅನಾಥವಾಗಿ ಉಳಿದಿದ್ದ ಮುದ್ದಿನ ಸಾಕು ನಾಯಿಯನ್ನು ರಕ್ಷಣೆ ಮಾಡಲು ಯುವಕ ಸಾವು ಬದುಕಿನ ದಾರಿಯ ನಡುವೆ ಮಡಿಕೇರಿಯಿಂದ 15 ಕಿ.ಮೀ ನಡೆದುಕೊಂಡು ಬಂದು ನಾಯಿಯನ್ನು ರಕ್ಷಣೆ ಮಾಡಿದ್ದಾನೆ.
ಗುಡ್ಡ ಕುಸಿದ ಜೋಡುಪಾಳದಲ್ಲಿ ಇಂದೂ ರಕ್ಷಣಾ ಕಾರ್ಯ
ಕಿಶೋರ್ ಭರತ್ ಎಂಬ ಯುವಕ ಜೋಡುಪಾಳದ ನೆರೆ ಆವರಿಸಿದ ಮನೆಯಲ್ಲಿ ಕಳೆದ ಮೂರು ದಿನಗಳಿಂದ ಗೂಡಿನೊಳಗಿದ್ದ ತನ್ನ ಮುದ್ದಿನ ನಾಯಿ ಸ್ಯಾಂಡಿಯನ್ನು ಕಾಣಲು ಗುಡ್ಡ ಕುಸಿತದ ಪ್ರದೇಶಗಳ ನಡುವೆ ರಾತ್ರಿ ಹಗಲು ನಡೆದುಕೊಂಡು ಬಂದಿದ್ದಾನೆ.
ಸ್ಯಾಂಡಿ ತನ್ನ ಪ್ರೀತಿಯ ಒಡೆಯ ಕಿಶೋರ್ ಭರತ್ ರನ್ನು ಕಂಡ ಕ್ಷಣ ಖುಷಿಯಾಗಿದ್ದು ಓಡೋಡಿ ಬಂದಿದೆ. ಈ ದೃಶ್ಯವನ್ನು ಕಂಡು ಎನ್ಡಿಆರ್ಎಫ್ ಸಿಬ್ಬಂದಿಗಳು ಸಂತಸ ಪಟ್ಟರು. ಒಡೆಯನ ಜೊತೆ ಸ್ಯಾಂಡಿ ಮಡಿಕೇರಿಗೆ ತೆರಳಿದೆ.