ಮಂಗಳೂರು ಪ್ರವೇಶಿಸಿದ ‘ನವನಾಥ್ ಝುಂಡಿ'ಯ ವೈಭವ
ಮಂಗಳೂರು,ಫೆಬ್ರವರಿ,27: ಕದಳೀ ಶ್ರೀ ಯೋಗೇಶ್ವರ (ಜೋಗಿ) ಮಠ ಪೀಠಕ್ಕೆ ನಿಯುಕ್ತರಾದ ನೂತನ ರಾಜ ಶ್ರೀ ಶ್ರೀ ಯೋಗಿ ನಿರ್ಮಲ್ ನಾಥ್ ಜೀ ಅವರನ್ನೊಳಗೊಂಡ ಅಖಿಲ ಭಾರತ ವರ್ಷೀಯ ಅವಧೂತ್ ಬೇಖ್ ಬಾರಹ ಪಂಥ್ 'ನವನಾಥ್ ಝುಂಡಿ' ಶನಿವಾರ ಬೆಳಿಗ್ಗೆ ಕೊಟ್ಟಾರ ಚೌಕಿಯ ಮೂಲಕ ಮಂಗಳೂರು ಪುರಪ್ರವೇಶ ಮಾಡಿದೆ
ಕೊಟ್ಟಾರದಲ್ಲಿ 'ನವನಾಥ್ ಝಂಡಿ'ಯನ್ನು ಜೋಗಿ ಸಮಾಜ ಬಾಂಧವರು ಸೇರಿದಂತೆ ಗಣ್ಯರು ಸಂಪ್ರದಾಯಿಕವಾಗಿ ಸ್ವಾಗತಿಸಿದರು. ಫೆ. 25ರಂದು ಮೂಲ್ಕಿಯಿಂದ ಪಣಂಬೂರಿಗೆ ಬಂದ ಝುಂಡಿಯು ಶ್ರೀ ನಂದನೇಶ್ವರ ದೇವಸ್ಥಾನದಲ್ಲಿ ತಂಗಿದ್ದು, ರಾಷ್ಟ್ರೀಯ ಹೆದ್ದಾರಿ ಮೂಲಕ ಕೊಟ್ಟಾರದಿಂದ ಮಂಗಳೂರು ಪ್ರವೇಶಿಸಿದೆ.
ಕೊಟ್ಟಾರದಲ್ಲಿ ವಿಠಲ್ದಾಸ್ ತಂತ್ರಿ, ಕದಳೀ ಶ್ರೀ ಯೋಗೇಶ್ವರ (ಜೋಗಿ) ಮಠ ಪರ್ಯಾಯ ರಾಜ ಪಟ್ಟಾಭಿಷೇಕ ಮಹೋತ್ಸವ ಸಮಿತಿ ಅಧ್ಯಕ್ಷ ಹೆಚ್. ಕೆ. ಪುರುಷೋತ್ತಮ್, ಕರ್ನಾಟಕ ಜೋಗಿ ಸಮಾಜ ಸುಧಾರಕ ಸಂಘದ ಅಧ್ಯಕ್ಷ ಕಿರಣ್ ಕುಮಾರ್ ಜೋಗಿ ಹೀಗೆ ಹಲವಾರು ಗಣ್ಯರು ಅವರನ್ನು ಬಹಳ ಆತ್ಮೀಯವಾಗಿ ಬರಮಾಡಿಕೊಂಡರು. ಬನ್ನಿ 'ನವನಾಥ್ ಝುಂಡಿ'ಯ ವೈಭವ ನೋಡೋಣ, ಕಣ್ತುಂಬಿಕೊಳ್ಳೋಣ.[ಮಾ.6ಕ್ಕೆ ಮೈಸೂರಲ್ಲಿ 1008 ಕೋಟಿ ಹನುಮಾನ್ ಚಾಲೀಸಾ]
‘ನವನಾಥ್ ಝುಂಡಿ' ವೈಭವ
ಕೊಂಬು ಕಹಳೆ, ನಾಸಿಕ್ ಬ್ಯಾಂಡ್, ಕಲ್ಲಡ್ಕ ಗೊಂಬೆಗಳನ್ನೊಳಗೊಂಡ ಝುಂಡಿ ಮೆರವಣಿಗೆಯು ಪೂರ್ಣಕುಂಭ ಸ್ವಾಗತದೊಂದಿಗೆ ಉರ್ವಸ್ಟೋರ್ ಶ್ರೀ ಮಹಾಗಣಪತಿ ದೇವಸ್ಥಾನ, ಲೇಡಿಹಿಲ್, ಕುದ್ರೋಳಿ ಶ್ರೀ ಗೋಕರ್ಣನಾಥ ದೇವಸ್ಥಾನ, ರಥಬೀದಿ ಶ್ರೀ ವೆಂಕಟರಮಣ ದೇವಸ್ಥಾನ, ಕದ್ರಿ ಮಂಜುನಾಥ ದೇವಸ್ಥಾನ ಮೂಲಕ ಕದಳೀ ಮಠ ತಲುಪಿತು. ಝುಂಡಿಯಲ್ಲಿ ಸಾಗಿ ಬಂದ ಯೋಗಿಗಳಿಗೆ ಸಾರ್ವಜನಿಕರು ಪಾದೆಪೂಜೆ ನೆರವೇರಿಸಿ ಹೂ ಹಾರ, ಹಣ್ಣು ಹಂಪಲು ಸಮರ್ಪಿಸಿ ಆರ್ಶೀವಾದ ಪಡೆದುಕೊಂಡರು.
'ನವನಾಥ್ ಝುಂಡಿ'ಯಲ್ಲಿ ಎಷ್ಟು ಜನ ಪದವೀಧರರಿದ್ದಾರೆ?
'ನವನಾಥ್ ಝುಂಡಿ'ಯಲ್ಲಿ 2 ವೈದ್ಯ, 3 ಇಂಜಿನಿಯರ್, 19 ಸ್ನಾತಕೋತ್ತರ ಪದವೀದರ ಸನ್ಯಾಸಿಗಳಿದ್ದಾರೆ, ಅಲ್ಲದೆ ಹಠಯೋಗಿಗಳು ಸೇರಿದಂತೆ ಸುಮಾರು 500ಕ್ಕೂ ಅಧಿಕ ಸಾಧುಗಳು ಝಂಡಿಯಲ್ಲಿದ್ದಾರೆ. ಯೋಗಿ ರಾಜೇಂದ್ರನಾಥ್ ಕಳೆದ 15ವರ್ಷಗಳಿಂದ ನಿಂತುಕೊಂಡೇ ಹಠಯೋಗ ನಿರತರಾಗಿದ್ದಾರೆ.
ನಡೆಯುವ ವಿಶೇಷ ಕಾರ್ಯಕ್ರಮಗಳು ಯಾವುವು?
ಶನಿವಾರದಿಂದ ಮಾರ್ಚ್ 7ರ ವರೆಗೆ ದಿನ ನಿತ್ಯ ಸಂಜೆ ಕದಳೀ ಮಠದಲ್ಲಿ ಧಾರ್ಮಿಕ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮ ನಡೆಯಲಿದೆ. ಫೆ.28ರಂದು ಸಂಜೆ 3.30ಕ್ಕೆ ಮಂಗಳಾದೇವಿ ದೇವಸ್ಥಾನದಿಂದ ಹೊರಡುವ "ಹೊರೆ ಕಾಣಿಕೆ" ಯಾತ್ರೆ ಕಂಕನಾಡಿ, ಮಲ್ಲಿಕಟ್ಟೆ, ಕದ್ರಿ ದೇವಸ್ಥಾನ ಮಾರ್ಗವಾಗಿ ಕದಳಿ ಮಠಕ್ಕೆ ತಲುಪಲಿದೆ.
ನಿರ್ಮಲ್ ನಾಥ್ ಜೀಗೆ ಪಟ್ಟಾಭಿಷೇಕ ಯಾವಾಗ?
ಮಾರ್ಚ್ 7ರಂದು ಮೇಷ ಲಗ್ನ ಸುಮುಹೂರ್ತದಲ್ಲಿ ಯೋಗಿ ನಿರ್ಮಲ್ನಾಥ್ಜೀಗೆ ಪಟ್ಟಾಭಿಷೇಕ ಮಹೋತ್ಸವ ನಡೆಯಲಿದೆ.
ಕದ್ರಿ ದೇವಸ್ಥಾನದ ಜಾತ್ರೆ ಸಮಯದ ಪುರಾತನ ಪದ್ಧತಿ ಯಾವುದು?
ಕದಳಿ ಯೋಗೇಶ್ವರ (ಜೋಗಿ) ಮಠದ ಪೀಠಾಧಿಪತಿಗಳಿಗೆ ಕದ್ರಿ ದೇವಸ್ಥಾನದ ಜಾತ್ರೆಗಳಲ್ಲಿ ವಿಶಿಷ್ಟ ಪಾತ್ರವಿದೆ. ಕದ್ರಿ ರಥೋತ್ಸವದ ದಿನ ಪೀಠಾಧಿಪತಿಗಳು ಬ್ರಹ್ಮರಥದ ಎದುರಿನಲ್ಲಿ ಕುದುರೆಯನ್ನೇರಿ ರಥದ ಮುಂದೆ ಚಲಿಸುವ ಪದ್ಧತಿ ಮತ್ಸ್ಯೆಂದ್ರನಾಥ, ಗೋರಕ್ಷನಾಥರ ಸಮಯದಿಂದ ನಡೆದು ಬಂದಿದೆ.
ಕದ್ರಿ ಮಂಜುನಾಥ ಜಾತ್ರೆ ಪ್ರಾರಂಭಿಸುವ ಮೊದಲಿನ ಕಾರ್ಯ?
ಕದ್ರಿ ಮಂಜುನಾಥ ದೇವಸ್ಥಾನದ ಜಾತ್ರೆ ಪ್ರಾರಂಭದ ಮುನ್ನ ದಿನ ಕದಳೀ ಪೀಠಾಧಿಪತಿಗಳು ಮಂಗಳಾದೇವಿ ದೇವಸ್ಥಾನಕ್ಕೆ ತೆರಳಿ ಫಲ, ಪುಷ್ಪ, ಸೀರೆ, ಅರ್ಪಿಸಿ ಕದ್ರಿ ದೇವಸ್ಥಾನದ ಜಾತ್ರೆ ನಿರ್ವಿಘ್ನವಾಗಿ ನಡೆಯಲಿ ಎಂದು ಪ್ರಾರ್ಥಿಸುವ ಪದ್ಧತಿ ಇಂದಿಗೂ ನಡೆದುಕೊಂಡು ಬಂದಿದೆ.
ನವನಾಥ ಝುಂಡಿಗೆ ಕೆಲಕಾಲ ವಿಶ್ರಾಂತಿ
ನವನಾಥ ಝುಂಡಿಯು ಮಂಗಳೂರು ನಗರದಲ್ಲಿ ಸಾಗುವ ದಾರಿ ನಡುವೆ ಕುದ್ರೋಳಿಯ ಗೋಕರ್ಣನಾಥ ಕ್ಷೇತ್ರ ಹಾಗೂ ರಥಬೀದಿಯ ವೆಂಕಟರಮಣ ದೇವಸ್ಥಾನದಲ್ಲಿ ಅತಿಥ್ಯ ಸ್ವೀಕರಿಸಿ ಸ್ವಲ್ಪಹೊತ್ತು ವಿಶ್ರಮಿಸುತ್ತದೆ. ಇದು ನಾಥಪಂಥಕ್ಕೂ ಈ ಎರಡು ಕ್ಷೇತ್ರಗಳಿಗೂ ಇರುವ ಸಂಬಂಧವನ್ನು ತೋರಿಸುತ್ತದೆ.
ವೆಂಕಟರಮಣ ದೇವಸ್ಥಾನದಲ್ಲಿರುವ ಮೂರ್ತಿಯನ್ನು ಯಾರು ನೀಡಿದ್ದು?
ವೆಂಕಟರಮಣ ದೇವಸ್ಥಾನದಲ್ಲಿ ಪ್ರತಿಷ್ಠಾಪಿಸಲ್ಪಟ್ಟಿರುವ ಶ್ರೀ ವೀರವೆಂಕಟೇಶ ದೇವರ ಮೂರ್ತಿ 1804 ನೇ ಇಸವಿಯಲ್ಲಿ ನಾಥ ಸನ್ಯಾಸಿಯೊಬ್ಬರು ನೀಡಿರುವುದಕ್ಕೆ ಪುರಾವೆ ಲಭ್ಯವಿದೆ.
ಫೆ. 28ರಂದು ಧಾರ್ಮಿಕ ಸಭೆ..
ಫೆ. 28ರಂದು ಸಂಜೆ ಕದಳೀ ಮಠದಲ್ಲಿ ಧಾರ್ಮಿಕ ಸಭೆ ನಡೆಯಲಿದ್ದು, ಅಖಿಲ ಭಾರತ ವರ್ಷೀಯ ಅವಧೂತ್ ಬೇಖ್ ಬಾರಹ ಪಂಥ್ ಯೋಗಿ ಮಹಾಸಭಾ ಹರಿದ್ವಾರ ಇದರ ಅಧ್ಯಕ್ಷ ಯೋಗಿ ಶ್ರೀ ಮಹಂತ್ ಆದಿತ್ಯನಾಥ್ ಜೀ ಆಶೀರ್ವಚನ ನೀಡಲಿದ್ದಾರೆ ಎಂದು ಕದಳೀ ಶ್ರೀ ಯೋಗೇಶ್ವರ (ಜೋಗಿ) ಮಠ ಪರ್ಯಾಯ ರಾಜ ಪಟ್ಟಾಭಿಷೇಕ ಮಹೋತ್ಸವ ಸಮಿತಿ ಅಧ್ಯಕ್ಷ ಹೆಚ್. ಕೆ. ಪುರುಷೋತ್ತಮ್ ತಿಳಿಸಿದ್ದಾರೆ.