ಪುತ್ತೂರು: ನೂಪುರ ಭ್ರಮರಿ ನಾಟ್ಯ ಚಿಂತನಕ್ಕೆ ತೆರೆ
ಮಂಗಳೂರು, ಏ. 25 : ನೂಪುರ ಭ್ರಮರಿ ಮತ್ತು ಪುತ್ತೂರಿನ ಶ್ರೀ ಮೂಕಾಂಬಿಕಾ ಕಲ್ಚರಲ್ ಅಕಾಡೆಮಿಯ ಸಹಯೋಗದಲ್ಲಿ ನಡೆಯುತ್ತಿರುವ 'ನಾಟ್ಯ ಚಿಂತನ' ಎಂಬ ನಾಟ್ಯಶಾಸ್ತ್ರದ ಅಧ್ಯಯನಪೂರ್ಣ ಪ್ರಾಯೋಗಿಕ ಶಿಬಿರವು ಶನಿವಾರ ಮುಕ್ತಾಯಗೊಳ್ಳಲಿದೆ.
ಮಂಗಳೂರು ಜಿಲ್ಲೆಯ ನೃತ್ಯ ವಿದ್ಯಾರ್ಥಿಗಳಿಗೆ, ಸಾರ್ವಜನಿಕರಿಗೆ, ಸಂಶೋಧಕರಿಗೆ, ಪೋಷಕರಿಗೆ ವರದಾಯಕವಾಗಿದ್ದ ಈ ಶಿಬಿರವು ಏ.20ರಂದು ಆರಂಭಗೊಂಡಿತ್ತು. ಶನಿವಾರ ಪುತ್ತೂರಿನ ಕೋರ್ಟ್ ರಸ್ತೆಯಲ್ಲಿರುವ ಮುಳಿಯ ಜ್ಯುವೆಲ್ಸ್ ಹಾಲ್ ನಲ್ಲಿ ಸಮಾರೋಪ ಸಮಾರಂಭ ನಡೆಯಲಿದೆ.
ಬೆಳಗ್ಗೆ 10 ಗಂಟೆಗೆ ಸಮಾರೋಪ ಸಮಾರಂಭ ಆರಂಭವಾಗಲಿದ್ದು ವಿದ್ವಾನ್ ಕೊರ್ಗಿ ಶಂಕರನಾರಾಯಣ ಉಪಾಧ್ಯಾಯರಿಂದ 'ಅಭಿನಯ'ದ ಕುರಿತಾಗಿ ಉಪನ್ಯಾಸ, ಪ್ರಾತ್ಯಕ್ಷಿಕೆ ನಡೆಯಲಿದೆ. ಸಂಜೆ 5.00 ಗಂಟೆಗೆ ನಾಟ್ಯಶಾಸ್ತ್ರವನ್ನಾಧರಿಸಿದ ಕಥೆಗಳಿಗೆ ಶಿಬಿರದಲ್ಲಿ ಪಾಲ್ಗೊಂಡ ಅಭ್ಯರ್ಥಿಗಳು ನಿರ್ದೇಶಿಸಿದ ನೃತ್ಯ ಕಾರ್ಯಕ್ರಮವಿದೆ.
ಒಂದು ವಾರದ ಕಾರ್ಯಕ್ರಮಗಳು
ನೂಪುರ ಭ್ರಮರಿ ಮತ್ತು ಪುತ್ತೂರಿನ ಶ್ರೀ ಮೂಕಾಂಬಿಕಾ ಕಲ್ಚರಲ್ ಅಕಾಡೆಮಿಯ ಸಹಯೋಗದಲ್ಲಿ ಏ.20ರಿಂದ ನಡೆಯುತ್ತಿರುವ 'ನಾಟ್ಯಚಿಂತನ' ಎಂಬ ನಾಟ್ಯಶಾಸ್ತ್ರದ ಅಧ್ಯಯನಪೂರ್ಣ ಪ್ರಾಯೋಗಿಕ ಶಿಬಿರವು ಶನಿವಾರ ಮುಕ್ತಾಯಗೊಳ್ಳಲಿದೆ. ಪುತ್ತೂರಿನ ಕೋರ್ಟ್ ರಸ್ತೆಯಲ್ಲಿರುವ ಮುಳಿಯ ಜ್ಯುವೆಲ್ಸ್ ಹಾಲ್ ನಲ್ಲಿ ಸಮಾರೋಪ ಸಮಾರಂಭ ಆಯೋಜಿಸಲಾಗಿದೆ.
ಶಿಬಿರದಲ್ಲೇನಿತ್ತು?
ಒಂದು ವಾರದ ಶಿಬಿರದಲ್ಲಿ ದಿನಕ್ಕೊಂದು ನಾಟ್ಯಶಾಸ್ತ್ರದ ಕಥಾಮಾಲಿಕೆಯ ಉಪನ್ಯಾಸ, ಪ್ರಾತ್ಯಕ್ಷಿಕೆ ಮತ್ತು ಪ್ರದರ್ಶನ, ಸಂವಾದ, ಪ್ರಶ್ನೋತ್ತರಗಳು ನಡೆದಿವೆ. ಶಿಬಿರದಲ್ಲಿ 26 ವಿದ್ಯಾರ್ಥಿಗಳು 16 ವಿವಿಧ ಬಗೆಯ ನೃತ್ಯಗಳನ್ನು ನಿರ್ದೇಶಿಸಿದ್ದಾರೆ. ಅವುಗಳಲ್ಲಿ ಕೆಲವು ನೃತ್ಯನಿರ್ದೇಶನಗಳನ್ನು ಸಮಾರೋಪ ಸಮಾರಂಭದಲ್ಲಿ ಪ್ರದರ್ಶಿಸಲಿದ್ದಾರೆ.
ವಿಶೇಷ ಕಾರ್ಯಕ್ರಮ ನಡೆಯಿತು
ಏ.20ರಂದು ಒಂದು ವಾರದ ಕಾರ್ಯಕ್ರಮಕ್ಕೆ ಮುನ್ನುಡಿಯಾಗಿ ಬೆಂಗಳೂರಿನ ಹೆಸರಾಂತ ಕಲಾವಿದೆ ಡಾ.ಶೋಭಾ ಶಶಿಕುಮಾರ್ ಅವರ ನೇತೃತ್ವದಲ್ಲಿ ಉಪನ್ಯಾಸ ಕಾರ್ಯಾಗಾರ ಮತ್ತು ವಿಶೇಷವಾದ ಭರತನೃತ್ಯ ಕಾರ್ಯಕ್ರವು ನಡೆಯಿತು. ಇದೇ ಸಂದರ್ಭದಲ್ಲಿ ಭಾರತದಲ್ಲೇ ಏಕೈಕ ಮತ್ತು ಪ್ರಪ್ರಥಮ ಸಂಶೋಧನಾ ಸಂಚಿಕೆಯೆಂಬ ಮನ್ನಣೆ ಗಳಿಸಿರುವ ನೂಪುರ ಭ್ರಮರಿಯ ವಾರ್ಷಿಕ ವಿಶೇಷಾಂಕ-ಸಂಶೋಧನ ಸ್ಮರಣ ಸಂಚಿಕೆಯನ್ನು ಬಿಡುಗಡೆಗೊಳಿಸಲಾಯಿತು.
ಹೇಗಿತ್ತು ಶಿಬಿರ
ನೃತ್ಯ ಕಾರ್ಯಾಗಾರದಲ್ಲಿ ಸಂಪನ್ಮೂಲ ವ್ಯಕ್ತಿಗಳು ನೃತ್ಯವನ್ನು ಪಾಠ ಮಾಡಿ, ನಿರ್ದೇಶಿಸಿದ ವಿಷಯಗಳನ್ನು ಅಭ್ಯರ್ಥಿಗಳಿಂದ ಮಾಡಿಸುತ್ತಾರೆ. ಆದರೆ, ಈ ಕಾರ್ಯಾಗಾರದಲ್ಲಿ ನಿತ್ಯವೂ 1 ಗಂಟೆಯ ಉಪನ್ಯಾಸ ತರಗತಿಯ ನಂತರ ನಡೆದ ಪ್ರಾಯೋಗಿಕ ತರಗತಿಯಲ್ಲಿ ನಾಟ್ಯಶಾಸ್ತ್ರದ ಅಂಶಗಳನ್ನು ಬಳಸಿ ಭಾಗವಹಿಸಿದ ವಿದ್ಯಾರ್ಥಿಗಳಿಂದಲೇ ಕೊರಿಯೋಗ್ರಫಿ ಮಾಡಿಸಲಾಗಿದ್ದು ವಿಶೇಷ.
ವಿನೂತನ ಪ್ರಯತ್ನ
ಮಂಗಳೂರು ಜಿಲ್ಲೆಯ ನೃತ್ಯ ವಿದ್ಯಾರ್ಥಿಗಳಿಗೆ, ಸಾರ್ವಜನಿಕರಿಗೆ, ಸಂಶೋಧಕರಿಗೆ, ಪೋಷಕರಿಗೆ ವರದಾಯಕವಾಗಿದ್ದ ಈ ಶಿಬಿರ ನೃತ್ಯ ಕ್ಷೇತ್ರದಲ್ಲಿ ವಿಶಿಷ್ಟ ಮತ್ತು ಅಪರೂಪದ ಪ್ರಯತ್ನ. ಶಿಬಿರದಲ್ಲಿ ಅಭ್ಯರ್ಥಿಗಳನ್ನು ವಯೋಮಾನ, ಕಾರ್ಯಕ್ಷಮತೆ, ಆಸಕ್ತಿಯ ಮತ್ತು ಕಲಿಕೆಯ ಮಟ್ಟದ ಆಧಾರದ ಮೇಲೆ ವಿಭಾಗಿಸಿ ಅವರಿಂದಲೇ ನೃತ್ಯವನ್ನು ಸಂಯೋಜಿಸಲಾಗಿದೆ.