ನ.4ರಿಂದ ಮಂಗಳೂರಿನಲ್ಲಿ ರಾಷ್ಟ್ರ ಮಟ್ಟದ ಕರಾಟೆ ಟೂರ್ನಿ ಆರಂಭ
ಮಂಗಳೂರು, ನವೆಂಬರ್ 03 : ರಾಷ್ಟ್ರ ಮಟ್ಟದ ಮುಕ್ತ ಕರಾಟೆ ಸ್ಪರ್ಧೆ ನಾಳೆಯಿಂದ (ನವೆಂಬರ್ 04) ಮಂಗಳೂರಿನಲ್ಲಿ ಆರಂಭವಾಗಲಿದೆ. ಎರಡು ದಿನಗಳ ಕಾಲ ನಡೆಯುವ ಈ ಸ್ಪರ್ಧೆಗೆ ಸರ್ವಸಿದ್ಧತೆ ಪೂರ್ಣಗೊಂಡಿದೆ.
ಸೆಲ್ಫ್ ಡಿಫೆನ್ಸ್ ಸ್ಕೂಲ್ ಆಫ್ ಇಂಡಿಯನ್ ಕರಾಟೆ ಡೋಜೋ ವತಿಯಿಂದ ಮಂಗಳೂರಿನ ನೆಹರೂ ಮೈದಾನದಲ್ಲಿ 'ಇಂಡಿಯನ್ ಕರಾಟೆ ಚಾಂಪಿಯನ್ ಶಿಪ್ 2017 ' ರಾಷ್ಟ್ರೀಯ ಮಟ್ಟದ ಮುಕ್ತ ಕರಾಟೆ ಚಾಂಪಿಯನ್ ಶಿಪ್ ಆಯೋಜಿಸಲಾಗಿದೆ.
ರಾಷ್ಟ್ರ ಮಟ್ಟದ ಈ ಕರಾಟೆ ಟೂರ್ನಿಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಚಾಲನೆ ನೀಡಲಿದ್ದಾರೆ .ಪುರುಷರು ಹಾಗೂ ಮಹಿಳಾ ವಿಭಾಗಗಳಲ್ಲಿ ಈ ಪಂದ್ಯಾಟಗಳು ನಡೆಯಲಿದ್ದು, ದೇಶದ 12ಕ್ಕೂ ಅಧಿಕ ರಾಜ್ಯಗಳಿಂದ ಸ್ಪರ್ಧಾಳುಗಳು ಭಾಗವಹಿಸಲಿದ್ದಾರೆ .
104ಕ್ಕೂ ಅಧಿಕ ರಾಜ್ಯ ಅಧಿಕ ವಿಭಾಗಗಳಲ್ಲಿ ಸ್ಪರ್ಧೆಗಳು ನಡೆಯಲಿದ್ದು, ಈ ಸ್ಪರ್ಧೆಗಳಲ್ಲಿ 1200ಕ್ಕೂ ಹೆಚ್ಚು ಕ್ರೀಡಾಪಟುಗಳು ಭಾಗವಹಿಸುವ ನಿರೀಕ್ಷೆ ಇದೆ. ಇದಕ್ಕಾಗಿ 4 ಫೈಟ್ ರಿಂಗ್ ಗಳನ್ನು ನಿರ್ಮಿಸಲಾಗಿದೆ.
ಟೀಮ್ ಕಟಾ, ಟೀಮ್ ಕುಮಿಟೆ ,ವೈಯಕ್ತಿಕ ಕಟಾ ,ಗ್ರೂಪ್ ಚಾಂಪಿಯನ್ ವಿಭಾಗಗಳ ಸಹಿತ ಹಲವು ವಿಭಾಗಗಳಲ್ಲಿ ಸ್ಪರ್ದೆಗಳು ನಡೆಯಲಿದೆ. ಮಲೇಷ್ಯಾದಿಂದ ಬಂದಿರುವ ಸಿನಾನ್ ವಸಂತನ್ ಅವರು ತೀರ್ಪುಗಾರರಾಗಿ ಕಾರ್ಯನಿರ್ವಹಿಸಲಿದ್ದಾರೆ.