ಪೆರುವಾಯಿ ಗ್ರಾಮ ಪಂಚಾಯತ್ ಆವರಣದಲ್ಲಿ ರಾಷ್ಟ್ರ ಧ್ವಜಕ್ಕೆ ಅಗೌರವ
ಮಂಗಳೂರು, ಜುಲೈ. 30: ಪಂಚಾಯತ್ ಕಚೇರಿ ಎದುರು ಹಗಲು ರಾತ್ರಿ ಎನ್ನದೆ ಕಳೆರಡು ದಿನ ರಾಷ್ಟ್ರ ಧ್ವಜ ಹಾರಿಸಿ ರಾಷ್ಟ್ರ ಧ್ವಜಕ್ಕೆ ಅವಮಾನಿಸಿದ ಘಟನೆ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ನಡೆದಿದೆ. ದಕ್ಷಿಣ ಕನ್ನಡ ಜಿಲ್ಲೆಯ ಪೆರುವಾಯಿ ಗ್ರಾಮ ಪಂಚಾಯತ್ ಕಚೇರಿಯಲ್ಲಿ ರಾಷ್ಟ್ರ ಧ್ವಜಕ್ಕೆ ಅಗೌರವ ತೋರಿದ ಘಟನೆ ಬೆಳಕಿಗೆ ಬಂದಿದೆ.
ಪಂಚಾಯತ್ ಕಚೇರಿ ಮುಂಭಾಗದಲ್ಲಿ ನಿತ್ಯವೂ ರಾಷ್ಟ್ರಧ್ವಜ ಹಾರಿಸಬೇಕೆಂಬ ಸರಕಾರಿ ಆದೇಶ ಅಧಿಕಾರಿ ವರ್ಗದ ಅಸಡ್ಡೆಯಿಂದ ಎಡವಟ್ಟಿಗೆ ಕಾರಣವಾಗುತ್ತಿದೆ. ದಕ್ಷಿಣ ಕನ್ನಡ ಜಿಲ್ಲೆಯ ವಿಟ್ಲ ಬಳಿಯ ಪೆರುವಾಯಿ ಗ್ರಾಮ ಪಂಚಾಯತ್ ಕಚೇರಿ ಮುಂಭಾಗದಲ್ಲಿ ಭಾನುವಾರ ರಾತ್ರಿಯೂ ರಾಷ್ಟ್ರಧ್ವಜ ಹಾರಾಡುತ್ತಿದ್ದ ವಿಚಾರ ಸ್ಥಳೀಯರ ಆಕ್ರೋಶಕ್ಕೆ ಕಾರಣವಾಗಿದೆ.
ಪಾಕ್ ಧ್ವಜ ಹಾರಿಸಿದ ಪ್ರಕರಣ: ವಿಜಯಪುರ ಕೋರ್ಟ್ ಗೆ ಹಾಜರಾದ ವಾಗ್ಮೋರೆ
ಭಾನುವಾರ ರಜಾದಿನವಾಗಿದ್ದರಿಂದ ಧ್ವಜಾರೋಹಣ ಇರುವುದಿಲ್ಲ. ಆದರೆ, ಶನಿವಾರ ಹಾರಿಸಿದ ಧ್ವಜವನ್ನು ಭಾನುವಾರವೂ ತೆಗೆದಿಲ್ಲ. ಕಳೆದ ರಾತ್ರಿ ಕೂಡ ರಾಷ್ಟ್ರ ಧ್ವಜ ಹಾರಾಡಿದೆ. ಹೀಗಾಗಿ ಎರಡು ದಿನ ಕಳೆದರೂ, ಮಳೆ ಗಾಳಿಯಿಂದ ಧ್ವಜ ಬಣ್ಣ ಕಳೆದುಕೊಂಡಿದ್ದಲ್ಲದೆ ಅಧಿಕಾರಿ ವರ್ಗದ ಲೋಪದಿಂದಾಗಿ ಅಗೌರವ ತೋರಿದಂತಾಗಿದೆ.
ಬೆಳಗ್ಗೆ ಧ್ವಜಾರೋಹಣ ಮಾಡಿದರೆ ಸಂಜೆ ಆರು ಗಂಟೆ ಒಳಗೆ ಅವರೋಹಣ ನಡೆಸಬೇಕು ಎಂಬುದು ನಿಯಮ . ಆದರೆ, ಪಂಚಾಯತ್ ಕಚೇರಿಗಳಲ್ಲಿ ಧ್ವಜಾರೋಹಣ ಕಡ್ಡಾಯವಾದ ನಂತರ ಈ ನಿಯಮ ಪಾಲನೆಯಾಗುತ್ತಿಲ್ಲ. ಕೆಲವೆಡೆ ರಾತ್ರಿಯಾದರೂ, ಧ್ವಜ ಹಾರಾಡುವುದು ಕಂಡುಬರುತ್ತದೆ.
ಪೆರುವಾಯಿ ಪಂಚಾಯತ್ ಕಚೇರಿಯದ್ದು ಇಂಥ ಅಗೌರವ ತೋರಿದ ಘಟನೆಗೆ ನಿದರ್ಶನ ಮಾತ್ರ. ಈ ಕುರಿತು ಅಧಿಕಾರಿಗಳು ಕ್ರಮ ಕೈಗೊಳ್ಳಬೇಕಾಗಿದೆ.