ನಾಸೀರ್ ಕೊಲೆ ಪ್ರಕರಣ: ಸುಪ್ರೀಂನಿಂದ ಮೇಲ್ಮನವಿ ಅರ್ಜಿ ವಜಾ
ಸಜೀಪ ನಾಸಿರ್ ಕೊಲೆ ಪ್ರಕರಣದಲ್ಲಿ ಆರೋಪಿಗಳ ಮೇಲ್ಮನವಿಯನ್ನು ಸುಪ್ರಿಂ ಕೋರ್ಟ್ ವಜಾ ಮಾಡಿದೆ. ಜಾಮೀನಿನ ಮೇಲೆ ಬಿಡುಗಡೆಯಾಗಿದ್ದ ನಾಲ್ವರು ಆರೋಪಿಗಳು ಈಗ ಮತ್ತೆ ಜೈಲು ಸೇರಬೇಕಾಗಿದೆ.
ಮಂಗಳೂರು, ಜನವರಿ 24 : ಸಜೀಪ ನಾಸಿರ್ ಕೊಲೆ ಮತ್ತು ಸಜೀಪ ಮುಸ್ತಫಾ ಕೊಲೆ ಯತ್ನ ಪ್ರಕರಣದಲ್ಲಿ ಮೂವರು ಆರೋಪಿಗಳಿಗೆ ಕರ್ನಾಟಕ ಹೈಕೋರ್ಟ್ ನೀಡಿದ್ದ ಶಿಕ್ಷೆಯನ್ನು ಸುಪ್ರಿಂ ಕೋರ್ಟ್ ಎತ್ತಿ ಹಿಡಿದಿದೆ. ಆರೋಪಿಗಳು ಹೈಕೋರ್ಟ್ ಆದೇಶಕ್ಕೆ ತಡೆ ಕೋರಿ ಸರ್ವೋಚ್ಚ ನ್ಯಾಯಾಲಯಕ್ಕೆ ಮೇಲ್ಮನವಿ ಸಲ್ಲಿಸಿದ್ದರು.
ಬಂಟ್ವಾಳ ತಾಲೂಕಿನ ಸಜಿಪ ಗ್ರಾಮದ ಮಲಾಯಿಬೆಟ್ಟು ನಿವಾಸಿ ಮುಹಮ್ಮದ್ ನಾಸೀರ್ ಎಂಬುವವರನ್ನು 2015 ರ ಸೆಪ್ಟಂಬರ್ 7 ರಾತ್ರಿ ನಾಲ್ವರು ಮಾರಕಾಸ್ತ್ರಗಳಿಂದ ಕೊಲೆ ಮಾಡಿದ್ದರು. ಗಾರೆ ಕೆಲಸ ಮಾಡುತ್ತಿದ್ದ ನಾಸೀರ್ ಅದೇ ಊರಿನ ಮುಹಮ್ಮದ್ ಮುಸ್ತಫಾ ಎಂಬುವವರ ಆಟೋ ರಿಕ್ಷಾದಲ್ಲಿ ಮನೆಗೆ ತೆರಳುತ್ತಿದ್ದಾಗ, ಮೆಲ್ಕಾರ್ ಸಮೀಪದ ಪಣೋಲಿಬೈಲ್ ಬಳಿ ಈ ಘಟನೆ ನಡೆದಿತ್ತು. ಮುಸ್ತಫಾ ಮೇಲೆ ಕೂಡಾ ಆರೋಪಿಗಳು ಮಾರಕಾಸ್ತ್ರಗಳಿಂದ ಹಲ್ಲೆ ನಡೆಸಿದ್ದರಿಂದ ಅವರು ಗಂಭೀರವಾಗಿ ಗಾಯಗೊಂಡಿದ್ದರು. ['ಜಲ್ಲಿಕಟ್ಟು ಹಿಂಸಾಚಾರಕ್ಕೆ ಪಾಕ್ ನ ಐಎಸ್ ಐ ಫೈನಾನ್ಸ್']
ಪ್ರಕರಣದ ನಾಲ್ವರು ಆರೋಪಿಗಳ ಪೈಕಿ ಮಂಚಿ ನಿವಾಸಿ ವಿಠಲ ಅಡಂತ್ಯಾಯ, ಪುತ್ರ ವಿಜೇತ್ ಕುಮಾರ್, ಬಡಗ ಉಳಿಪಾಡಿ ನಿವಾಸಿ ಶೇಖರ ಪೂಜಾರಿ, ಪುತ್ರ ಕಿರಣ್ ಪೂಜಾರಿ, ಮಂಗಳೂರು ತಿರುವೈಲ್ ನಿವಾಸಿ ಸದಾನಂದ ಪೂಜಾರಿ ಪುತ್ರ ಅನೀಶ್ ಯಾನೆ ಧನು ಪೂಜಾರಿಯನ್ನು ಬಂಟ್ವಾಳ ಪೊಲೀಸರು ಬಂಧಿಸಿ ಜೈಲಿಗೆ ಅಟ್ಟಿದ್ದರು.
ಇನ್ನೋರ್ವ ಆರೋಪಿ ಮಂಚಿ ಗ್ರಾಮದ ಅಭಿ ಯಾನೆ ಅಭಿಜಿತ್ ತಲೆಮರೆಸಿಕೊಂಡಿದ್ದಾನೆ. ಕೊಲೆ, ಕೊಲೆ ಯತ್ನದಂತಹ ಗಂಭೀರ ಪ್ರಕರಣದ ಆರೋಪಿಗಳಿಗೆ ಜಿಲ್ಲಾ ನ್ಯಾಯಾಲಯ ತಿಂಗಳ ಒಳಗೆ ಜಾಮೀನು ನೀಡಿರುವುದನ್ನು ಪ್ರಶ್ನಿಸಿ ನಾಸೀರ್ ಕುಟುಂಬ ಕರ್ನಾಟಕ ರಾಜ್ಯ ಹೈಕೋರ್ಟ್ನಲ್ಲಿ ಅರ್ಜಿ ಸಲ್ಲಿಸಿತ್ತು. ಅರ್ಜಿಯನ್ನು ವಿಚಾರಣೆ ನಡೆಸಿದ ಹೈಕೋರ್ಟ್ ಆರೋಪಿಗಳ ಜಾಮೀನು ರದ್ದು ಪಡಿಸಿ ಜ. 16ರ ಒಳಗೆ ನ್ಯಾಯಾಲಯಕ್ಕೆ ಶರಣಾಗುವಂತೆ ಆದೇಶ ನೀಡಿತ್ತು. [ಬಿಸಿಸಿಐ ಆಡಳಿತ ಮಂಡಳಿ ನೇಮಕ ಮುಂದೂಡಿದ ಸುಪ್ರೀಂ ಕೋರ್ಟ್]
ಹೈಕೋರ್ಟ್ ಆದೇಶವನ್ನು ರದ್ದು ಪಡಿಸುವಂತೆ ಸುಪ್ರೀಂ ಕೋರ್ಟ್ನಲ್ಲಿ ಆರೋಪಿಗಳು ಮೇಲ್ಮನವಿ ಸಲ್ಲಿಸಿದ್ದರು. ಅರ್ಜಿಯನ್ನು ವಿಚಾರಣೆ ನಡೆಸಿದ ಸುಪ್ರೀಂ ಕೋರ್ಟ್, ಕರ್ನಾಟಕ ಹೈಕೋರ್ಟ್ ನೀಡಿದ ಆದೇಶವನ್ನು ಎತ್ತಿ ಹಿಡಿದು, ಆರೋಪಿಗಳ ಅರ್ಜಿಯನ್ನು ವಜಾಗೊಳಿಸಿದೆ. ಜಾಮೀನು ರದ್ದುಗೊಂಡಿರುವ ಹಿನ್ನೆಲೆಯಲ್ಲಿ ಮೂವರು ಆರೋಪಿಗಳನ್ನು ಪೊಲೀಸರು ಬಂಧಿಸಿ ನ್ಯಾಯಾಲಯಕ್ಕೆ ಹಾಜರುಪಡಿಸಲಿದ್ದಾರೆ.