ದೇವಸ್ಥಾನಗಳಿಗೆ ಟೂರ್ ಹೊಡೆದು ಕಟೀಲ್ ಪ್ರಚಾರ
ಮಂಗಳೂರು, ಮಾ. 22 : ದಕ್ಷಿಣಕನ್ನಡ ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ನಳಿನ್ ಕುಮಾರ್ ಕಟೀಲ್ (48) ಶನಿವಾರ ಬೆಳಿಗ್ಗೆ 8 ಗಂಟೆಗೆ ಜಿಲ್ಲೆಯ ಪ್ರಸಿದ್ಧ ಕುದ್ರೋಳಿ ಶ್ರೀ ಗೋಕರ್ಣನಾಥ ಕ್ಷೇತ್ರಕ್ಕೆ ಭೇಟಿ ಮಾಡಿ, ದೇವರಿಗೆ ಮತ್ತು ಸಾಮಾಜಿಕ ಪ್ರವರ್ತಕ ಬ್ರಹ್ಮಶ್ರೀ ನಾರಾಯಣ ಗುರುಗಳಿಗೆ ಪೂಜೆ ಸಲ್ಲಿಸಿದರು.
ಅನಂತರ ನಗರದ ಪ್ರಮುಖ ದೇವಸ್ಥಾನಗಳಾದ ಮಂಗಳಾದೇವಿ ದೇವಸ್ಥಾನ, ಕದ್ರಿ ಮಂಜುನಾಥ ದೇವಸ್ಥಾನ, ರಥಬೀದಿ ವೆಂಕಟ್ರಮಣ ದೇವಸ್ಥಾನ, ಕಾಳಿಕಾಂಬ ವಿನಾಯಕ ದೇವಸ್ಥಾನಗಳಿಗೂ ಭೇಟಿ ನೀಡಿದರು. ಆ ಬಳಿಕ ಮನೆ ಮನೆಗೆ ಭೇಟಿ ನೀಡಿ ಹಾಲಿ ಸಂಸದ ನಳಿನ್ ಕುಮಾರ್ ಕಟೀಲ್ ಅವರು ಮತ ಯಾಚಿಸಿದರು.
ಕಳೆದ 5 ವರ್ಷಗಳ ಅವಧಿಯಲ್ಲಿ ದೊರಕಿದ ಪ್ರಥಮ ಅವಕಾಶದಲ್ಲಿ ಹಿರಿಯರ ಮಾರ್ಗದರ್ಶನದೊಂದಿಗೆ ತಾನು ಮಾಡಿರುವ ಸಾಧನೆಗಳನ್ನು ಮುಂದಿರಿಸಿಕೊಂಡು ಹೋಗುವುದಾಗಿ ನಳಿನ್ ಕುಮಾರ್ ಕಟೀಲ್ ಅವರು ಮತಯಾಚನೆ ಸಮಯದಲ್ಲಿ ಮತದಾರರಿಗೆ ಭರವಸೆ ನೀಡಿದರು. [ಬಿಜೆಪಿ ಮೊದಲ ಪಟ್ಟಿಯಲ್ಲಿ ಕಟೀಲ್]
ವಿರೋಧಿಗಳ ಯಾವುದೇ ಅಪಪ್ರಚಾರ, ಋಣಾತ್ಮಕ ಮತ್ತು ವೈಯಕ್ತಿಕ ಟೀಕೆಗಳಿಗೆ ಪ್ರತಿಕ್ರಿಯಿಸದೇ ತನ್ನ ಸಾಧನೆ, ಮುಂದಿನ ಅಭಿವೃದ್ಧಿ ಯೋಜನೆ ಮತ್ತು ಪ್ರಸ್ತುತ ಹದಗೆಟ್ಟಿರುವ ದೇಶದ ಆರ್ಥಿಕ, ವಿದೇಶಾಂಗ ಮತ್ತು ರಕ್ಷಣಾ ನೀತಿಗಳಿಂದಾಗಿ ದೇಶದಲ್ಲಿ ಉಂಟಾಗಿರುವ ಆರ್ಥಿಕ ಮತ್ತು ರಾಜಕೀಯ ಪ್ರಕ್ಷುಬ್ಧತೆ ಕುರಿತು ಜನರಿಗೆ ಮನವರಿಕೆ ಮಾಡುವುದಾಗಿ ನುಡಿದರು.
ವಿಪರೀತ ಪರಿಸ್ಥಿತಿಯನ್ನು ಎದುರಿಸಲು ಸಮರ್ಥ ನಾಯಕತ್ವಕ್ಕಾಗಿ ನರೇಂದ್ರ ಮೋದಿಯವರ ನೇತೃತ್ವದ ಅನಿವಾರ್ಯತೆಯನ್ನು ಜನತೆಗೆ ಮನದಟ್ಟು ಮಾಡಿ, ಗುಣಾತ್ಮಕ ಪ್ರಚಾರಕ್ಕೆ ಆದ್ಯತೆ ನೀಡುವುದಾಗಿ ಅವರು ಹೇಳಿದರು. ಅಲ್ಲದೇ ಈ ಹಿಂದೆ ಅಟಲ್ ಬಿಹಾರಿ ವಾಜಪೇಯಿ ನೇತೃತ್ವದ ಎನ್.ಡಿ.ಎ ಸರಕಾರದ ಜನಪರ ಯೋಜನೆಗಳನ್ನೂ ಜನತೆಗೆ ನೆನಪಿಸಲಾಗುವುದು ಎಂದು ತಿಳಿದರು. [ಮೋದಿ ಮಾತನ್ನು ಕನ್ನಡದಲ್ಲಿ ಕೇಳಿರಿ]
ಈ ಸಂದರ್ಭದಲ್ಲಿ ಅವರೊಂದಿಗೆ ಪ್ರಚಾರ ಸಮಿತಿ ಅಧ್ಯಕ್ಷ ಮಾಜಿ ಶಾಸಕ ರುಕ್ಮಯ್ಯ ಪೂಜಾರಿ, ಜಿಲ್ಲಾಧ್ಯಕ್ಷ ಕೆ. ಪ್ರತಾಪಸಿಂಹ ನಾಯಕ್, ಬಂಟ್ವಾಳ ಕ್ಷೇತ್ರ ಅಧ್ಯಕ್ಷ ರಾಜೇಶ್ ನಾಕ್ ಉಳೆಪಾಡಿಗುತ್ತು, ಮಂಗಳೂರು ದಕ್ಷಿಣ ಅಧ್ಯಕ್ಷ ರವಿಶಂಕರ ಮಿಜಾರ್, ಮಾಜಿ ಜಿಲ್ಲಾ ಪಂಚಾಯತ್ ಉಪಾಧ್ಯಕ್ಷ, ರಾಜ್ಯ ಹಿಂದುಳಿದ ವರ್ಗಗಳ ಆಯೋಗ ಅಧ್ಯಕ್ಷ ತುಂಗಪ್ಪ ಬಂಗೇರ, ಶಾಸಕರಾದ ಕೆ. ಮೋನಪ್ಪ ಭಂಡಾರಿ, ಕ್ಯಾ| ಗಣೇಶ್ ಕಾರ್ಣಿಕ್, ಮಾಜಿ ಶಾಸಕರಾದ ಎನ್. ಯೋಗೀಶ್ ಭಟ್, ಕೆ. ಪದ್ಮನಾಭ ಕೊಟ್ಟಾರಿ, ಮಂಗಳೂರು ವಿಧಾನಸಭಾ ಕ್ಷೇತ್ರದ ಪ್ರಧಾನ ಕಾರ್ಯದರ್ಶಿ ಸುಧೀರ್ ಶೆಟ್ಟಿ ಕಣ್ಣೂರು, ಡಿ. ವೇದವ್ಯಾಸ ಕಾಮತ್ ಮುಂತಾದವರು ಉಪಸ್ಥಿತರಿದ್ದರು.
ಕಟೀಲ್ ವರ್ಸಸ್ ಪೂಜಾರಿ : 2009ರ ಚುನಾವಣೆಯಲ್ಲಿ ನಳಿನ್ ಕುಮಾರ್ ಕಟೀಲ್ ವಿರುದ್ಧ 40,420 ಮತಗಳಿಂದ ಪರಾಭವಗೊಂಡಿದ್ದ ಕಾಂಗ್ರೆಸ್ ಪಕ್ಷದ ಹಿರಿಯ ಧುರೀಣ ಜನಾರ್ದನ ಪೂಜಾರಿ (76) ಅವರು ಈ ಬಾರಿ ಆಂತರಿಕ ಚುನಾವಣೆಯ ಮುಖಾಂತರ ಗೆದ್ದು ಮತ್ತೆ ಟಿಕೆಟ್ ಗಿಟ್ಟಿಸಿದ್ದಾರೆ. ಆಮ್ ಆದ್ಮಿ ಪಕ್ಷದಿಂದ 61 ವರ್ಷ ವಯಸ್ಸಿನ ಎಂಆರ್ ವಾಸದೇವ ಅವರು ಸ್ಪರ್ಧಿಸುತ್ತಿದ್ದಾರೆ. ಈ ಬಾರಿ ಗೆಲುವು ಯಾರ ಮಡಿಲಿಗೆ? [ಆಪ್ ಅಭ್ಯರ್ಥಿಗಳ ಪರಿಚಯ]