ವೈರಲ್ ಆಯ್ತು ದೈವಸ್ಥಾನ ಶುಚಿಗೊಳಿಸಿದ ಮುಸ್ಲಿಂ ಬಾಂಧವರ ಚಿತ್ರಗಳು
ಮಂಗಳೂರು ಮೇ 30: ಮಂಗಳೂರಿನಲ್ಲಿ ಸುರಿದ ಮಹಾಮಳೆ ಒಂದೆಡೆ ಜನರನ್ನು ಸಂಕಷ್ಟದಿಂದ ಪರದಾಡುವಂತೆ ಮಾಡಿದರೆ, ಇನ್ನೊಂದೆಡೆ ಪ್ರತಿ ಹಂತದಲ್ಲೂ ಕೋಮು ದ್ವೇಷ ಕಾರುತ್ತಿದ್ದ ಜನರನ್ನು ಒಂದಾಗಿಸಿದೆ. ಮಂಗಳೂರು ಎಂದೊಡನೆ ಹೆಚ್ಚಿನ ಜನರಿಗೆ ಕಣ್ಣೆದುರು ಬರುವುದೇ ಕೋಮು ಗಲಭೆಗಳಿಂದ ತತ್ತರಿಸಿದ ನಗರದ ಚಿತ್ರಣ.
ಆದರೆ ಮಹಾಮಳೆ ಮಂಗಳೂರನ್ನು ನೋಡುವ ದೃಷ್ಠಿಕೋನವನ್ನೇ ಬದಲಾಯಿಸಿದೆ. ಮಹಾಮಳೆಯ ಅವಾಂತರಕ್ಕೆ ನಲುಗಿದ್ದ ಮಂಗಳೂರು ನಿನ್ನೆಯಿಂದ ಸಹಜ ಸ್ಥಿತಿಗೆ ಮರಳಿದೆ. ಮಳೆಯ ಮಾರುತ ಸ್ವಲ್ಪ ಬಿಡುವು ನೀಡಿದ ಪರಿಣಾಮ ಜನರು ನೆಮ್ಮದಿಯ ನಿಟ್ಟುಸಿರು ಬಿಟ್ಟಿದ್ದಾರೆ.
ಮಂಗಳೂರಿನಲ್ಲಿ ಮರಣ ಮೃದಂಗ ಬಾರಿಸಿದ ಆರಂಭಿಕ ಮಹಾಮಳೆ
ಮಹಾ ಮಳೆಯಿಂದಾಗಿ ಸೃಷ್ಠಿಯಾಗಿದ್ದ ಕೃತಕ ನೆರೆಯ ಪರಿಸ್ಥಿತಿ ತಿಳಿಗೊಳ್ಳುತ್ತಿದೆ. ತಗ್ಗು ಪ್ರದೇಶದಲ್ಲಿ ತುಂಬಿದ್ದ ಮಳೆನೀರು ಹರಿದು ಹೋಗಿದ್ದು, ಜನಜೀವನ ಸಹಜ ಸ್ಥಿತಿಗೆ ಮರಳಿದೆ. ಈ ಹಿನ್ನೆಲೆಯಲ್ಲಿ ಮಹಾ ಮಳೆಗಾದ ಅಪಾರ ನಷ್ಟದ ಸ್ಪಷ್ಟ ಚಿತ್ರಣ ದೊರಕತೊಡಗಿದೆ.
ಈ ನಡುವೆ ಧರ್ಮ, ಜಾತಿ ಮೀರಿದ ಅಪರೂಪದ ಸೋದರತ್ವ ಹಾಗು ಭಾವೈಕ್ಯತೆಯ ನಿದರ್ಶನಗಳು ಬೆಳಕಿಗೆ ಬರುತ್ತವೆ.
ಮಂಗಳೂರಿನಲ್ಲಿ ನಿನ್ನೆ ಸುರಿದ ಭಾರೀ ಮಳೆ ಕ್ಷಣ ಕ್ಷಣಕ್ಕೂ ಕೋಮುದ್ವೇಷ ಕಾರುವವರನ್ನು ಒಂದಾಗಿಸಿದೆ. ಮಹಾಮಳೆಯ ಸಂಕಷ್ಟ ಜಾತಿ, ಧರ್ಮ ಮೀರಿದ ಭಾವೈಕ್ಯತೆಯ ಹಲವಾರು ವೃತ್ತಾಂತಗಳನ್ನು ಬೆಳೆಕಿಗೆ ತಂದಿದೆ.
ನಿನ್ನೆ ಎಡೆಬಿಡದೆ ಸುರಿದ ಭಾರೀ ಮಳೆಗೆ ಮಂಗಳೂರಿನ ಹೆಚ್ಚಿನ ಪ್ರದೇಶ ಜಲಾವೃತಗೊಂಡಿತ್ತು. ನಗರದಲ್ಲಿ ಕಣ್ಣು ಹಾಯಿಸಿದಲ್ಲೆಲ್ಲಾ ನೀರೇ ನೀರು, ಇಂತಹ ಪರಿಸ್ಥಿತಿಯಲ್ಲಿ ಕಳೆದ ರಾತ್ರಿ ನಗರದ ಪಾಂಡೇಂಶ್ವರದಲ್ಲಿರುವ ಕೊರಗಜ್ಜನ ದೈವಸ್ಥಾನ ಬಳಿ ಮಳೆ ನೀರು ತುಂಬಿದ ಪರಿಣಾಮ ಪಕ್ಕದ ಡ್ರೈನೇಜ್ ನೀರು ದೈವಸ್ಥಾನಕ್ಕೆ ನುಗ್ಗಿತ್ತು.
ಈ ಸಂದರ್ಭದಲ್ಲಿ ದೈವಸ್ಥಾನದ ರಕ್ಷಣೆಗೆ ಹಾಗೂ ಅದನ್ನು ಶುಚಿಗೊಳಿಸಲು ಟೊಂಕ ಕಟ್ಟಿದ್ದು ಸ್ಥಳೀಯ ಮುಸ್ಲಿಂ ಬಾಂಧವರು.
ದೈವಸ್ಥಾನಕ್ಕೆ ಕೊಳಚೆ ನೀರು ನುಗ್ಗಿದ್ದನ್ನು ಗಮನಿಸಿದ ಸ್ಥಳೀಯರಾದ ಹಾಶಿರ್ ಮೊಯ್ದೀನ್, ರಮೀಝ್ , ಶಾಬಾಝ್, ಹಸ್ಸನ್ ಮತ್ತಿತರರು ದೈವಸ್ಥಾನಕ್ಕೆ ತೆರಳಿ ನೀರು ಹೊರಚೆಲ್ಲಿ ಶುಚಿಗೊಳಿಸಿದರು. ಇವರು ಶುಚಿಗೊಳಿಸಿದ ಚಿತ್ರಗಳು ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.
ಇನ್ನೊಂದೆಡೆ ನೆರೆಯಲ್ಲಿ ಸಿಲುಕಿದ್ದವರನ್ನು ರಕ್ಷಿಸಿದ್ದ ಆರ್ಎಸ್ಎಸ್ ಸ್ವಯಂಸೇವಕರು ಮಂಗಳೂರಿನ ಆರ್ಎಸ್ಎಸ್ ಶಕ್ತಿ ಕೇಂದ್ರ ಎಂದೇ ಹೇಳಲಾಗುವ ಸಂಘನಿಕೇತನದಲ್ಲಿ ಆಶ್ರಯ ನೀಡಿದರು. ಮಹಾಮಳೆಯಿಂದ ನಲುಗಿ ಆಶ್ರಯ ಪಡೆದವರಿಗೆ ಊಟ ಹಾಗೂ ಹೊದಿಕೆ ವಿತರಿಸಿದರು.
ಕೋಮುದ್ವೇಷದ ಜ್ವಾಲೆ ಹರಡುತ್ತಿದ್ದಂತೆ ಪರಸ್ಪರ ಧಾರ್ಮಿಕ ಕೇಂದ್ರಗಳಿಗೆ ಹಾನಿ ಎಸಗುವ ಪ್ರಕರಣಗಳು ಬೆಳಕಿಗೆ ಬರುತ್ತಿರುವ ಇಂದಿನ ದಿನಗಳಲ್ಲಿ ಇಂತಹ ಕಾರ್ಯಗಳ ಮೂಲಕ ಕೋಮು ಸೌಹಾರ್ದತೆ ಉಳಿಸಲು ಪ್ರಯತ್ನಿಸುತ್ತಿರುವವರ ಬಗ್ಗೆ ಸಾರ್ವಜನಿಕ ವಲಯದಲ್ಲಿ ವ್ಯಾಪಕ ಪ್ರಶಂಸೆ ವ್ಯಕ್ತವಾಗಿದೆ.