ಜೀವದ ಹಂಗು ಬಿಟ್ಟು ಪ್ರಾಣ ರಕ್ಷಿಸಿದ ಮಂಗಳೂರು ಯುವಕರು
ಬಂಟ್ವಾಳ, ಸೆಪ್ಟೆಂಬರ್, 04 : ಕೋಮು ಮನೋಸ್ಥಿತಿಯಿಂದ ನರಳಿ ಬೆಂಡಾಗಿ ಜಾತಿ ಧರ್ಮದ ಆಧಾರದಲ್ಲಿ ತೂಗಿ ನೋಡುತ್ತಿರುವಾಗ ಇಲ್ಲೊಂದು ಮಾನವೀಯತೆ ಮೆರೆದ ಘಟನೆಯೊಂದು ನಡೆದಿದೆ.
ಪಾಣೆ ಮಂಗಳೂರು ಸಮೀಪದ ಗೂಡಿನ ಬಳಿಯ ನದಿಗೆ ಬಿದ್ದು ಸಾವು ಬದುಕಿನ ನಡುವೆ ಹೋರಾಟ ನಡೆಸುತ್ತಿದ್ದ ಹಿಂದೂ ಯುವಕನನ್ನು ಮುಸ್ಲಿಂ ಯುವಕರು ರಕ್ಷಿಸಿ ಮಾನವೀಯತೆ ಮೆರೆದಿದ್ದಾರೆ.[ಕೋಲಾರದಲ್ಲಿ ಹಸಿರು ಕ್ರಾಂತಿಗೆ ಕೈ ಜೋಡಿಸಿದ ಯುವಕರು]
ಏನಿದು ಘಟನೆ?
ಕಾರ್ಮಿಕ ಸಂಘಟನೆಗಳ ಬೇಡಿಕೆ ಹಿನ್ನೆಲೆಯಲ್ಲಿ ಬುಧವಾರ ಭಾರತ ಬಂದ್ ಘೋಷಿಸಲಾಗಿತ್ತು. ಇದರ ಹಿನ್ನೆಲೆಯಲ್ಲಿ ತಾಲೂಕಿನಲ್ಲಿ ನೀರವ ಮೌನ ಆವರಿಸಿತ್ತು. ಆಗ ಬೇಸರವಾದ ಯುವಕರು ಸಮಯ ಕಳೆಯಲೆಂದು ಮದ್ಯದ ಅಂಗಡಿಗೆ ತೆರಳಿದ್ದಾರೆ.
ಮದ್ಯ ಸೇವಿಸಿದ ಯುವಕರು, ಇದರ ಅಮಲಿನಲ್ಲಿ ಗೂಡಿನ ಬಳಿಯ ನೇತ್ರಾವತಿ ನದಿಗೆ ಈಜಲು ಹೋಗಿದ್ದಾರೆ. ನೀರಿನ ಸೆಳೆತಕ್ಕೆ ಸಿಕ್ಕಿದ ಯುವಕರು ಪ್ರಾಣ ಕಳೆದುಕೊಳ್ಳುವ ಸನ್ನಿವೇಶ ನಿರ್ಮಾಣವಾಗಿತ್ತು.
ನೀರಿನಲ್ಲಿ ಸಿಲುಕಿ ಒದ್ದಾಡುತ್ತಿದ್ದ ಯುವಕರನ್ನು ಗಮನಿಸಿದ ಗೂಡಿನ ಬಳಿಯ ನಿವಾಸಿಗಳಾದ ಶಮೀರ್ ಹಾಗೂ ಇಕ್ಬಾಲ್ ತಕ್ಷಣ ನೇತ್ರಾವತಿ ನದಿಗೆ ಧುಮುಕಿ ಮುಳುಗುತ್ತಿದ್ದ ಹಿಂದೂ ಬಾಂಧವರನ್ನು ಮೇಲೆತ್ತಿ ಪ್ರಾಣ ಉಳಿಸಿದ್ದಾರೆ. ಬದುಕುಳಿದ ಹಿಂದೂ ಯುವಕರು ಬಿ ಸಿ ರಸ್ತೆ ಸಮೀಪದ ಅಜ್ಜಿಬೆಟ್ಟು ನಿವಾಸಿಗಳೆಂದು ತಿಳಿದು ಬಂದಿದೆ.
ಈ ಘಟನೆಯಿಂದ ತೀರ್ವ ಅಸ್ವಸ್ಥರಾಗಿದ್ದ ಹಿಂದೂ ಯುವಕರನ್ನು ಸ್ಥಳೀಯರು ಆಸ್ಪತ್ರೆಗೆ ಸೇರಿಸಿದ್ದಾರೆ. ವಿಷಯ ತಿಳಿದ ಪೊಲೀಸರು ಸ್ಥಳಕ್ಕೆ ಆಗಮಿಸಿ ಘಟನೆಯ ಪರಿಶೀಲನೆ ನಡೆಸಿದ್ದಾರೆ.