ಉಳ್ಳಾಲ: ಲಾರಿ ಡಿಕ್ಕಿ ಹೊಡೆಸಿ ಕೊಲೆ ಯತ್ನ
ಮಂಗಳೂರು, ಜನವರಿ. 8 : ದ್ವಿಚಕ್ರ ವಾಹನದಲ್ಲಿ ತೆರಳುತ್ತಿದ್ದ ಇಬ್ಬರಿಗೆ ಲಾರಿ ಡಿಕ್ಕಿ ಹೊಡೆಸಿ, ಮರದ ದಿಮ್ಮಿಯಿಂದ ಹೊಡೆದು ಕೊಲೆಗೆ ಯತ್ನಿಸಿರುವ ಘಟನೆ ಶನಿವಾರ ಸಂಜೆ ಉಳ್ಳಾಲ ಪೊಲೀಸ್ ಠಾಣಾ ವ್ಯಾಪ್ತಿಯ ಕೋಟೆಪುರದಲ್ಲಿ ನಡೆದಿದೆ.
ಬಂಡಿಕೊಟ್ಯ ನಿವಾಸಿ ನಿಫಾನ್ (21) ಮತ್ತು ಮುಕ್ಕಚ್ಚೇರಿ ನಿವಾಸಿ ಹನೀಫ್ (21) ಎನ್ನುವರನ್ನು ಕೊಲೆ ಮಾಡಲು ಯತ್ನ ನಡೆದಿದೆ. ಶರೀಫ್, ಇಮ್ತಿಯಾಝ್, ಆತುಫ್, ಇರ್ಷಾದ್, ಹಕೀಂ ಮತ್ತು ಇಬ್ಬರು ಸಹೋದರರ ಸಹಿತ 25 ಮಂದಿಯ ತಂಡವೊಂದು ಈ ಕೊಲೆಗೆ ಯತ್ನ ಮಾಡಿದೆ ಎಂದು ಆರೋಪಿಸಲಾಗಿದೆ.
ಈ ತಂಡ ತಲವಾರು, ದೊಣ್ಣೆಗಳಿಂದ ಹೊಡೆದು ಹತ್ಯೆಗೆ ಯತ್ನಿಸಿದ್ದಾರೆಂದು ಆರೋಪಿಸಲಾಗಿದೆ. ಇಲೆಕ್ಟ್ರಿಷಿಯನ್ ಕೆಲಸ ಮಾಡುತ್ತಿರುವ ನಿಫಾನ್ ಮತ್ತು ಹನೀಫ್ ಕೆಲಸದ ನಿಮಿತ್ತ ಉಳ್ಳಾಲ ಕಡೆಗೆ ಆಕ್ಟೀವಾ ಸ್ಕೂಟರ್ ನಲ್ಲಿ ತೆರಳುತ್ತಿದ್ದರು.
ಈ ವೇಳೆ ಹಿಂಭಾಗದಿಂದ ಮರಳು ಹೇರಿಕೊಂಡು ಬಂದ ಲಾರಿ ಸ್ಕೂಟರಿಗೆ ಢಿಕ್ಕಿ ಹೊಡೆಸಿ ಇಬ್ಬರನ್ನು ಕೆಳಗೆ ಉರುಳಿಸಿದ್ದಾರೆ. ಬಳಿಕ ಮರದ ದಿಮ್ಮಿಯಿಂದ ಬಡಿದು ಕೊಲೆಗೆ ಯತ್ನಿಸಿದ್ದಾರೆ. ಹಾಗೂ ಆರೋಪಿಗಳು ನಿಫಾನ್ ಬಳಿಯಿದ್ದ 25,000 ರು ದೋಚಿದ್ದಾರೆಂದು ಆರೋಪಿಸಲಾಗಿದೆ.