ವರದಿ ತಯಾರಿಸಲು ಶಬರಿಮಲೆಗೆ ತೆರಳಲಿರುವ ಸಂಸದ ನಳಿನ್ ಕುಮಾರ್ ಕಟೀಲ್
ದಕ್ಷಿಣ ಕನ್ನಡ, ನವೆಂಬರ್ 19: ಕೇರಳ ಸರಕಾರ ಶಬರಿಮಲೆಯಲ್ಲಿ ನಡೆಸುತ್ತಿರುವ ದೌರ್ಜನ್ಯ ಹಾಗೂ ಅಯ್ಯಪ್ಪ ಭಕ್ತಾಧಿಗಳು ಅನುಭವಿಸುತ್ತಿರುವ ಸಮಸ್ಯೆಗಳ ಕುರಿತು ಅಧ್ಯಯನ ವರದಿ ತಯಾರಿಸಲು ದಕ್ಷಿಣ ಕನ್ನಡ ಲೋಕಸಭಾ ಸದಸ್ಯ ನಳಿನ್ ಕುಮಾರ್ ಕಟೀಲ್ ನಾಳೆ ನವೆಂಬರ್ 20 ರಂದು ಶಬರಿಮಲೆಗೆ ಭೇಟಿ ನೀಡಲಿದ್ದಾರೆ.
ಶಬರಿಮಲೆಯಲ್ಲಿ ವಾರ್ಷಿಕ ಮಕರವಿಳಕ್ಕು ಹಾಗೂ ಮಂಡಲ ಪೂಜೆ ನಿಮಿತ್ತ ಎರಡು ತಿಂಗಳ ದರ್ಶನಕ್ಕಾಗಿ ಶುಕ್ರವಾರ ನವೆಂಬರ್ 16 ಸಂಜೆಯಿಂದ ದೇವಸ್ಥಾನದ ಬಾಗಿಲು ತೆರೆದಿದ್ದು, ಶನಿವಾರ ನೆಂಬರ್ 17 ರಿಂದ ಆಯ್ಯಪ್ಪನ ದರ್ಶನ ಆರಂಭವಾಗಿದೆ. ಮಹಿಳೆಯರು ದೇವಾಲಯ ಪ್ರವೇಶಿಸಬಹುದು ಎಂಬ ಸುಪ್ರಿಂ ತೀರ್ಪಿನ ಕಾರಣ ಅಲ್ಲಿ ಉದ್ವಿಗ್ನ ಪರಿಸ್ಥಿತಿ ನಿರ್ಮಾಣವಾಗಿದೆ.
ದೇವರನ್ನು ನೋಡಲು ಲಿಂಗಭೇದ ಇರಬಾರದು: ಸಿದ್ದರಾಮಯ್ಯ
ಪೊಲೀಸ್ ಬಿಗಿ ಬಂದೋಬಸ್ತ್ನಲ್ಲಿ ನೂರಾರು ಭಕ್ತರು ದರ್ಶನ ಅಯ್ಯಪ್ಪನ ದರ್ಶನ ಪಡೆಯುತ್ತಿದ್ದಾರೆ. ಯಾವುದೇ ಅಹಿತಕರ ಘಟನೆ ನಡೆಯದಂತೆ ಶಬರಿಮಲೆ ಹಾಗೂ ಸುತ್ತಮುತ್ತಲ ಪ್ರದೇಶಗಳಲ್ಲಿ ಸಾವಿರಾರು ಪೊಲೀಸರು ಬಿಗಿ ಬಂದೋಬಸ್ತ್ ನಡೆಸಿದ್ದಾರೆ.
ಈ ಹಿಂದೆ ಶಬರಿಮಲೆಯಲ್ಲಿ ನಡೆದ ಘರ್ಷಣೆ ಗಳನ್ನು ಗಮನದಲ್ಲಿಟ್ಟು ಶಬರಿಮಲೆಯಲ್ಲಿ ಪೊಲೀಸರು ನಿಷೇಧಾಜ್ಞೆ ಹೇರಿದ್ದು, ರಾತ್ರಿ ವೇಳೆ ಶಬರಿಗಿರಿ ಸನ್ನಿಧಾನದಲ್ಲಿ ಯಾರೂ ತಂಗುವಂತಿಲ್ಲ ಎಂದು ಆದೇಶಿಸಿದ್ದಾರೆ. ಈ ನಡುವೆ ಹಲವಾರು ಅಯ್ಯಪ್ಪ ಭಕ್ತರನ್ನು ಪೊಲೀಸರು ಬಂಧಿಸಿದ್ದಾರೆ.
ಪಿಣರಾಯಿ ವಿರುದ್ದ ಒಡೆಯಿತೇ ಹಿಂದೂಗಳ ಸಹನೆಯ ಕಟ್ಟೆ: ಅಡ್ವಾಂಟೇಜ್ ಬಿಜೆಪಿ
ದಿನದಿಂದ ದಿನಕ್ಕೆ ಹದಗೆಡುತ್ತಿರುವ ಶಬರಿಮಲೆಯ ಪರಿಸ್ಥಿತಿ , ಅಲ್ಲಿ ನಡೆಯುತ್ತಿರುವ ವಿದ್ಯಮಾನಗಳು ಹಾಗೂ ಅಲ್ಲಿ ಭಕ್ತರು ಅನುಭವಿಸುತ್ತಿರುವ ಸಮಸ್ಯೆಗಳ ಕುರಿತು ವರದಿ ತಯಾರಿಸಲು ಕೇರಳ ಉಸ್ತುವಾರಿಯೂ ಆಗಿರುವ ಸಂಸದ ನಳಿನ್ ಕುಮಾರ್ ಕಟೀಲ್ ಹಾಗೂ ಕೇರಳ ಬಿಜೆಪಿ ಮುಖಂಡ ವಿ. ಮುರಳೀಧರನ್ ಅವರು ನವೆಂಬರ್ 20 ರಂದು ಶಬರಿಮಲೆಗೆ ತೆರಳಲಿದ್ದಾರೆ.
ನಾಳೆ ಮುಂಜಾನೆ ನಳಿನ್ ಕುಮಾರ್ ಕಟೀಲ್ ಅವರು ನಿಲಕ್ಕಲ್, ಪಂಪಾ ಹಾಗೂ ಸನ್ನಿದಾನ ಪ್ರದೇಶಗಳಿಗೆ ಭೇಟಿ ನೀಡಿ ಅಯ್ಯಪ್ಪ ಭಕ್ತರ ಸಮಸ್ಯೆಗಳನ್ನು ಹಾಗು ಸದ್ಯ ಅಲ್ಲಿನ ಪರಿಸ್ಥಿತಿ ಬಗ್ಗೆ ಅಧ್ಯಯನ ವರದಿ ತಯಾರಿಸಲಿದ್ದಾರೆ. ಅಲ್ಲದೆ ಶಬರಿಮಲೆ ಅಯ್ಯಪ್ಪ ದೇವರ ದರ್ಶನವನ್ನು ಪಡೆಯಲಿದ್ದಾರೆ ಎಂದು ಹೇಳಲಾಗಿದೆ. ಅಧ್ಯಯನ ನಡೆಸಿ ತಯಾರಿಸಿದ ವರದಿಯನ್ನು ಬಿಜೆಪಿಯ ಹಿರಿಯ ನಾಯಕರಿಗೆ ಸಲ್ಲಿಸಲಿದ್ದಾರೆ.
ಮತ್ತೆ ರಣರಂಗವಾದ ಶಬರಿಮಲೆ: 70 ಕ್ಕೂ ಹೆಚ್ಚು ಜನ ಪೊಲೀಸ್ ವಶಕ್ಕೆ
ಈ ನಡುವೆ ಕೇರಳದ ಬಿಜೆಪಿ ಮುಖಂಡ ಸುರೇಂದ್ರನ್ ಶಬರಿಮಲೆ ತೆರಳುವ ಸಂದರ್ಭದಲ್ಲಿ ಪೊಲೀಸರು ಬಂಧಿಸಿ ಶಬರಿಮಲೆಗೆ ತೆರಳದಂತೆ ತಡೆಯೊಡ್ಡಿದ್ದಾರೆ. ಈ ಹಿನ್ನೆಲೆಯಲ್ಲಿ ಕೆಋಳದಲ್ಲಿ ಬಿಜೆಪಿ ಕಾರ್ಯಕರ್ತರು ಪ್ರತಿಭಟನೆ ನಡೆಸುತ್ತಿದ್ದಾರೆ. ಈಗ ಮತ್ತೆ ಬಿಜೆಪಿ ಸಂಸದ ನಳಿನ ಕುಮಾರ್ ಕಟೀಲ್, ಶಬರಿಮಲೆಗೆ ತೆರಳುತ್ತಿರುವುದರಿಂದ ಕೇರಳ ಸರಕಾರ ಯಾವ ಕ್ರಮ ಕೈಗೊಳ್ಳಲಿದೆ ಎನ್ನುವುದು ಕಾದು ನೋಡಬೇಕಿದೆ.