ನಿಟ್ಟೆ ಸಹಭಾಗಿತ್ವದಲ್ಲಿ ನಗದುರಹಿತ ಮುನ್ನೂರು ಗ್ರಾಮಕ್ಕೆ ಚಾಲನೆ
ಮಂಗಳೂರು, ಡಿಸೆಂಬರ್. 19 : ನಿಟ್ಟೆ ವಿಶ್ವವಿದ್ಯಾಲಯ, ಸಿಂಡಿಕೇಟ್ ಬ್ಯಾಂಕ್ ಹಾಗೂ ಮುನ್ನೂರು ಗ್ರಾಮ ಪಂಚಾಯಿತಿ ಸಹಯೋಗದಲ್ಲಿ ಭಾನುವಾರ ನಡೆದ ನಗದುರಹಿತ ವ್ಯವಹಾರ ಮುನ್ನೂರು ಗ್ರಾಮಕ್ಕೆ ಚಾಲನೆ ನೀಡಲಾಯಿತು.
ಸಂಸದ ನಳಿನ್ ಕುಮಾರ್ ಕಟೀಲ್ ಈ ಕಾರ್ಯಕ್ರಮವನ್ನು ಉದ್ಘಾಟಿಸಿ ಬಳಿಕ ಮಾತನಾಡಿದ ಅವರು, ದೇಶದ ಹಮ್ಮೆಯ ಪ್ರದಾನಿ ನರೇಂದ್ರ ಮೋದಿಯವರು ಪಾಕಿಸ್ತಾನದ ಭಯೋತ್ಪಾದನೆ ವಿರುದ್ಧ ಸರ್ಜಿಕಲ್ ಸ್ಟ್ರೈಕ್ ನಡೆಸಿದ ಬಳಿಕ ನೋಟ್ ಬ್ಯಾನ್ ಸರ್ಜಿಕಲ್ ಸ್ಟ್ರೈಕ್ ನಡೆಸಿದ್ದು ಬಹಳ ಪರಿಣಾಮಕಾರಿಯಾಗಿದೆ.
ಇದರಿಂದ ಕಾಳಸಂತೆ ಭಯೋತ್ಪಾದನೆಯನ್ನು ಬೇರು ಸಮೇತ ಕಿತ್ತೆಸೆಯಬಹುದಾಗಿದ್ದು ವಿದ್ಯಾರ್ಥಿಗಳು ಪ್ರದಾನಿಯವರ ಕ್ಯಾಶ್ ಲೆಸ್ ಯೋಜನೆಯನ್ನು ಬೆಂಬಲಿಸಬೇಕೆಂದು ಸಂಸದ ನಳಿನ್ ಕುಮಾರ್ ಕಟೀಲ್ ಕರೆ ನೀಡಿದರು.
ಇವತ್ತಿನಿಂದ ನಾಳೆಗೆ ಯಾವುದನ್ನೂ ಪರಿವರ್ತನೆಗೊಳಿಸಲು ಸಾಧ್ಯವಿಲ್ಲ. ಗ್ರಾಮೀಣ ಜನರಿಗೆ ಕ್ಯಾಶ್ ಲೆಸ್ ವ್ಯವಹಾರ ನಡೆಸುವುದರ ಬಗ್ಗೆ ಕಾಲೇಜು ವಿದ್ಯಾರ್ಥಿಗಳು ತಿಳಿಸಿಕೊಡಲು ಮುಂದಾದಾಗ ಜನರು ಹೊಸ ಯೋಜನೆಗೆ ಕ್ರಮೇಣ ಒಗ್ಗುತಾರೆ.
ಜನ್ ಧನ್ ಯೋಜನೆಯು ಪ್ರಾರಂಭವಾದ ದಿವಸಗಳಲ್ಲೇ ದಕ್ಷಿಣ ಕನ್ನಡದ 80 ಶೇಕಡಾ ಜನತೆ ಖಾತೆ ಆರಂಭಿಸಿದ್ದು ಇದೀಗ 100 ಶೇಕಡಕ್ಕೆ ತಲುಪಿದ್ದೇ ಇದಕ್ಕೆ ಸ್ಪೂರ್ತಿ ಎಂದರು.
ನಗದುರಹಿತ ಯೋಜನೆ ದ.ಕ.ಜಿಲ್ಲೆಯ ಸುಳ್ಯ ತಾಲೂಕಿನ ಬಳ್ಪ ಗ್ರಾಮದಲ್ಲಿ ಜಾರಿಗೆ ತರಲಾಗಿದ್ದು 10 ದಿನದಲ್ಲೇ ಜನ ಜಾಗೃತರಾಗಿ ನಗದುರಹಿತ ಗ್ರಾಮವಾಗಿ ಮಾರ್ಪಟ್ಟಿದೆ.
ಇದೀಗ ಮುನ್ನೂರು ಗ್ರಾಮದಲ್ಲೂ ಯೋಜನೆ ಜಾರಿಗೆ ತರಲಾಗಿದ್ದು ಪ್ರತಿಯೊಬ್ಬರಲ್ಲೂ ಜಾಗೃತಿ ಮೂಡಿದರೆ ಹತ್ತೇ ದಿನದಲ್ಲಿ ನಗದುರಹಿತಗೊಂಡು ದ.ಕ.ಜಿಲ್ಲೆಯ ಎರಡನೇ ಕ್ಯಾಶ್ ಲೆಸ್ ಗ್ರಾಮವಾಗುವುದರಲ್ಲಿ ಸಂದೇಹವಿಲ್ಲ.
ನಿಟ್ಟೆ ವಿಶ್ವವಿದ್ಯಾಲಯದ ಕುಲಾಧಿಪತಿ ಎನ್.ವಿನಯ್ ಹೆಗ್ಡೆ ಮಾತನಾಡಿ, ನಗದುರಹಿತ ವ್ಯವಹಾರದಿಂದ ಜನಸಾಮಾನ್ಯರಿಗೆ ಸದ್ಯದ ಮಟ್ಟಿನಲ್ಲಿ ತೊಂದರೆಗಳಾಗುವುದು ಸಹಜ.
ಆದರೆ, ಅದು ತಾತ್ಕಾಲಿಕ.ಇಲ್ಲಿ ನಡೆಯುವ ಯಾವುದೇ ವ್ಯವಹಾರಗಳೂ ನಗದು ಮೂಲಕ ಆಗಿರುವುದರಿಂದ ಲೆಕ್ಕಕ್ಕೆ ಸಿಗದ ಹಣವಾಗಿ ಮಾರ್ಪಟ್ಟು ಶೇ.20ರಷ್ಟಿರುವ ಶ್ರೀಮಂತರು ಭ್ರಷ್ಟರು ಎನಿಸಿಕೊಳ್ಳುತ್ತಾರೆ.
ಈ ನಿಟ್ಟಿನಲ್ಲಿ ನಗದುರಹಿತ ವ್ಯವಹಾರ ಸಹಕಾರಿ, ಇದರಿಂದ ಸರ್ಕಾರದ ಬಳಿ ಹಣ ಹೆಚ್ಚು ಜಮೆಯಾಗಿ ಹೆಚ್ಚು ಯೋಜನೆಗಳನ್ನು ಜಾರಿಗೆ ತರಲು ಸಾಧ್ಯ ಎಂದು ಹೇಳಿದರು.