ಧುಮ್ಮಿಕ್ಕಿ ಹರಿದ ಶಾಂಭವಿ ನದಿ: ಮಳೆಬಾಧಿತ ಪ್ರದೇಶಕ್ಕೆ ಭೇಟಿ ಕೊಟ್ಟ ಸಂಸದ ನಳಿನ್
ಮಂಗಳೂರು, ಜುಲೈ.08: ಮಂಗಳೂರು ಹೊರವಲಯದ ಮೂಲ್ಕಿ ಬಳಿಯ ಇತಿಹಾಸ ಪ್ರಸಿದ್ಧ ಬಪ್ಪನಾಡು ದುರ್ಗಾಪರಮೇಶ್ವರಿ ದೇವಸ್ಥಾನಕ್ಕೆ ನೆರೆ ನೀರು ನುಗ್ಗಿದ್ದು, ಸಂಸದ ನಳಿನ್ ಕುಮಾರ್ ಕಟೀಲ್ ಭೇಟಿ ನೀಡಿದ್ದಾರೆ.
ಬೆಂಗಳೂರು ಮೂಲಕ ಜಾರ್ಖಂಡ್ ರಾಜ್ಯದ ರಾಂಚಿಗೆ ಅಧ್ಯಯನ ಪ್ರವಾಸಕ್ಕೆಂದು ತೆರಳುತ್ತಿದ್ದ ನಳಿನ್ ಕುಮಾರ್ ನಿನ್ನೆ ರಾತ್ರಿಯೇ ಪ್ರವಾಸ ಮೊಟಕುಗೊಳಿಸಿ, ಜಿಲ್ಲೆಗೆ ಆಗಮಿಸಿದ್ದರು. ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಭಾರೀ ಮಳೆಯ ಕಾರಣ ಪ್ರವಾಸ ರದ್ದುಗೊಳಿಸಿ ಇಂದು ಮಂಗಳೂರು ತಾಲೂಕಿನ ಮೂಲ್ಕಿ ಭಾಗದ ಮಳೆ ಪೀಡಿತ ಪ್ರದೇಶಕ್ಕೆ ತೆರಳಿದ್ದಾರೆ.
ಚಿತ್ರಗಳು : ಹಾರಂಗಿಯಿಂದ ಹಾಲ್ನೊರೆಯುಕ್ಕಿಸುತ್ತಾ ಹರಿದ ನೀರು
ನಿನ್ನೆ ಸುರಿದ ಭಾರೀ ಮಳೆಯಿಂದಾಗಿ ಶಾಂಭವಿ ನದಿ ಉಕ್ಕಿ ಹರಿದಿದ್ದು, ಹಲವೆಡೆ ತಗ್ಗುಪ್ರದೇಶಗಳಿಗೆ ನೆರೆ ನೀರು ನುಗ್ಗಿತ್ತು. ಬಪ್ಪನಾಡು ಕ್ಷೇತ್ರದ ಒಳಗೆ ನುಗ್ಗಿದ್ದ ನೀರು ಇಂದು ಬೆಳಗ್ಗೆಯೂ ಅಂಗಣದಲ್ಲಿ ಉಳಿದುಕೊಂಡಿತ್ತು. ಇದೇ ವೇಳೆ ಕಟೀಲು ದೇವಸ್ಥಾನ ಬಳಿ ಶಾಂಭವಿ ನದಿ ಧುಮ್ಮಿಕ್ಕಿ ಹರಿಯುತ್ತಿದೆ.
ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ವರುಣನ ಆರ್ಭಟ ಇಂದು ಮುಂಜಾನೆಯಿಂದ ತಗ್ಗಿದೆ. ಆದರೆ ಜುಲೈ 11ರ ತನಕ ಮಳೆ ಮುಂದುವರಿಯುವ ಬಗ್ಗೆ ಹವಾಮಾನ ಇಲಾಖೆ ಎಚ್ಚರಿಕೆ ನೀಡಿದ್ದು, ಜಿಲ್ಲಾಡಳಿತ ಈ ನಿಟ್ಟಿನಲ್ಲಿ ತುರ್ತು ನಿರ್ವಹಣೆಗೆ ಸಿದ್ಧಗೊಂಡಿದೆ.