ರಾಜ್ಯದಲ್ಲಿ 300 ಹೊಸ ವಸತಿ ಶಾಲೆಗೆ ಚಿಂತನೆ: ಆಂಜನೇಯ
ಮಂಗಳೂರು, ಜನವರಿ 17: ರಾಜ್ಯದಲ್ಲಿ ಮೊರಾರ್ಜಿ ದೇಸಾಯಿ ವಸತಿ ಶಾಲಾ ಮಾದರಿಯ 300 ನೂತನ ವಸತಿ ಶಾಲೆಗಳನ್ನು ಆರಂಭಿಸುವ ಗುರಿ ಇದೆ ಎಂದು ರಾಜ್ಯ ಸಮಾಜ ಕಲ್ಯಾಣ ಹಾಗೂ ಹಿಂದುಳಿದ ವರ್ಗಗಳ ಇಲಾಖೆಯ ಸಚಿವ ಹೆಚ್.ಆಂಜನೇಯ ತಿಳಿಸಿದ್ದಾರೆ.
ದೇರೆಬೈಲ್ ಬಳಿಯಲ್ಲಿ ರು. 12 ಕೋಟಿ ವೆಚ್ಚದಲ್ಲಿ ಸಮಾಜ ಕಲ್ಯಾಣ ಇಲಾಖೆಯ ನೇತೃತ್ವದಲ್ಲಿ ನಿರ್ಮಾಣಗೊಳ್ಳಲಿರುವ ಜಿಲ್ಲಾ ಅಂಬೇಡ್ಕರ್ ಭವನಕ್ಕೆ ಅವರು ಮಂಗಳವಾರ ಸಂಜೆ ಶಿಲಾನ್ಯಾಸವನ್ನು ನೆರವೇರಿಸಿದರು.'ಪ್ರಸಕ್ತ ರಾಜ್ಯದಲ್ಲಿ 560 ವಸತಿ ಶಾಲೆಗಳಿವೆ. ಆದರೂ ದಲಿತರು ಯಾರೂ ಶಿಕ್ಷಣದಿಂದ ವಂಚಿತರಾಗಬಾರದು ಎನ್ನುವ ನೆಲೆಯಲ್ಲಿ ವಸತಿ ಶಾಲೆಗಳನ್ನು ಹೆಚ್ಚಿಸಲು ತೀರ್ಮಾನಿಸಲಾಗಿದೆ' ಎಂದು'ಸಚಿವ ಆಂಜನೇಯ ತಿಳಿಸಿದರು.[ಪೌರಕಾರ್ಮಿಕರ ಮಕ್ಕಳಿಗೂ ಫಾರಿನ್ ಟೂರು,ಒಳ್ಳೆ ಸ್ಕೂಲು]
ಅಲ್ಲದೇ ಜಿಲ್ಲೆಯಲ್ಲಿರುವ ಕೊರಗರಿಗೆ ಅಂಬೇಡ್ಕರ್ ವಸತಿ ಯೋಜನೆಯಿಂದ ಒಂದೂವರೆ ಲಕ್ಷ ಹಾಗೂ ಸಮಾಜ ಕಲ್ಯಾಣ ಇಲಾಖೆಯಿಂದ 2 ಲಕ್ಷ ರೂ ಅನುದಾನದೊಂದಿಗೆ ಸುಮಾರು ಮೂರೂವರೆ ಲಕ್ಷ ರೂ. ವೆಚ್ಚದಲ್ಲಿ ಮನೆ ನಿರ್ಮಿಸಿಕೊಡುವ ಯೋಜನೆ ಸರಕಾರದ ಮುಂದಿದೆ. ಬೆಂಗಳೂರಿನಲ್ಲಿ ರು.150 ಕೋಟಿ ವೆಚ್ಚದಲ್ಲಿ ಅಂಬೇಡ್ಕರ್ ಸ್ಕೂಲ್ ಆಫ್ ಎಕಾನಮಿಕ್ಸ್ ಸಂಸ್ಥೆಯನ್ನು ಆರಂಭಿಸುವ ಯೋಜನೆ ಇದೆ. ಜೊತೆಗೆ ಈ ವರ್ಷ ನಿವೇಶನ ರಹಿತ ದಲಿತರಿಗೆ ರಾಜ್ಯದಲ್ಲಿ 4ಲಕ್ಷ ಮನೆ ನಿರ್ಮಿಸುವ ಗುರಿ ಹೊಂದಲಾಗಿದೆ ಎಂದು ಆಂಜನೇಯ ತಿಳಿಸಿದ್ದಾರೆ.
ಈ ಸಮಾರಂಭದಲ್ಲಿ ಆಹಾರ ಮತ್ತು ನಾಗರಿಕ ಪೂರೈಕೆ ಸಚಿವ ಯು.ಟಿ.ಖಾದರ್, ಜಿಲ್ಲಾ ಉಸ್ತುವಾರಿ ಸಚಿವ ಬಿ.ರಮಾನಾಥ ರೈ ಶಾಸಕ ಜೆ.ಆರ್.ಲೋಬೊ, ಐವನ್ ಡಿಸೋಜ, ಮೇಯರ್ ಹರಿನಾಥ್, ಜಿಲ್ಲಾಧಿಕಾರಿ ಡಾ.ಕೆ.ಜಿ.ಜಗದೀಶ್ ಇತರರು ಹಾಜರಿದ್ದರು.