ಆಳ್ವಾಸ್ ಸಂಸ್ಥೆ ತೇಜೋವಧೆ ವಿರೋಧಿಸಿ ಆ. 12 ರಂದು ಪ್ರತಿಭಟನೆ
ಮಂಗಳೂರು, ಆಗಸ್ಟ್ 4: ನಾಡಿಗೆ ಮಾದರಿಯಾಗಿ ಕಟ್ಟಿ ಬೆಳಸಿದ ಆಳ್ವಾಸ್ ಶಿಕ್ಷಣ ಸಂಸ್ಥೆಯ ವಿರುದ್ಧ ದೃಶ್ಯಮಾಧ್ಯಮಗಳು ಹಾಗೂ ಸಾಮಾಜಿಕ ಜಾಲತಾಣಗಳಲ್ಲಿ ಸುಳ್ಳು ಅಪಪ್ರಚಾರ ನಡೆಸುತ್ತಿರುವುದನ್ನು ವಿರೋಧಿಸಿ ಆ.12 ರಂದು ಮೂಡಬಿದಿರೆಯಲ್ಲಿ ಬೃಹತ್ ಪ್ರತಿಭಟನೆ ನಡೆಸಲು ಮೂಡಬಿದಿರೆ ನಾಗರಿಕರು ನಿರ್ಧರಿಸಿದ್ದಾರೆ.
ಮಾಜಿ ಸಚಿವ ಕೆ.ಅಮರನಾಥ ಶೆಟ್ಟಿ ಅಧ್ಯಕ್ಷತೆಯಲ್ಲಿ ಮೂಡಬಿದಿರೆಯ ಎಂ.ಸಿ.ಎಸ್ ಬ್ಯಾಂಕ್ ಸಭಾಂಗಣದಲ್ಲಿ ನಾನಾ ಸಂಘ ಸಂಸ್ಥೆಗಳು, ಉದ್ಯಮಿಗಳು, ಶಿಕ್ಷಣ ಸಂಸ್ಥೆಗಳ ಮುಖ್ಯ್ಲಸ್ಥರು ಹಾಗೂ ಡಾ. ಮೋಹನ್ ಆಳ್ವರ ಅಭಿಮಾನಗಳು ನಡೆಸಿದ ಸಭೆಯಲ್ಲಿ ಈ ನಿರ್ಧಾರಕ್ಕೆ ಬರಲಾಗಿದೆ.
ಮೂಡಬಿದಿರೆಯ ಶಾಂತಿ ಪ್ರಿಯರ ಊರು. ಆದರೆ ಅದನ್ನೇ ದೌರ್ಬಲ್ಯವೆಂದು ಪರಿಗಣಿಸಿ ಊರಿಗೆ, ಇಲ್ಲಿನ ಸಂಸ್ಥೆಗೆ ಕೆಟ್ಟ ಹೆಸರು ತರಲು ಪ್ರಯತ್ನಿಸಿದರೆ ಉಗ್ರ ಹೋರಾಟಕ್ಕೂ ಸಿದ್ಧ ಎಂಬ ಎಚ್ಚರಿಕೆಯನ್ನು ಸಭೆಯಲ್ಲಿ ನೀಡಲಾಯಿತು.
ಅವಿಭಜಿಕ ದ.ಕ. ಜಿಲ್ಲೆಯಲ್ಲಿ ಗುಣಮಟ್ಟದ ಶಿಕ್ಷಣ ನೀಡುತ್ತಿರುವ ಇತರ ಶಿಕ್ಷಣ ಸಂಸ್ಥೆಗಳ ವಿರುದ್ದವೂ ಭವಿಷ್ಯದಲ್ಲಿ ಇದೇ ರೀತಿಯ ಷಡ್ಯಂತ್ರವನ್ನು ದೃಶ್ಯಮಾಧ್ಯಮಗಳು ರೂಪಿಸುವ ಸಾಧ್ಯತೆ ಇದೆ. ಈ ಕಾರಣಕ್ಕೆ ಉಳಿದ ಶಿಕ್ಷಣ ಸಂಸ್ಥೆಗಳೂ ತಮ್ಮ ಭಿನ್ನಾಭಿಪ್ರಾಯವನ್ನು ಮರೆತು ಈ ಹೋರಾಟಕ್ಕೆ ನೈತಿಕ ಬೆಂಬಲವನ್ನು ನೀಡಬೇಕೆಂದು ಸಭೆಯಲ್ಲಿ ಮನವಿ ಮಾಡಲಾಯಿತು.
ಶಾಸಕ ಕೆ. ಅಭಯಚಂದ್ರ ಜೈನ್, "ಮಾತನಾಡಿ , ಕ್ರೀಡೆ, ಶಿಕ್ಷಣ, ಕಲೆಯ ಬೆಳವಣಿಗೆಯ ಬಗ್ಗೆ ಅಪಾರ ಕಾಳಜಿಯಿಂದ ಆಳ್ವಾಸ್ ಶಿಕ್ಷಣ ಸಂಸ್ಥೆಯನ್ನು ಕಟ್ಟಿ ಬೆಳೆಸಲಾಗಿದೆ. ಈ ಮೂಲಕ ನಾಡಿನ ಹೆಸರನ್ನು ರಾಷ್ಟ್ರ ಮಟ್ಟದಲ್ಲಿ ಗುರುತಿಸುವಂತೆ ಮಾಡಿದ ಈ ಸಂಸ್ಥೆಯ ಬಗ್ಗೆ ನಾಡಿನ ಜನ ಅಪಾರ ಪ್ರೀತಿ - ಗೌರವ ಬೆಳೆಸಿಕೊಂಡಿದ್ದಾರೆ," ಎಂದು ಹೇಳಿದರು.
"ಈ ಶಿಕ್ಷಣ ಸಂಸ್ಥೆಯ ಬಗ್ಗೆ ಸರಿಯಾದ ಜ್ಯಾನವಿಲ್ಲದ ದೃಶ್ಯಮಾಧ್ಯಮದವರು ಸುಳ್ಳು ಅಪಪ್ರಚಾರ ನಡೆಸಿದ್ದಾರೆ. ಮಾಧ್ಯಮಗಳಿಗೆ ತಿಳಿವಳಿಕೆ ನೀಡುವ ಕೆಲಸ ಜನರಿಂದಾಗಬೇಕು. ಆಳ್ವಾಸ್ ನಿಂದಾಗಿ ಜನಸಾಮಾನ್ಯ ವಿದ್ಯಾರ್ಥಿಗಳಿಗೆ ಮೆಡಿಕಲ್, ಕೆಎಎಸ್, ಐಎಎಸ್, ಪ್ರವೇಶ ಪಡೆಯಲು ಸಾಧ್ಯವಾಗಿವೆ. ಇದನ್ನು ನಾವು ಅರ್ಥ ಮಾಡಿಕೊಳ್ಳಬೇಕು. ಕಾವ್ಯಳ ಮನೆಯವರಿಗೂ ಸಾಂತ್ವನ ನೀಡಬೇಕು. ಪೊಲೀಸ್ ವರದಿಯಲ್ಲಿ ಯಾರಾದರೂ ತಪ್ಪಿತಸ್ಥರೆಂದು ಕಂಡು ಬಂದಲ್ಲಿ ಅವರಿಗೆ ಶಿಕ್ಷೆಯಾಗಲಿ. ಆಳ್ವಾಸ್ ನಲ್ಲಿ ನಡೆಯುವ ಎಲ್ಲ ಪ್ರಾಮಾಣಿಕ ಕೆಲಸಗಳಿಗೆ ತಾನು ಬೆಂಬಲ ನೀಡುತ್ತೇನೆ," ಎಂದು ಅಭಯಚಂದ್ರ ಜೈನ್ ಹೇಳಿದರು.
ಸಮಾರಂಭದ ಅಧ್ಯಕ್ಷತೆ ವಹಿಸಿದ್ದ ಮಾಜಿ ಸಚಿವ. ಕೆ.ಅಮರನಾಥ ಶೆಟ್ಟಿ ಮಾತನಾಡಿ , ಹೋರಾಟದ ರೂಪುರೇಷೆ ನೀಡಿದರು. "ಆಳ್ವಾಸ್ ನಲ್ಲಿ ಯಾರಿಗೂ ಯಾವುದೇ ರೀತಿಯ ತಾರತಮ್ಯ ಮಾಡಿಲ್ಲ. ಎಲ್ಲ ಜಾತಿ ಧರ್ಮದವರನ್ನು ಸಮಾನವಾಗಿ ಕಾಣುವ ನಿಜಾರ್ಥದ ಜಾತ್ಯಾತೀತ ಸಂಸ್ಥೆಯಿದು . ಇಂತಹ ಸಂಸ್ಥೆಯ ವಿರುದ್ಧ ಅಪಪ್ರಚಾರ ಸಲ್ಲದು . ಅವರಿಗೆ ನೈತಿಕ ಧೈರ್ಯ ತುಂಬುವ ಕೆಲಸವಾಗಬೇಕು," ಎಂದರು.