ಮಾಜಿ ಪೊಲೀಸ್ ಅಧಿಕಾರಿ ಜೊತೆಗಿದ್ದ ಯುವಕ ಕಣ್ಮರೆ ಪ್ರಕರಣ:ಹೇಬಿಯಸ್ ಕಾರ್ಪಸ್ ಸಲ್ಲಿಸಿದ ಕುಟುಂಬಸ್ಥರು
ಮಂಗಳೂರು, ನವೆಂಬರ್ 23: ಮಾಜಿ ಪೊಲೀಸ್ ಅಧಿಕಾರಿಯೊಬ್ಬರ ಜೊತೆಗಿದ್ದ ಯುವಕನ ನಿಗೂಢ ಕಣ್ಮರೆ ಪ್ರಕರಣಕ್ಕೆ ಸಂಬಂಧಿಸಿದಂತೆ ಯುವಕನ ಹೆತ್ತವರು ಹೈಕೋರ್ಟ್ ಮೆಟ್ಟಿಲೇರಿದ್ದಾರೆ. ಮಗನ ಕಣ್ಮರೆ ಪ್ರಕರಣಕ್ಕೆ ಸಂಬಂಧಿಸಿದಂತೆ ಇದೀಗ ಪೋಷಕರು ಹೇಬಿಯಸ್ ಕಾರ್ಪಸ್ ಅರ್ಜಿ ಸಲ್ಲಿಸಿದ್ದಾರೆ.
ಅಷ್ಟೇ ಅಲ್ಲ, ಯುವಕ ಕಣ್ಮರೆಯಾಗುವುದರ ಹಿಂದೆ ಮಾಜಿ ಪಿಎಸ್ಐ ಮದನ್ ಅವರ ಕೈವಾಡವಿರುವುದಾಗಿ ಯುವಕನ ಪೋಷಕರು ಆರೋಪಿಸಿದ್ದಾರೆ.
ಮಾಜಿ ಪಿಎಸ್ಐ ಮದನ್ ಜೊತೆಗಿದ್ದ ಯುವಕ ನಿಗೂಢವಾಗಿ ಕಣ್ಮರೆ!
ಶಕ್ತಿ ನಗರದ ಆಟೋ ಚಾಲಕ ಶಿವಕುಮಾರ್ ಮತ್ತು ಸಾಕಮ್ಮ ದಂಪತಿಯ ಪುತ್ರ ವಿನಾಯಕ್ ನವೆಂಬರ್ 8 ರಂದು ನಾಪತ್ತೆಯಾಗಿದ್ದು, ನವೆಂಬರ್ 15 ರಂದು ಮದನ್ ಅವರು ವಿನಾಯಕ್ ಪೋಷಕರಿಗೆ ಕರೆಮಾಡಿ ಈ ವಿಚಾರ ತಿಳಿಸಿದ್ದಾರೆ.
ಈ ಹಿನ್ನೆಲೆಯಲ್ಲಿ ವಿನಾಯಕನ ಪೋಷಕರು ಮದನ್ ಅವರ ವಿರುದ್ಧ ಪ್ರಕರಣ ದಾಖಲಿಸಿದ್ದರು. ಪುತ್ರನ ನಾಪತ್ತೆಗೆ ಮಾಜಿ ಪಿಎಸ್ಐ ಮದನ್ ಕಾರಣ. ಮಂಗಳೂರಿನ ಪೊಲೀಸರ ತನಿಖೆಯಲ್ಲಿ ನಂಬಿಕೆ ಇಲ್ಲ. ಆದ ಕಾರಣ ಹೇಬಿಯಸ್ ಕಾರ್ಪಸ್ ಅರ್ಜಿ ಸಲ್ಲಿಸಿದ್ದೇವೆ ಎಂದು ವಿನಾಯಕ್ ಪೋಷಕರು ತಿಳಿಸಿದ್ದಾರೆ.
ಪೊಲೀಸ್ ಸಮವಸ್ತ್ರ ಕಳಚಿಟ್ಟು ರಾಜಕಾರಣಿಯಾಗಲು ಹೊರಟ ಮಂಗಳೂರಿನ ಮದನ್
ಕಳೆದ ಚುನಾವಣೆ ಸಂದರ್ಭದಲ್ಲಿ ಪೊಲೀಸ್ ಇಲಾಖೆಗೆ ಗುಡ್ ಬೈ ಹೇಳಿ ರಾಜಕೀಯಕ್ಕೆ ಎಂಟ್ರಿ ಕೊಟ್ಟಿದ್ದ ಮದನ್ ಮಂಗಳೂರು ದಕ್ಷಿಣ ವಿಧಾನಸಭಾ ಕ್ಷೇತ್ರದಿಂದ ಬಿಜೆಪಿ ಟಿಕೆಟ್ ಗಾಗಿ ಲಾಬಿ ನಡೆಸಿದ್ದರು. ಆ ಬಳಿಕ ಚುನಾವಣೆಗೆ ಸ್ಪರ್ಧಿಸಲು ಬಿಜೆಪಿಯಿಂದ ಟಿಕೆಟ್ ಸಿಗದ ಕಾರಣ ಪಕ್ಷೇತರರಾಗಿ ಸ್ಪರ್ಧಿಸಿ ಚುನಾವಣೆಯಲ್ಲಿ ಸೋಲು ಕಂಡಿದ್ದರು.
ಖಾಕಿ ಕಳಚಿಟ್ಟು ಮಂಗಳೂರಿನಲ್ಲಿ ಚುನಾವಣಾ ಪ್ರಚಾರ ಆರಂಭಿಸಿದ ಮದನ್
ಚುನಾವಣಾ ಸಮಯದಲ್ಲಿ ಮದನ್ ಜೊತೆ ಮತಯಾಚನೆ ಕಾರ್ಯದಲ್ಲಿ ತೊಡಗಿಸಿಕೊಂಡಿದ್ದ ಇಂಜಿನಿಯರಿಂಗ್ ವಿದ್ಯಾರ್ಥಿ ವಿನಾಯಕ್ ಈಗ ನಾಪತ್ತೆಯಾಗಿದ್ದಾನೆ. ಚುನಾವಣೆ ಬಳಿಕ ಮದನ್ ಅವರೊಂದಿಗಿದ್ದ ವಿನಾಯಕ್ ನಿಗೂಢವಾಗಿ ನಾಪತ್ತೆಯಾಗಿರುವುದು ಇತ್ತೀಚೆಗೆ ಬೆಳಕಿಗೆ ಬಂದಿತ್ತು.
ಬಿಜೈಯ ಅಪಾರ್ಟ್ ಮೆಂಟ್ ವೊಂದರಲ್ಲಿ ವಾಸವಾಗಿದ್ದ ಮದನ್ ಜೊತೆಗೆ ವಿನಾಯಕ್ ಕೂಡ ವಾಸವಾಗಿದ್ದ. ಆದರೆ ಈಗ ವಿನಾಯಕ್ ಏಕಾಏಕಿ ಕಣ್ಮರೆಯಾಗಿದ್ದಾನೆ.