ಮಂಗಳೂರಿನ ಬೆಡಗಿ ಶ್ರೀನಿಧಿ ಸುಪ್ರ ವಿಶ್ವಸುಂದರಿ ಜತೆ ಮಾತುಕತೆ
ಮಂಗಳೂರು, ಡಿಸೆಂಬರ್ 15: ಪೋಲ್ಯಾಂಡ್ ದೇಶದ ಕ್ರಿನಿಕ್ ನ ವಿಶಾಲವಾದೊಂದು ವೇದಿಕೆಯಲ್ಲಿ ಡಿಸೆಂಬರ್ 2ರಂದು ವಿಶ್ವದ 72 ಮಂದಿ ಸ್ಪರ್ಧಿಗಳನ್ನು ಹಿಂದಿಕ್ಕಿ ತಾನೇ ಜಗತ್ತಿನ ಅತ್ಯಂತ ಸುಂದರಿ ಎಂದು ಬೀಗಿದ ಕ್ಷಣ. ನೋಡನೋಡುತ್ತಿದ್ದಂತೆ ತೀರ್ಪುಗಾರರು ಪ್ರಸ್ತುತ ವರ್ಷದ ಮಿಸ್ ಸುಪ್ರ ಇಂಟರ್ ನ್ಯಾಶನಲ್' ಸ್ಪರ್ಧೆ ಫಲಿತಾಂಶವನ್ನು ಘೋಷಿಸಿಯೇ ಬಿಟ್ಟರು. ಮಂಗಳೂರಿನ ಬೆಡಗಿ ಶ್ರೀನಿಧಿ ಶೆಟ್ಟಿ ಜೀವಮಾನದ ಗುರಿಸಾಧನೆಯ ಸಂತಸಕ್ಕೆ ಪಾರವೇ ಇರಲಿಲ್ಲ.[ದಕ್ಷಿಣ ಆಫ್ರಿಕಾದ ಚೆಲುವೆಗೆ ಒಲಿದ ವಿಶ್ವ ಸುಂದರಿ ಪಟ್ಟ]
ಪ್ರಶಸ್ತಿ ಮುಡಿಗೇರಿಸಿಕೊಂಡ ಶ್ರೀನಿಧಿ ಶೆಟ್ಟಿ ಅವರಿಗೆ ತಂದೆಯೇ ಮಾರ್ಗದರ್ಶಕ, ಆರಾಧ್ಯದೈವ. ಬಾಲ್ಯದಲ್ಲೇ ತನ್ನ ತಾಯಿಯನ್ನು ಕಳೆದುಕೊಂಡ ಶ್ರೀನಿಧಿಗೆ ತಂದೆಯೇ ಎಲ್ಲಾ. ತನ್ನೆಲ್ಲಾ ಸಾಧನೆಯ ಹಿಂದಿದ್ದವರು ನನ್ನ ಅಪ್ಪ ಎಂದಾಗ ಅಪ್ಪನ ಕಣ್ಣೂ ತೇವಗೊಳ್ಳುತ್ತದೆ; ಜೀವನ ಸಾರ್ಥಕವೆನಿಸಿದ ಕ್ಷಣದ ಬಗ್ಗೆ ಕೆಲವೊಂದು ಮಾಹಿತಿಯನ್ನು ಒನ್ ಇಂಡಿಯಾದೊಂದಿಗೆ ಹಂಚಿಕೊಂಡಿದ್ದಾರೆ.[ಭದ್ರಾವತಿಯ ಆಶಾ ಭಟ್ ಜಗಮೆಚ್ಚಿದ ಸುಂದರಿ]
ಬಾಲ್ಯದ ಚುರುಕಿನ ಹುಡುಗಿ ಶ್ರೀನಿಧಿ
ತಂದೆ ರಮೇಶ್ ಶೆಟ್ಟಿ ಹಾಗೂ ಕುಶಲ ಶೆಟ್ಟಿಯವರ ಮೂವರು ಹೆಣ್ಮಕ್ಕಳಲ್ಲಿ ಒಬ್ಬರು ಶ್ರೀನಿಧಿ. ಹುಟ್ಟಿದ್ದು ಮುಂಬೈಯಲ್ಲಾದರೂ ಬಾಲ್ಯಗಳನ್ನು ಕಳೆದಿದ್ದು ಮುಲ್ಕಿ ತಾಳಿಪಡ್ಪುವಿನ ಮನೆಯಲ್ಲೇ. ಇಲ್ಲೇ ಪಕ್ಕದ ನಾರಾಯಣ ಗುರು ಶಾಲೆಯಲ್ಲಿ ಓದು. ಬಾಲ್ಯದಲ್ಲೇ ಚುರುಕಿನ ಹುಡುಗಿ. ಕಲಿಕೆ, ನೃತ್ಯ, ಕ್ರೀಡೆ, ಚರ್ಚಾಸ್ಪರ್ಧೆಗಳಲ್ಲಿ ಇವರಿಗೆ ಬಹುಮಾನ ಕಟ್ಟಿಟ್ಟ ಬುತ್ತಿ.
ತಾಯಿ ಸ್ಥಾನ ತುಂಬಿದ ತಂದೆ
ತಾನು ಒಂಭತ್ತನೆ ತರಗತಿಯಲ್ಲಿರುವಾಗಲೇ ತಾಯಿಯನ್ನು ಕಳೆದುಕೊಂಡರು. ರಮೇಶ್ ಶೆಟ್ಟಿ ತಾಯಿ ಸ್ಥಾನದಲ್ಲಿ ನಿಂತು ಮಕ್ಕಳ ಅಭ್ಯುದಯಕ್ಕಾಗಿ ದುಡಿದರು. ಹೆಣ್ಮಕ್ಕಳಿಗೆ ಉತ್ತಮ ಶಿಕ್ಷಣ ನೀಡಿದ್ದಾರೆ. ಮೊದಲನೆಯ ಮಗಳಿಗೆ ಮದುವೆಯಾಗಿದೆ.
ಮಾಡೆಲಿಂಗ್ ,ಸೌಂದರ್ಯ ಸ್ಪರ್ಧೆಯ ಮಿಂಚು
ಶ್ರೀನಿಧಿಗೆ ಬಾಲ್ಯದಲ್ಲೇ ತಾನು ಏನಾದರು ಸಾಧನೆ ಮಾಡಬೇಕೆಂಬ ತುಡಿತವಿತ್ತು. ಈ ನಡುವೆ ಬೆಂಗಳೂರಿನ ಕನಕ್ ಪಾಲ್ ಇಂಜಿನಿಯರಿಂಗ್ ಕಾಲೇಜಿನಲ್ಲಿ ಪದವಿ ಪೂರೈಸಿ ಇಲ್ಲಿನ ಅಕ್ರೆಂಚರ್ ಸಂಸ್ಥೆಯಲ್ಲಿ ಉದ್ಯೋಗ ಲಭಿಸಿತ್ತು. ದೈವದತ್ತವಾಗಿ ಬಂದ ಚೆಲುವಿಗೆ ತಕ್ಕಂತೆ ಮಾಡೆಲಿಂಗ್ ನಲ್ಲೂ ಕಾರ್ಯನಿರ್ವಹಿಸಿದರು. ಅನೇಕ ಸೌಂದರ್ಯ ಸ್ಪರ್ಧೆಗಳಲ್ಲಿ ಮಿಂಚಿದರು.
ಆತ್ಮವಿಶ್ವಾಸ ನೀಡಿದ ತಂದೆಗೆ ಸಂದ ಗೆಲುವು
ಇದು ತನ್ನ ಶ್ರಮ ಹಾಗೂ ವಿಶ್ವಾಸಕ್ಕೆ ಸಂದ ಗೆಲುವು ಅನ್ನುತ್ತಾರೆ ಶ್ರೀನಿಧಿ. 23 ವರ್ಷದ ಸುಂದರಿ ಇಂಥದ್ದೊಂದು ಗೆಲುವನ್ನು ನಿರೀಕ್ಷಿಸಿದ್ದರಂತೆ. ಪ್ರತೀ ಹಂತದ ಸ್ಪರ್ಧೆಯಲ್ಲೂ ಗೆಲುವಿಗಾಗಿ ಆತ್ಮವಿಶ್ವಾಸದಿಂದಲೇ ಭಾಗವಹಿಸಿದ್ದೆ. ಗೆಲುವು ತನ್ನದಾಯಿತು. ಪ್ರತೀ ಕ್ಷಣದಲ್ಲೂ ತಂದೆಯನ್ನೇ ನೆನೆಸಿಕೊಂಡರಂತೆ. ಅವರೇ ಕಣ್ಮುಂದೆ ಬರುತ್ತಿದ್ದರು ಎನ್ನುತ್ತಾರೆ.
ನನಗೂ ಚಿತ್ರಗಳಲ್ಲಿ ನಟಿಸುವಾಸೆಯಿದೆ
ಈಗ ಒಂದು ವರ್ಷ ವಿಶ್ವಪರ್ಯಟನೆ. ಮುಂದೆಯೂ ಮಾಡೆಲಿಂಗ್ ನಲ್ಲಿಯೇ ಮುಂದುವರಿಯುತ್ತೇನೆ. ಈಗಾಗಲೇ ಸಿನೆಮಾ ನಟನೆಗೆ ಆಫರ್ ಗಳು ಬಂದಿವೆ. ಆದರೆ, ಒಪ್ಪಂದದ ಪ್ರಕಾರ ಒಂದು ವರ್ಷ ಸಾಧ್ಯವಿಲ್ಲ. ಮುಂದೆ ಇಂತಹ ಅವಕಾಶ ಬಂದಾಗ ಎಲ್ಲಾ ಭಾಷೆಯಲ್ಲೂ ನಟಿಸುವಾಸೆಯಿದೆ ಎಂದರು.
ಹುಟ್ಟೂರಿನಲ್ಲಿ ಕಂಡ ಸಂತಸ
ರತ್ನಖಚಿತ ಕಿರೀಟದೊಂದಿಗೆ ತಾಯ್ನಾಡಿಗೆ ಕಾಲಿಟ್ಟಾಗ ಅವರನ್ನು ಅಭಿಮಾನದಿಂದ ಬರಮಾಡಿಕೊಂಡರು ಬಂಧುಗಳು, ಊರ ಮಹನೀಯರು. ಶಿಕ್ಷಣ, ಉದ್ಯೋಗದ ನಿಮಿತ್ತ ವರ್ಷಗಳ ಹಿಂದೆ ಊರು ಬಿಟ್ಟು ಬೆಂಗಳೂರಿಗೆ ಸೇರಿದ್ದರು ಶ್ರೀನಿಧಿ ಹಾಗೂ ಅವರ ಕುಟುಂಬ. ಇದೀಗ ತನ್ನ ಹುಟ್ಟೂರಾದ ಮುಲ್ಕಿ ತಾಳಿಪಡ್ಪುವಿಗೆ ಬಂದಾಗ ತಮ್ಮ ದೈವದೇವರಿಗೆ ಪೂಜೆ ಅರ್ಪಿಸಿದರು. ಊರವರು ಹೆಮ್ಮೆಯ ಪುತ್ರಿಯನ್ನು ಸನ್ಮಾನಿಸಿದರು.
ಶ್ರೀನಿಧಿಗೆ ಈವರೆಗೆ ಸಂದ ಪ್ರಶಸ್ತಿ, ಗೌರವ
* ಬೆಂಗಳೂರು ಕ್ಲೀನ್ ಅಂಡ್ ಕ್ಲಿಯರ್ ಫೇಸ್ -2012 ಸ್ಪರ್ಧೆಯಲ್ಲಿ ಐದನೆ ಸ್ಥಾನ
* ಮಿಸ್ ಸೌತ್ ಇಂಡಿಯಾ-2015 ಸ್ಪರ್ಧೆಯಲ್ಲಿ ಮಿಸ್ ಕ್ವೀನ್ ಕರ್ನಾಟಕ, ಮಿಸ್ ಬ್ಯೂಟಿಫುಲ್ ಸ್ಮೈಲ್ ಪ್ರಶಸ್ತಿ
* ಮಿಸ್ ಕ್ವೀನ್ ಆಫ್ ಇಂಡಿಯಾ-2015 ಸ್ಪರ್ಧೆಯಲ್ಲಿ ಪ್ರಥಮ ರನ್ನರ್ ಅಪ್
* ಯಮಹ ಫ್ಯಾಸಿನೊ ಮಿಸ್ ದಿವಾ 2016 ಸ್ಪರ್ಧೆಯಲ್ಲಿ ಮಿಸ್ ಬ್ಯೂಟಿಫುಲ್, ಮಿಸ್ ಫೊಟೊಜೆನಿಕ್ ಪ್ರಶಸ್ತಿ.