ಚಾಕಲೇಟು ನೆಪದಲ್ಲಿ ಅಪಹರಣ ಯತ್ನ, ಪಾರಾದ ಬಾಲಕ
ಮಂಗಳೂರು, ನವೆಂಬರ್ 23: ಚಾಕಲೇಟು ನೀಡುವ ನೆಪದಲ್ಲಿ 7ನೇ ತರಗತಿ ಬಾಲಕನನ್ನು ಅಪಹರಿಸಲು ಯತ್ನಿಸಿದ ಘಟನೆ ಬಂಟ್ವಾಳ ತಾಲೂಕಿನ ಕರಿಯಂಗಳ ಗ್ರಾಮದ ಪೂಂಚಮೆಯಲ್ಲಿ ಮಂಗಳವಾರ ನಡೆದಿದೆ. ಅದರೆ ಬಾಲಕ ಸಮಯಪ್ರಜ್ಞೆ ಮೆರೆದು ಪಾರಾಗಿದ್ದಾನೆ.
ಈಗಾಗಲೇ ಕರಾವಳಿಯಾದ್ಯಂತ ಮಕ್ಕಳ ಅಪಹರಣ ಪ್ರಕರಣ ದಿನೇ ದಿನೇ ಹೆಚ್ಚಾಗುತ್ತಿದೆ. ಸಾಮಾಜಿಕ ಜಾಲತಾಣಗಳಲ್ಲಿಯೂ ಈ ವಿಚಾರ ಚರ್ಚೆಗೆ ಗ್ರಾಸವಾಗಿದೆ. ಇಂತಹದ್ದೇ ಅಪಹರಣ ಘಟನೆ ಮಂಗಳೂರಿನ ಕೀನ್ಯಾದಲ್ಲಿ ಕೂಡಾ ನಡೆದಿತ್ತು. ಇದರ ಬೆನ್ನಲ್ಲೇ ಮತ್ತೊಂದು ಆಘಾತಕಾರಿ ಅಪಹರಣ ಪ್ರಕರಣ ಮರುಕಳಿಸಿದೆ. ಬಂಟ್ವಾಳ ತಾಲೂಕಿನ ಕರಿಯಂಗಳ ಗ್ರಾಮದ 7ನೇ ತರಗತಿಯ ವಿದ್ಯಾರ್ಥಿಗೆ ಚಾಕಲೇಟು ನೀಡಿ, ಅಪಹರಿಸಲು ಯತ್ನಿಸಲಾಗಿತ್ತು. ಆದರೆ ವಿದ್ಯಾರ್ಥಿ ತಪ್ಪಿಸಿಕೊಂಡು ಪಾರಾಗಿದ್ದಾನೆ.[ಮಂಗಳೂರಿನ ಕಿನ್ಯದಲ್ಲಿ ಬಾಲಕನ ಅಪಹರಣಕ್ಕೆ ಯತ್ನ]
ಕರಿಯಂಗಳ ಗ್ರಾಮದ ಸಾಣೂರು ನಿವಾಸಿ ವಾಮನ ಎಂಬುವರ ಮಗ ನಿಖಿಲ್ (12) ಕಲ್ಲಡ್ಕ ಶ್ರೀರಾಮ ಶಾಲೆಯ ಏಳನೆ ತರಗತಿ ವಿದ್ಯಾರ್ಥಿ.ಮಂಗಳವಾರ ಬೆಳಿಗ್ಗೆ ನಿಖಿಲ್ ಶಾಲಾ ಬಸ್ ಹಿಡಿಯಲು ಮನೆಯಿಂದ ನಡೆದುಕೊಂಡು ಹೋಗುವ ಸಂದರ್ಭದಲ್ಲಿ ಕಪ್ಪು ಬಣ್ಣದ ಓಮ್ನಿ ಕಾರಿನಲ್ಲಿ ಬಂದ ದುಷ್ಕರ್ಮಿಗಳು ಚಾಕಲೇಟು ನೀಡುತ್ತೇವೆ ಬಾ ಎಂದು ಹೇಳಿದ್ದಾರೆ. ಅದನ್ನು ನಿರಾಕರಿಸಿದ ನಿಖಿಲ್ ಭಯದಿಂದ ಓಡಿದ್ದಾನೆ. ಆದರೆ ನಿಖಿಲ್ ಉಪಾಯದಿಂದ ರಸ್ತೆ ಮೂಲಕ ಹೋಗದೆ ಕಾಲುದಾರಿಯಲ್ಲಿ ತಪ್ಪಿಸಿಕೊಂಡು ಮನೆ ಸೇರಿದ್ದಾನೆ. ಬಳಿಕ ದುಷ್ಕರ್ಮಿಗಳು ಕಾರನ್ನು ತಿರುಗಿಸಿ ಅಲ್ಲಿಂದ ಪರಾರಿಯಾಗಿದ್ದಾರೆ ಎನ್ನಲಾಗಿದೆ.
ಘಟನೆಯಾದ ಬಳಿಕ ಬಾಲಕ ಹೆದರಿ ಹೆತ್ತವರಲ್ಲಿ ನಡೆದ ವಿಷಯ ತಿಳಿಸಿದ್ದಾನೆ. ಸ್ಥಳೀಯರು ಬಾಲಕನ ಮನೆಗೆ ಹೋಗಿ ಧೈರ್ಯ ಹೇಳಿದ್ದಾರೆ. ಬಳಿಕ ನಿಖಿಲ್ ಪೋಷಕರು ಬಂಟ್ವಾಳ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದಾರೆ. ಸಮಯ ಪ್ರಜ್ಞೆ ಮೆರೆದ ನಿಖಿಲ್ ಕಾಲು ದಾರಿಯಲ್ಲಿ ಓಡಿ ಪಾರಾಗಿದ್ದಾನೆ. ನಿಜಕ್ಕೂ ಆತನ ದಿಟ್ಟತನ ಪ್ರಶಂಸನೀಯ. ಆತನನ್ನು ಮಾದರಿಯಾಗಿ ಇಟ್ಟುಕೊಂಡು ಬಂದ ಸಮಸ್ಯೆಯನ್ನು ಧೈರ್ಯದಿಂದ ಬಗೆಹರಿಸಲು ಪ್ರಯತ್ನಿಸುವುದು ಉತ್ತಮ. ಇದರಿಂದ ದುಷ್ಕರ್ಮಿಗಳಿಗೆ ತಕ್ಕ ಪಾಠ ಕಲಿಸಿದಂತಾಗುತ್ತದೆ.