ಪ್ರವಾಹ ಸಂತ್ರಸ್ತರ ಹೆಸರಲ್ಲಿ ವಸೂಲಿ ಮಾಡ್ತಿದ್ದವರು ಪೊಲೀಸರ ವಶಕ್ಕೆ
Recommended Video
ಮಂಗಳೂರು, ಆಗಸ್ಟ್ 20: ಕೊಡಗು ಹಾಗೂ ಕೇರಳದಲ್ಲಿ ಅತಿವೃಷ್ಟಿಗೆ ಸಾವಿರಾರು ಮಂದಿ ನಿರಾಶ್ರಿತರಾಗಿದ್ದಾರೆ. ತಮ್ಮದೆಲ್ಲವನ್ನೂ ಕಳೆದುಕೊಂಡು ಬೀದಿಗೆ ಬಿದ್ದಿದ್ದಾರೆ. ಆ ಜನರಿಗಾಗಿ ದೇಶವೇ ಮಮ್ಮಲ ಮರಗುತ್ತಿದೆ. ದೇಶದ ಮೂಲೆ ಮೂಲೆಗಳಿಂದ ಸಹಾಯ ಹರಿದು ಬರುತ್ತಿದೆ.
ಈ ದುರಂತದಲ್ಲಿಸಂತ್ರಸ್ತರ ನೆರವಿಗೆ ರಾಜ್ಯದೆಲ್ಲೆಡೆಯಿಂದ ಜನರು ಸ್ಪಂದಿಸುತ್ತಿದ್ದಾರೆ. ನಿಧಿ ಸಂಗ್ರಹಕ್ಕಾಗಿ ಬರುತ್ತಿರುವ ಸಂಘ- ಸಂಸ್ಥೆಗಳಿಗೆ ಜನರು ಉದಾರ ಮನಸ್ಸಿನಿಂದ ತಮ್ಮಲ್ಲಿರುವಷ್ಟು ಮೊತ್ತವನ್ನು ನೀಡುತ್ತಿದ್ದಾರೆ. ಆದರೆ ಈ ನಿಧಿ ಸಂಗ್ರಹದ ನೆಪದಲ್ಲಿ ಕೆಲವರು ಜನರನ್ನು ಲೂಟಿ ಮಾಡುತ್ತಿರುವ ಆಘಾತಕಾರಿ ಸಂಗತಿ ಬೆಳಕಿಗೆ ಬರುತ್ತಿದೆ.
ಕೊಡಗು ಸಂತ್ರಸ್ಥರಿಗೆ 5 ಲಕ್ಷ ನೆರವು ನೀಡಿದ ನಟ ಪ್ರಕಾಶ್ ರೈ
ಭಾನುವಾರ ಸಂಜೆ ಬಂಟ್ವಾಳದ ಕಲ್ಲಡ್ಕ ಹೆದ್ದಾರಿಯಲ್ಲಿ ಮಂಗಳೂರಿನಿಂದ ಉಪ್ಪಿನಂಗಡಿಗೆ ನಡುವೆ ಒಂದಷ್ಟು ಹುಡುಗರು ಕೊಡಗಿನ ಪರಿಹಾರ ನಿಧಿ ಹೆಸರಲ್ಲಿ ವಾಹನಗಳನ್ನು ನಿಲ್ಲಿಸಿ, ಹಣ ಸಂಗ್ರಹಿಸಿದ್ದಾರೆ. ಬಿಳಿ ಪೆಟ್ಟಿಗೆ ಮುಂದಿಟ್ಟು ಹಣ ವಸೂಲಿ ಮಾಡಿದ್ದಾರೆ. ಹಣ ಕೊಡದ ಪ್ರಯಾಣಿಕರನ್ನು ಬೈದು ಹಣ ಪೀಕಿಸಿದ್ದಾರೆ ಎಂದು ಆರೋಪಿಸಲಾಗಿದೆ.
ಹೋಟೆಲ್, ಕಿರಾಣಿ ಅಂಗಡಿಗಳಲ್ಲಿ ಸಂಜೆ ಹೊತ್ತಿಗೆ ಬಂದು ಕುಳಿತಿದ್ದ ಮಂದಿಯನ್ನು ದಬಾಯಿಸಿ ಹಣ ಕೀಳುತ್ತಿದ್ದಾರೆ. ಹಣ ಕೊಡ್ರೀ, ನಮಗಾಗಿ ಹಣ ಕೇಳುತ್ತಿಲ್ಲ. ಕೊಡಗಲ್ಲಿ ಸತ್ತಿದ್ದಾರಲ್ಲ.. ಅವರಿಗೆ ಕೊಡೋಕೆ ಹಣ ಕೇಳುತ್ತಿದ್ದೇವೆ ಅಂತ ದಬಾಯಿಸಿದ್ದಾರೆ. ನಿಧಿ ಸಂಗ್ರಹ ಮಾಡುವುದು ಒಳ್ಳೆಯದೇ. ಆದರೆ ಅದಕ್ಕೊಂದು ರೀತಿ, ನೀತಿ ಇಲ್ಲವೇ? ಜಿಲ್ಲಾಡಳಿತದಿಂದ ಪರವಾನಗಿ ಆದರೂ ಪಡೆಯಬೇಕಲ್ಲವೆ ಎಂದು ಸಾರ್ವಜನಿಕರು ಪ್ರಶ್ನಿಸಿದ್ದಾರೆ.
ಬಿಸ್ಕೆಟ್ ಗಿಂತ ಬದುಕು ಕಟ್ಟಿಕೊಳ್ಳಬೇಕು, ಕೊಡಗು ಸಂತ್ರಸ್ತರ ಮನವಿ
ಈ ರೀತಿಯಲ್ಲಿ ಹಣ ಸಂಗ್ರಹಿಸುತ್ತಿದ್ದ ಯುವಕರ ತಂಡವನ್ನು ನಗರದ ಮಣ್ಣಗುಡ್ಡ ಎಂಬಲ್ಲಿ ಪೊಲೀಸರು ವಶಕ್ಕೆ ಪಡೆದಿದ್ದಾರೆ. ಈ ತಂಡ ಓಮಿನಿ ಕಾರುವೊಂದರಲ್ಲಿ ನಗರದ ಹಲವೆಡೆ ಸುತ್ತಿ ಹಣ ಸಂಗ್ರಹಿಸಿದೆ ಎಂದು ಅರೋಪಿಸಲಾಗಿದೆ. ಈಗ ರಾಜ್ಯದೆಲ್ಲೆಡೆ ನಿಧಿ ಸಂಗ್ರಹ ನಡೆಯುತ್ತಿದೆ. ಕೊಡಗಿನ ಸಂತ್ರಸ್ತರಿಗೆ ನಿಧಿ ಸಂಗ್ರಹದ ನೆಪದಲ್ಲಿ ಮಂಗಳೂರು ನಗರದಲ್ಲೂ ಲೂಟಿ ನಡೆಯುತ್ತಿದೆ ಎನ್ನುವ ದೂರು ಕೇಳಿಬಂದಿದೆ.
ದಕ್ಷಿಣ ಕನ್ನಡ ಜಿಲ್ಲೆಯ ಹಲವೆಡೆ ನಕಲಿಗಳ ಹಾವಳಿ ಬಗ್ಗೆ ದೂರು ಬಂದ ಹಿನ್ನೆಲೆಯಲ್ಲಿ ಎಚ್ಚೆತ್ತಿರುವ ಜಿಲ್ಲಾಡಳಿತವು ಸಾರ್ವಜನಿಕರು ಯಾವುದೇ ಖಾಸಗಿ ವ್ಯಕ್ತಿಗಳಿಗೆ ಹಣ ನೀಡದಂತೆ ಎಚ್ಚರಿಸಿದೆ. ಹಣ ನೀಡುವುದಿದ್ದರೆ ಮುಖ್ಯಮಂತ್ರಿ ಪರಿಹಾರ ನಿಧಿಗೆ ಮಾತ್ರ ನೀಡಿ ಎಂದು ದಕ್ಷಿಣ ಕನ್ನಡ ಜಿಲ್ಲಾಧಿಕಾರಿ ಶಶಿಕಾಂತ್ ಸೆಂಥಿಲ್ ಮನವಿ ಮಾಡಿದ್ದಾರೆ.