ಅಯ್ಯಪ್ಪಸ್ವಾಮಿ ಮಾಲಾಧಾರಿಗಳಿಗೆ ಆಪತ್ಬಾಂಧವರಾದ ಸಚಿವ ಖಾದರ್
ಮಂಗಳೂರು, ಜನವರಿ. 14 : ಶಬರಿಮಲೆಯಿಂದ ಹಿಂದಿರುಗುತ್ತಿದ್ದ ಭಕ್ತರ ಕಾರಿನಲ್ಲಿ ಆಕಸ್ಮಿಕವಾಗಿ ಬೆಂಕಿ ಹೊತ್ತಿಕೊಂಡ ಘಟನೆ ಶುಕ್ರವಾರ ನಗರದಲ್ಲಿ ನಡೆದಿದೆ.
ಈ ವೇಳೆ ಭಕ್ತರು ಅಸಹಾಯಕರಾಗಿ ನಿಂತಿದ್ದ ಸಂದರ್ಭದಲ್ಲಿ ಅಲ್ಲಿಗೆ ಬಂದ ಆಹಾರ ಸಚಿವ ಯು ಟಿ ಖಾದರ್ ಸಕಾಲದಲ್ಲಿ ನೆರವು ನೀಡಿ ಆಪತ್ಬಾಂಧವರಾದರು.
ಶಬರಿಮಲೆ ಯಾತ್ರೆ ಮುಗಿಸಿಕೊಂಡು ಧರ್ಮಸ್ಥಳದಿಂದ ಹುಬ್ಬಳ್ಳಿಗೆ ಮರಳುತ್ತಿದ್ದ ಟಾಟಾ ಇಂಡಿಕಾ ಕಾರು ಶುಕ್ರವಾರ ರಾತ್ರಿ ಮಂಗಳೂರಿನ ಪಂಪ್ ವೆಲ್- ನಂತೂರು ಸರ್ಕಲ್ ರಸ್ತೆಯಲ್ಲಿ ಕಾರಿನಲ್ಲಿ ದಿಢೀರ್ ಬೆಂಕಿ ಕಾಣಿಸಿದ್ದು, ನೋಡುತ್ತಿದ್ದಂತೆ ಬೆಂಕಿ ತೀವ್ರವಾಗತೊಡಗಿತು. ಕಾರಿನಲ್ಲಿ ಚಾಲಕ ಸೇರಿ ಐದು ಜನ ಇದ್ದರು. [ಸಚಿವ ಯು.ಟಿ.ಖಾದರ್ ಉಳಿದವರಿಗೆ ಮಾದರಿಯಾಗಲಿ]
ಈ ಸಂದರ್ಭದಲ್ಲಿ ಅದೇ ರಸ್ತೆಯಲ್ಲಿ ಸಚಿವ ಯು.ಟಿ. ಖಾದರ್ ಸಂಚರಿಸುತ್ತಿದ್ದು, ಘಟನೆಯನ್ನು ಕಂಡು ವಾಹನ ನಿಲ್ಲಿಸಿ ಉರಿಯುತ್ತಿರುವ ಕಾರಿನತ್ತ ಧಾವಿಸಿದರು. ತಕ್ಷಣವೇ ಶಬರಿಮಲೆ ಭಕ್ತರ ಕಾರಿನಲ್ಲಿ ಬೆಂಕಿಯನ್ನು ನಂದಿಸಲು ತಮ್ಮ ಕಾರಿನಲ್ಲಿದ್ದ ಅಲ್ಪಸ್ವಲ್ಪ ನೀರನ್ನು ಹಾಗೂ ಸ್ಥಳದಲ್ಲಿದ್ದ ಮಣ್ಣು ಕೈಯಿಂದಲೇ ಬೆಂಕಿ ಮೇಲೆ ಹಾಕಿ, ಬೆಂಕಿ ನಂದಿಸಲು ಪ್ರಯತ್ನಿಸಿದರು.
ಅಲ್ಲದೇ ಕಾರಿನಲ್ಲಿದ್ದ ಬಟ್ಟೆ ಬರೆ ಹಾಗೂ ಶಬರಿಮಲೆಯ ಪ್ರಸಾದದ ಪೊಟ್ಟಣಗಳನ್ನು ಸಚಿವರು ಕಾರಿನಿಂದ ತೆಗೆದು ರಕ್ಷಿಸಿದರು. ಬಳಿಕ ಅಗ್ನಿಶಾಮಕ ವಾಹನ ಬಂದು ಬೆಂಕಿ ನಂದಿಸಿತು.
ಇದಲ್ಲದೇ, ಅಯ್ಯಪ್ಪ ಮಾಲಾಧಾರಿಗಳಿಗೆ ಊಟೋಪಚಾರದ ವ್ಯವಸ್ಥೆ ಕಲ್ಪಿಸಿ, ಹುಬ್ಬಳ್ಳಿಗೆ ತರಳಲು ಹಣಕಾಸು ನೆರವನ್ನು ನೀಡಿ ಕೆಎಸ್ ಆರ್ಟಿಸಿ ಬಸ್ಸಿನಲ್ಲಿ ಅವರ ಸಂಚಾರಕ್ಕೆ ವ್ಯವಸ್ಥೆ ಮಾಡಿಸಿ ಸಚಿವ ಯು.ಟಿ ಖಾದರ್ ಮಾನವೀಯತೆ ಮರೆದಿದ್ದಾರೆ.
2014ರಲ್ಲಿ ಅಪಘಾತದಲ್ಲಿ ಗಾಯಗೊಂಡಿದ್ದವರನ್ನು ತಮ್ಮ ಕಾರಿನಲ್ಲಿ ಆಸ್ಪತ್ರೆಗೆ ಸಾಗಿಸಿ ಸಚಿವ ಖಾದರ್ ತಾವು ಆಟೋ ಮೂಲಕ ತೆರಳಿರುವುದು ಇಲ್ಲಿ ಸ್ಮರಿಸಬಹುದು.