ಎತ್ತಿನಹೊಳೆ ಬಗ್ಗೆ ಡಿ.26ಕ್ಕೆ ಸಿಎಂ ಜೊತೆ ಚರ್ಚೆ: ಸಚಿವ ರೈ
ಮಂಗಳೂರು, ಡಿಸೆಂಬರ್ 20: ಎತ್ತಿನಹೊಳೆ ಯೋಜನೆ ವಿವಾದದ ಕುರಿತು ಡಿಸೆಂಬರ್ 26ರಂದು ಮುಖ್ಯಮಂತ್ರಿ ಜೊತೆ ಚರ್ಚೆ ಮಾಡುತ್ತೇನೆ ಎಂದು ದಕ್ಷಿಣ ಕನ್ನಡ ಉಸ್ತುವಾರಿ ಸಚಿವ ಹಾಗೂ ಅರಣ್ಯ ಸಚಿವ ಬಿ.ರಮಾನಾಥ ರೈ ಹೇಳಿದರು. ತುಂಬೆ ನೇತ್ರಾವತಿ ವೆಂಟೆಡ್ ಡ್ಯಾಂನಲ್ಲಿ ಬಾಗಿನ ಅರ್ಪಿಸಿ, ಪರಿಶೀಲನೆ ನಡೆಸಿದ ನಂತರ ಪತ್ರಕರ್ತರ ಜೊತೆ ಮಾತನಾಡಿದರು.
ಎತ್ತಿನಹೊಳೆ ಯೋಜನೆ ವಿರೋಧಿ ಹೋರಾಟಗಾರರೊಂದಿಗೆ ಸಹ ಚರ್ಚೆ ಮಾಡುತ್ತೇನೆ ಎಂದ ರೈ, ಸಭೆಯಲ್ಲಿ ಪಶ್ಚಿಮವಾಹಿನಿ ಯೋಜನೆ ಬಗ್ಗೆಯೂ ಚರ್ಚೆ ಮಾಡುತ್ತೇನೆ. ಈ ಸಭೆಯಲ್ಲಿ ಕರಾವಳಿ ಭಾಗದ ಶಾಸಕ, ಸಚಿವರು ಭಾಗಿಯಾಗಲಿದ್ದಾರೆ ಎಂದರು. ಇದೇ ವೇಳೆ ಸಚಿವ ರಮಾನಾಥ ರೈ, ಕೊಡಗು ಜಿಲ್ಲೆಯ ದಿಡ್ಡಳ್ಳಿಯಲ್ಲಿ ಒಕ್ಕಲೆಬ್ಬಿಸಿರುವ 577 ಅದಿವಾಸಿ ಕುಟುಂಬಗಳಿಗೆ ಅರಣ್ಯದಲ್ಲಿಯೇ ಭೂಮಿ ನೀಡಲು ಸಾಧ್ಯವಿಲ್ಲ. ಕಾನೂನಿನಲ್ಲಿ ಅದಕ್ಕೆ ಅವಕಾಶವಿಲ್ಲ ಎಂದು ಹೇಳಿದರು.[50 ಕೋಟಿ ಲಂಚ ಪಡೆದ ಕೈ ಸಚಿವರ ಹೆಸರು ತಿಳಿಸಿ: ಪೂಜಾರಿ]
ಸಂಕಷ್ಟ ಎದುರಿಸುತ್ತಿರುವ ಅದಿವಾಸಿ ಕುಟುಂಬಗಳಿಗೆ ಕಂದಾಯ ಭೂಮಿ ನೀಡಲಾಗುವುದು ಎಂದರು. ಅನುವಂಶಿಯವಾಗಿ 2005ರ ಹಿಂದೆಯೇ ಅರಣ್ಯದಲ್ಲಿ ವಾಸಿಸುತ್ತಿರುವವರಿಗೆ ಯಾವುದೇ ತೊಂದರೆ ಆಗಿಲ್ಲ. ಆದರೆ ದಿಡ್ಡಳ್ಳಿಯಲ್ಲಿ 577 ಅದಿವಾಸಿ ಕುಟುಂಬಗಳು 3 ತಿಂಗಳ ಹಿಂದೆ ಗುಡಿಸಲುಗಳನ್ನು ನಿರ್ಮಿಸಿವೆ. ಅದನ್ನು ಅರಣ್ಯ ಪ್ರದೇಶದಿಂದ ತೆರವುಗೊಳಿಸಲಾಗಿದೆ ಎಂದು ಅವರು ಹೇಳಿದರು.[ಎತ್ತಿನಹೊಳೆಗೆ ಕೋರ್ಟ್ ತಡೆ ನೀಡಲೆಂದು ಮಂಗಳೂರಲ್ಲಿ ಪ್ರಾರ್ಥನೆ]
ಒಕ್ಕಲೆಬ್ಬಿಸಿದ 577 ಅದಿವಾಸಿ ಕುಟುಂಬಗಳಿಗೆ ಅರಣ್ಯದಲ್ಲಿಯೇ ಭೂಮಿ ನೀಡಲು ಸಾಧ್ಯವಿಲ್ಲ ಎಂದು ಸ್ಪಷ್ಟಪಡಿಸಿದರು. ಆದರೆ 577 ಅದಿವಾಸಿ ಕುಟುಂಬಗಳಿಗೆ ಪರ್ಯಾಯವಾಗಿ ಕಂದಾಯ ಭೂಮಿ ನೀಡಲಾಗುವುದು, ಈ ನಿಟ್ಟಿನಲ್ಲಿ ಕೊಡಗು ಜಿಲ್ಲಾಡಳಿತ ಕ್ರಮ ಕೈಗೊಳ್ಳಲಿದೆ ಎಂದು ಹೇಳಿದರು.