ಪಾಳುಬಿದ್ದಿದ್ದ ರೋಡ್ ರೋಲರ್ ಈಗ ಆಕರ್ಷಣೆಯ ಕೇಂದ್ರಬಿಂದು
ಮಂಗಳೂರು, ಜನವರಿ 07 : ಒಮ್ಮೆ ಜೆಪ್ಪು ಮಾರುಕಟ್ಟೆಯ ಬಳಿ ಶಿಥಿಲವಾಗಿ ತುಕ್ಕು ಹಿಡಿದು ನಿಂತಿದ್ದ ರೋಡ್ ರೋಲರ್ ಇದೀಗ ಹೊಸ ರೂಪ ಪಡೆದು ಜನಾಕರ್ಷಣೆಯ ಕೇಂದ್ರಬಿಂದುವಾಗಿದೆ. ಈ ರೋಡ್ ರೋಲರ್ ಅತ್ಯಾಕರ್ಷಕವಾಗಿ ಕಾಣುತಿದ್ದು, ಅದರ ಜೊತೆ ಸೆಲ್ಫಿ ತೆಗೆಸಿಕೊಳ್ಳಲು ಜನರು ಮುಗಿಬೀಳುತ್ತಿದ್ದಾರೆ.
ಈಗಾಗಲೇ ಕೇಂದ್ರ ಸರ್ಕಾರ ಸ್ಮಾರ್ಟ್ ಸಿಟಿ ಯೋಜನೆಯನ್ನು ಹಮ್ಮಿಕೊಳ್ಳುತ್ತಿದ್ದು ನಗರದಾದ್ಯಂತ ಹಲವಾರು ಸಂಘಟನೆಗಳು ಇದಕ್ಕೆ ಕೈಜೋಡಿಸಿವೆ. ಇಲ್ಲಿಯವರೆಗೆ ಗೋಡೆಗಳಲ್ಲಿ ಸ್ಮಾರ್ಟ್ ಸಿಟಿ ಯೋಜನೆಯ ಚಿತ್ರಗಳನ್ನು ಕಾಣಬಹುದಾಗಿತ್ತು. ಆದರೆ ಇದೀಗ ಅಚ್ಚರಿ ಎಂಬಂತೆ ಪಾಳು ಬಿದಿದ್ದ ಹಳೆಯ ರೋಡ್ ರೋಲರ್ಗೆ ಡಿ. 1ರಂದು ಹೊಸ ರೂಪ ಕೊಟ್ಟು ಸ್ಮಾರ್ಟ್ ಸಿಟಿಯ ಸಂದೇಶ ಸಾರಲಾಗುತ್ತಿದೆ.
ಈ ಹೊಸ ರೂಪವನ್ನು ನೀಡಿದವರು ಡಾ. ಪ್ರದೀಪ್ ಕುಮಾರ್. ಇವರು ಮೂಲತಃ ವೃತ್ತಿಯಲ್ಲಿ ದಂತ ವೈದ್ಯರಾಗಿದ್ದು, ಸ್ವಚ್ಛ ಭಾರತ ಅಭಿಯಾನದ ಬಗ್ಗೆ ಬಹಳಷ್ಟು ಕಾಳಜಿ ಹಾಗೂ ನಗರದ ಜನರಿಗೆ ಶುಚಿತ್ವದ ಬಗ್ಗೆ ಅರಿವು ಮೂಡಿಸುವ ಸಲುವಾಗಿ ಶ್ರೀರಾಮಕೃಷ್ಣ ಮಠದ ಜಂಟಿ ಆಶ್ರಯದಲ್ಲಿ ಈ ರೋಡ್ ರೋಲರ್ಗೆ ಬಣ್ಣ ಹಚ್ಚಿ ಹೊಸ ರೂಪ ಕೊಟ್ಟಿದ್ದಾರೆ.
ರೋಡ್ ರೋಲರ್ಗೆ ಸುಂದರವಾದ ರೂಪ ಕೊಟ್ಟ ಪ್ರದೀಪ್ ಕುಮಾರ್ ಈ ಹಿಂದೆ ವ್ಯಂಗ್ಯಚಿತ್ರ , ಭಾವಚಿತ್ರ ಹೀಗೆ ಮೊದಲಾದ ಚಿತ್ರಗಳನ್ನು ಬಿಡಿಸುತ್ತಿದ್ದರು. ಆದರೆ ಒಂದು ದಿನ ಜಪ್ಪು ಮಾರುಕಟ್ಟೆಯ ಬಳಿ ಈ ಪಾಳು ಬಿದ್ದು ತುಕ್ಕು ಹಿಡಿದಿದ್ದ ರೋಡ್ ರೋಲರ್ ಅನ್ನು ನೋಡಿ ಹೊಸ ರೂಪ ಕೊಡುವ ಯೋಚನೆಯನ್ನು ಮಾಡಿದ್ದರು. ಈ ಕುರಿತು ರಾಮಕೃಷ್ಣ ಮಠದ ಸ್ವಾಮಿ ಜೀತಕಮನಂದಾಜಿ ಅವರ ಬಳಿ ಚರ್ಚಿಸಿ ಸ್ವಚ್ಛ ಭಾರತ ಅಭಿಯಾನಕ್ಕೆ ನಿದರ್ಶನವಾಗಬೆಂದು ನಿರ್ಧರಿಸಿ ಇದರಂತೆ ಹೊಸ ರೂಪ ನೀಡುವಲ್ಲಿ ಯಶಸ್ವಿಯಾಗಿದ್ದಾರೆ.
ರಾಮಕೃಷ್ಣ ಮಠದ ಏಕಗಮ್ಯಾನಂದಾಜಿ
ನಾನು ಮತ್ತು ಮಠದ ಅಧಿಕಾರಿಗಳು ರೋಡ್ ರೋಲರ್ ಪರಿವರ್ತಿಸುವ ಅನನ್ಯ ಯೋಜನೆಯಲ್ಲಿ ಪ್ರದೀಪ್ ಕುಮಾರ್ ಅವರಿಗೆ ಎಲ್ಲಾ ಬೆಂಬಲವನ್ನೂ ನೀಡಿದ್ದೇವೆ. ಸ್ವಯಂ ಸೇವಾ ಕಲಾವಿದರಾದ ಪ್ರದೀಪ್ ಕುಮಾರ್ ಅವರಿಗೆ ಸ್ವಚ್ಛ ಭಾರತ ಅಭಿಯಾನಕ್ಕಾಗಿ ಈ ಅನನ್ಯ ಕೊಡುಗೆ ನೀಡಿದಕ್ಕಾಗಿ ತುಂಬು ಹೃದಯದಿಂದ ಕೃತಜ್ಞತೆ ಸಲ್ಲಿಸುತ್ತೇನೆ ಅಂತಾರೆ ರಾಮಕೃಷ್ಣ ಮಠದ ಏಕಗಮ್ಯಾನಂದಾಜಿ.
ರೋಡ್ ರೋಲರ್ನ ಸುತ್ತ ಗಾರ್ಡನ್
ಮುಂದಿನ ದಿನಗಳಲ್ಲಿ ನಗರದ ಹಂಪನಕಟ್ಟೆಯಲ್ಲಿನ ಗೋಡೆಗಳಲ್ಲಿಯೂ ಬಣ್ಣ ಹಚ್ಚುವ ಇಚ್ಛೆ ಇದೆ. ಇದಲ್ಲದೆ ಈ ಹೊಸ ರೂಪದ ರೋಡ್ ರೋಲರ್ನ ಸುತ್ತ ಗಾರ್ಡನ್ ನಿರ್ಮಿಸುವ ಯೋಜನೆ ಕೈಗೊಂಡಿದ್ದೇವೆ ಮತ್ತು ಔಪಚಾರಿಕ ಉದ್ಘಾಟನಾ ಕಾರ್ಯಕ್ರಮವನ್ನೂ ಹಮ್ಮಿಕೊಳ್ಳಲು ನಿರ್ಧರಿಸಿದ್ದೇವೆ ಎಂದರು.
ಕಲಾವಿದ ಪ್ರದೀಪ್ ಕುಮಾರ್ ಮಾತು
ಈ ರೋಡ್ ರೋಲರ್ಗೆ ಹೊಸ ರೂಪ ನೀಡಿದ ಕಲಾವಿದ ಪ್ರದೀಪ್ ಕುಮಾರ್ ಮಾತನಾಡಿ, ನನ್ನ ಯೋಜನೆಗೆ ಬೆಂಬಲ ನೀಡಿದ ರಾಮಕೃಷ್ಣ ಮಠದ ಸ್ವಾಮೀಜಿಗಳಿಗೆ ಅಭಿನಂದನೆ ಸಲ್ಲಿಸುತ್ತೇನೆ ಮತ್ತು ಮನಪ ಅನುಮತಿ ಪಡೆದು ಈ ರೋಡ್ ರೋಲರ್ಗೆ ಹೊಸ ರೂಪ ನೀಡುವ ಕಾರ್ಯ ಮಾಡಿದ್ದೇನೆ.
ಸೆಲ್ಫಿ ತೆಗೆದುಕೊಳ್ಳುತ್ತಿರುವ ಸಾರ್ವಜನಿಕರು
ಈ ಯೋಜನೆಯಲ್ಲಿ ಆರು ಮಂದಿ ಸ್ವಯಂ ಸೇವಕರು ಸಹಕಾರ ನೀಡಿದ್ದಾರೆ. ಈ ಹೊಸ ರೂಪು ರೇಷೆ ನೀಡುವುದಕ್ಕಾಗಿ ರು. 10,000 ಖರ್ಚಿನ ಅಕ್ರಿಲಿಕ್ ತುಂತುರು ವರ್ಣಚಿತ್ರ ಖರೀದಿ ಮಾಡಿ ಸ್ಪ್ರೇ ಮಾಡಿ ಚಿತ್ರ ಬಿಡಿಸಲಾಗಿದೆ. ಈಗ ಈ ರೋಡ್ ರೋಲರ್ ಜನಾಕರ್ಷಣೆಯ ತಾಣವಾಗಿದ್ದು, ಸಾರ್ವಜನಿಕರು ಹೆಚ್ಚಿನ ಸಂಖ್ಯೆಯಲ್ಲಿ ಬಂದು ಸೆಲ್ಫಿ ತೆಗೆಸಿಕೊಳ್ಳುತ್ತಿದ್ದಾರೆ ಎಂದು ಸಂತಸ ಮಾತುಗಳನ್ನಾಡಿದರು.