ಕರಾವಳಿಯಲ್ಲಿ ಭಾರೀ ಮಳೆ: ಆಳ ಸಮುದ್ರದಿಂದ ಮರಳುತ್ತಿರುವ ಮೀನುಗಾರರು
Recommended Video
ಮಂಗಳೂರು, ಅಕ್ಟೋಬರ್. 05: ಅರಬ್ಬೀ ಸಮುದ್ರದಲ್ಲಿ ವಾಯು ಭಾರ ಕುಸಿತದಿಂದಾಗಿ ಕಡಲು ಪ್ರಕ್ಷುಬ್ಧಗೊಳ್ಳುತ್ತಿದೆ. ಸಮುದ್ರ ಮಧ್ಯೆ ಚಂಡಮಾರುತ ಸೃಷ್ಟಿಯಾಗುವ ಎಲ್ಲಾ ಲಕ್ಷಣಗಳು ಗೋಚರಿಸುತ್ತಿದೆ. ಈ ಹಿನ್ನೆಲೆಯಲ್ಲಿ ಮಂಗಳೂರು ಸೇರಿದಂತೆ ಸುತ್ತ ಮುತ್ತಲ ಪ್ರದೇಶದಲ್ಲಿ ಸಂಜೆಯಿಂದ ಭಾರೀ ಮಳೆಯಾಗುತ್ತಿದೆ.
ಸಮುದ್ರ ಪ್ರಕ್ಷುಬ್ದಗೊಳ್ಳುತ್ತಿರುವ ಕಾರಣ ಮೀನುಗಾರಿಕೆಗೆ ತೆರಳಿದ್ದ ಮೀನುಗಾರರು ದಡಕ್ಕೆ ಮರಳುತ್ತಿದ್ದಾರೆ. ಭಾರೀ ಚಂಡಮಾರುತ ಬೀಸುವ ಎಚ್ಚರಿಯನ್ನು ಹವಾಮಾನ ಇಲಾಖೆ ರವಾನಿಸಿದ ಹಿನ್ನೆಲೆಯಲ್ಲಿ ಮೀನುಗಾರಿಕೆಗೆ ತೆರಳಿದ್ದ ಮಂಗಳೂರಿನ 350 ಕ್ಕೂ ಹೆಚ್ಚು ಮೀನುಗಾರಿಕಾ ದೋಣಿಗಳು ದಡಕ್ಕೆ ವಾಪಸಾಗಿವೆ.
ಮಂಗಳೂರಿನಲ್ಲಿ ಗುಡುಗು ಸಹಿತ ಭಾರೀ ಮಳೆ: ಆತಂಕಗೊಂಡ ಜನ
ಇನ್ನಷ್ಟು ಮೀನುಗಾರಿಕಾ ದೋಣಿಗಳು ಆಳ ಕಡಲಿನಿಂದ ಮರಳುತ್ತಿವೆ. ಈ ನಡುವೆ ಸಮುದ್ರದಲ್ಲಿ ಗಾಳಿ ಮಳೆ ಆರಂಭವಾದರೆ ಆಳ ಸಮುದ್ರದಿಂದ ಮರಳುತ್ತಿರುವ ಮೀನುಗಾರರು ಆಪಾಯಕ್ಕೆ ಸಿಲುಕಬಹುದು ಎಂಬ ಆತಂಕ ವ್ಯಕ್ತಪಡಿಸಲಾಗಿದೆ.
ಅಕ್ಟೋಬರ್ 6ರಿಂದ 8ರವರೆಗೆ ಅರಬ್ಬೀ ಸಮುದ್ರವು ಪ್ರಕ್ಷುಬ್ಧಗೊಳ್ಳುವ ಸಂಭವವಿರುವುದರಿಂದ ಎಲ್ಲಾ ಮೀನುಗಾರರು ತಟಕ್ಕೆ ಮರಳುವಂತೆ ಸೂಚನೆ ರವಾನಿಸಿದ ಕಾರಣ ಮೀನುಗಾರರು ಕಡಲ ತಡಿಯತ್ತ ಮರಳತೊಡಗಿದ್ದಾರೆ.
ವಾಯುಭಾರ ಕುಸಿತ, ಬೆಂಗಳೂರಲ್ಲಿ ಜಿಟಿ-ಜಿಟಿ ಮಳೆ, 5 ದಿನ ಛತ್ರಿ ಮರೆಯುವಂತಿಲ್ಲ
ಈ ನಡುವೆ ಅಕ್ಟೋಬರ್ 6 ರಿಂದ 8 ರವರೆಗೆ ಸಮುದ್ರದಲ್ಲಿ ಮೀನುಗಾರಿಕೆಗೆ ತೆರಳದಂತೆ ಹವಾಮಾನ ಇಲಾಖೆ ಎಚ್ಚರಿಕೆ ರವಾನಿಸಿದೆ. ಮೀನುಗಾರಿಕೆಗೆ ತೆರಳಿರುವ ಎಲ್ಲ ಮೀನುಗಾರಿಕೆ ಬೋಟ್ ಗಳು ಅಕ್ಟೋಬರ್ 5ರೊಳಗೆ ದಡ ಸೇರುವಂತೆ ದಕ್ಷಿಣ ಕನ್ನಡ ಜಿಲ್ಲಾಡಳಿತ ಹಾಗೂ ಹವಾಮಾನ ಇಲಾಖೆ ಈಗಾಗಲೇ ಸೂಚನೆ ರವಾನಿಸಿದೆ.
ಕರಾವಳಿಯಲ್ಲಿ ಚಂಡಮಾರುತದ ಭೀತಿ: ಅ.5ರ ನಂತರ ಭಾರೀ ಮಳೆ ಸಾಧ್ಯತೆ
ಈ ನಡುವೆ ಮಂಗಳೂರು ಸೇರಿದಂತೆ ದಕ್ಷಿಣ ಕನ್ನಡ ಜಿಲ್ಲೆಯ ಇತರ ಭಾಗಗಳಲ್ಲಿ ಸಂಜೆ ಭಾರೀ ಮಳೆ ಸುರಿದಿದೆ. ಮಂಗಳೂರಿನಾದ್ಯಂತ ಭಾರೀ ಸಿಡಿಲು ಸಹಿತ ಮಳೆ ಸುರಿದಿದೆ. ಈ ಹಿನ್ನೆಲೆಯಲ್ಲಿ ನಗರದಲ್ಲಿ ವಾಹನ ಸಂಚಾರ ಅಸ್ತವ್ಯಸ್ತವಾಗಿತ್ತು . ನಗರದೆಲ್ಲೆಡೆ ಕತ್ತಲೆ ಆವರಿಸಿದ್ದು ಗುಡುಗು ಸಿಡಿಲು ಸಹಿತ ಭಾರೀ ಮಳೆ ಸುರಿಯುತ್ತಿದೆ.