ಮಂಗಳೂರಿನಲ್ಲಿ ಮತ್ತೆ ಗ್ಯಾಂಗ್ ವಾರ್, ತಡರಾತ್ರಿ ಯುವಕನ ಬರ್ಬರ ಹತ್ಯೆ
ಮಂಗಳೂರು, ಡಿಸೆಂಬರ್ 25: ಶಾಂತಿಯ ಸಂದೇಶ ಸಾರುವ ಕ್ರಿಸ್ಮಸ್ ಹಬ್ಬದ ದಿನದಂದೇ ಮಂಗಳೂರಿನಲ್ಲಿ ಗ್ಯಾಂಗ್ ವಾರ್ ನಡೆದಿದ್ದು, ರೌಡಿ ಶೀಟರ್ ಒಬ್ಬನನ್ನು ತಡರಾತ್ರಿ ಬರ್ಬರ ಹತ್ಯೆ ಮಾಡಲಾಗಿದೆ.
ಮಂಗಳೂರಿನ ವೆಲೆನ್ಸೀಯಾದಲ್ಲಿ ಈ ಘಟನೆ ನಡೆದಿದ್ದು ಮೆಲ್ರಿಕ್ ಡಿಸೋಜಾ(21) ಎಂಬಾತನನ್ನು ಕಳೆದ ರಾತ್ರಿ ದುಷ್ಕರ್ಮಿಗಳ ತಂಡ ಮಾರಕಾಸ್ತ್ರಗಳಿಂದ ದಾಳಿ ನಡೆಸಿ ಹತ್ಯೆ ಮಾಡಿದೆ.
ಕ್ರಿಸ್ಮಸ್ ಹಬ್ಬದ ಗುಂಗಿನಲ್ಲಿದ್ದ ಗೋರಿಗುಡ್ಡ ನಿವಾಸಿ ಮೆಲ್ರಿಕ್ ಡಿಸೋಜಾ ನಿನ್ನೆ ಸ್ನೆಹಿತರೊಂದಿಗೆ ಉರ್ವ ಮೈದಾನದಲ್ಲಿ ಆಯೋಜಿಸಲಾಗಿದ್ದ ಹೊನಲು ಬೆಳಕಿನ ಕ್ರಿಕೆಟ್ ಪಂದ್ಯಾವಳಿ ವೀಕ್ಷಿಸಿ ತಡರಾತ್ರಿ ಮನೆಗೆ ಮರಳಿದ್ದರು. ತಡರಾತ್ರಿ 2:30 ರ ಸುಮಾರಿಗೆ ಮನೆಗೆ ನುಗ್ಗಿದ ದುಷ್ಕರ್ಮಿಗಳು ಮೆಲ್ರಿಕ್ ಡಿಸೋಜಾ ಅವರನ್ನು ಹತ್ಯೆ ಮಾಡಿದ್ದಾರೆ ಎಂದು ಹೇಳಲಾಗಿದೆ.
ಮೃತ ಮೆಲ್ರಿಕ್ ಡಿಸೋಜಾ , ರೌಡಿಶೀಟರ್ ಮಂಕಿ ಸ್ಟ್ಯಾಂಡ್ ವಿಜಯ್ ಸಹಚರ ಎಂದು ಹೇಳಲಾಗಿದೆ. ಈತ 2016 ರಲ್ಲಿ ನಡೆದಿದ್ದ ಸಂದೀಪ್ ಹತ್ಯಾ ಯತ್ನ ಪ್ರಕರಣದ ಆರೋಪಿಯಾಗಿದ್ದ. ಘಟನೆ ನಡೆದ ಸ್ಥಳಕ್ಕೆ ಪಾಂಡೇಶ್ವರ ಠಾಣೆಯ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದು ತನಿಖೆ ಆರಂಭಿಸಿದ್ದಾರೆ.