ಆಳ್ವಾಸ್ನಲ್ಲಿ 'ನಿಂಗೋಲ್ ಚಕೋಬ' ಮಣಿಪುರಿ ಹಬ್ಬ ಆಚರಣೆ
ಮಂಗಳೂರು, ಅಕ್ಟೋಬರ್ 24: ಈಶಾನ್ಯ ಭಾರತದ ಜನರ ಆಚಾರ ವಿಚಾರ, ಸಂಸ್ಕೃತಿ, ಪರಂಪರೆ, ಆಚರಣೆ, ಹಬ್ಬ ಹರಿದಿನಗಳ ಬಗ್ಗೆ ದಕ್ಷಿಣ ಭಾರತದ ಜನರಲ್ಲಿ ಅರಿವು ಕಡಿಮೆ. ಈ ಹಿನ್ನಲೆಯಲ್ಲಿ ಈಶಾನ್ಯ ಭಾರತದ ಸಂಸ್ಕೃತಿ ಪರಿಚಯಿಸುವ ಸಣ್ಣ ಪ್ರಯತ್ನ ಮೂಡಬಿದ್ರೆಯ ಆಳ್ವಾಸ್ ಕಾಲೇಜಿನಲ್ಲಿ ನಡೆಯಿತು.
ಮಣಿಪುರದ "ನಿಂಗೊಲ್ ಚಕೋಬ್ " ಹಬ್ಬವನ್ನು ಆಳ್ವಾಸ್ ಕಾಲೇಜಿನಲ್ಲಿ ಆಚರಿಸಲಾಯಿತು.
ನಿಂಗೊಲ್ ಚಕೋಬ ಮಣಿಪುರದ ವಿಶೇಷ ಆಚರಣೆಗಳಲ್ಲೊಂದು. ನಿಂಗೊಲ್' ಎಂದರೆ 'ಮಗಳು', ಚಕೋಬ' ಎಂದರೆ 'ಹಬ್ಬ'.
ಈ ಹಬ್ಬದಂದು ಮಣಿಪುರದಲ್ಲಿಮಹಿಳೆಯರು ಜಾತಿ ಅಂತಸ್ತಿನ ಬೇಧ ಮರೆತು ಒಟ್ಟು ಸೇರುತ್ತಾರೆ. ಅಂದು ಪುರುಷರು ತಾವೇ ಸ್ವತಃ ಭೋಜನ ತಯಾರಿಸಿ, ತಮ್ಮ, ತಾಯಿ, ಅಕ್ಕ, ತಂಗಿ, ಹೆಂಡತಿ, ಮಗಳು ಮತ್ತು ಪ್ರೀತಿ ಪಾತ್ರರಾದವರಿಗೆ ಬಡಿಸುತ್ತಾರೆ. ನಂತರ ಉಡುಗೊರೆಗಳನ್ನು ನೀಡಿ ಅವರನ್ನು ಹಾರೈಸುತ್ತಾರೆ. ಹಾಗಾಗಿ ಇದು ಮಹಿಳೆಯರ ಹಬ್ಬ ಎಂದೇ ಹೆಸರುವಾಸಿಯಾಗಿದೆ.
ಮಿಜಾರು ಕ್ಯಾಂಪಸ್ಸಿನಲ್ಲಿ ನಿಂಗೊಲ್ ಚಕೋಬ
ಈ ನಿಂಗೊಲ್ ಚಕೋಬ ಹಬ್ಬದ ವೈಶಿಷ್ಟ್ಯ ಪರಿಚಯಿಸುವ ದೃಷ್ಠಿಯಿಂದ ಆಳ್ವಾಸ್ ಶಿಕ್ಷಣ ಪ್ರತಿಷ್ಠಾನವು ಮಿಜಾರಿನ ಎಐಇಟಿ ಕ್ಯಾಂಪಸ್ನಲ್ಲಿ ಈ ಹಬ್ಬವನ್ನು ಆಯೋಜಿಸಿತ್ತು. ಈ ಮಣಿಪುರಿ ಹಬ್ಬ ನಿಂಗೋಲ್ ಚಕೋಬ'ವನ್ನು ಮಣಿಪಾಲ ಕಾಲೇಜಿನ ನರ್ಸಿಂಗ್ ವಿಭಾಗದ ಮುಖ್ಯಸ್ಥೆ ಎಲ್ಸಾ ಸನಾತೊಂಬ ದೇವಿ ಉದ್ಘಾಟಿಸಿದರು ನಂತರ ಕಾರ್ಯಕ್ರಮ ಉದ್ದೇಶಿಸಿ ಅವರು ಮಾತನಾಡಿದರು.
ರಾಜ್ಯದ ಹೊರಗೂ ಸಂಸ್ಕೃತಿಯ ಪರಿಚಯ
"ಮಣಿಪುರದಿಂದ ಹೊರಗೆ ಓದುವ ವಿದ್ಯಾರ್ಥಿಗಳ ಬಗ್ಗೆ ಮಣಿಪುರದ ಜನರಿಗೆ ಒಂದು ರೀತಿಯ ನಕಾರಾತ್ಮಕ ನಿಲುವಿದೆ. ಇತರ ರಾಜ್ಯಗಳಲ್ಲಿ ಓದುತ್ತಿರುವ ಮಣಿಪುರಿ ಮಕ್ಕಳು ತಮ್ಮ ಸಂಸ್ಕೃತಿಯನ್ನು ಅರಿಯಲಾರರು ಎಂಬುದು ಈ ನಿಲುವಿನ ಹಿಂದಿರುವ ಕಲ್ಪನೆ. ಆದರೆ ಆಳ್ವಾಸ್ನಲ್ಲಿ ಆಯೋಜಿಸಿರುವ ಮಣಿಪುರಿ ಹಬ್ಬ ನಮ್ಮ ಮಣಿಪುರಿ ಸಂಸ್ಕೃತಿಯನ್ನು ಚಿತ್ರಿಸಿ ಕೊಡುವುದಲ್ಲದೆ ಅವರ ಬಗ್ಗೆ ಇರುವ ಪೂರ್ವಾಗ್ರಹ ಪೀಡಿತ ತಪ್ಪು ಕಲ್ಪನೆಗಳನ್ನು ಹೋಗಲಾಡಿಸುತ್ತದೆ" ಎಂದು ಎಲ್ಸಾ ಸನಾತೊಂಬ ದೇವಿ ಅಭಿಪ್ರಾಯ ಪಟ್ಟರು.
ಮಣಿಪುರ ಶಿಕ್ಷಣ ಸಚಿವರಿಂದ ವಿಡಿಯೋ ಸಂದೇಶ
ಮಣಿಪುರ ಶಿಕ್ಷಣ ಸಚಿವರಾದ ಥೋಕೋಮ್ ರಾಧೆಶಾಮ್ ಸಿಂಗ್ ವಿಡಿಯೋ ತುಣುಕು ಕಳುಹಿಸುವ ಮೂಲಕ ಹಬ್ಬದ ಆಚರಣೆಯನ್ನು ಬೆಂಬಲಿಸಿದ್ದಲ್ಲದೆ, ಆಳ್ವಾಸ್ ಕಾಲೇಜಿನಲ್ಲಿ ಮಣಿಪುರದ ವಿದ್ಯಾರ್ಥಿಗಳಿಗೆ ಗುಣಮಟ್ಟದ ಶಿಕ್ಷಣ ಮತ್ತು ವಸತಿ ನೀಡುತ್ತಿರುವುದಕ್ಕೆ ಕಾಲೇಜಿನ ಮುಖ್ಯಸ್ಥರಾದ ಮೋಹನ ಆಳ್ವರಿಗೆ ಕೃತಜ್ಞತೆ ತಿಳಿಸಿದರು.
ಸಾಂಸ್ಕೃತಿಕ ವಿನಿಮಯ
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಟ್ರಸ್ಟಿ ವಿವೇಕ್ ಆಳ್ವ ಮಾತನಾಡಿ, ಸಾಂಸ್ಕೃತಿಕ ವಿನಿಮಯ ಎರಡೂ ಕಡೆಯಿಂದ ಸಾಧ್ಯವಾಗಬೇಕು. ಇಂತಹ ವಿನಿಮಯ ವಿಭಿನ್ನ ಸಂಸ್ಕೃತಿಯ ಜನರ ನಡುವೆ ಉತ್ತಮ ಬಾಂಧವ್ಯ ಬೆಸೆಯುತ್ತದೆ. ಈ ನಿಟ್ಟಿನಲ್ಲಿ ವಿಭಿನ್ನ ಪ್ರದೇಶಗಳ ಹಬ್ಬಗಳು, ಸಂಸ್ಕೃತಿಯ ಆಚರಣೆ ಹೆಚ್ಚು ಸೂಕ್ತವಾದವು ಎಂದು ಹೇಳಿದರು.
ಭರ್ಜರಿ ಮಣಿಪುರಿ ಭೋಜನ
ಆರ್ಎಸ್ಎಸ್ ಪೂರ್ವಾಂಚಲ ಸಂಘಟಕರಾದ ಪುಪ್ಪುರಾಜ್, ನಿಟ್ಟೆ ವಿಶ್ವವಿದ್ಯಾನಿಲಯದ ಸಂಶೋಧನ ವಿಭಾಗದ ಅನಿರ್ಬನ್ ಚಕ್ರವರ್ತಿ ಹಾಗೂ ಗುನಿಮಾಲ ಚಕ್ರವರ್ತಿ ಉಪಸ್ಥಿತರಿದ್ದರು
ಸಭಾ ಕಾರ್ಯಕ್ರಮದ ಬಳಿಕ ವಿದ್ಯಾರ್ಥಿಗಳಿಂದ ನಾಟಕ, ನೃತ್ಯ, ಸಂಗೀತ, ಸಾಹಸ ಪ್ರದರ್ಶನ ನಡೆಯಿತು. ವಿಶೇಷ ಆಕರ್ಷಣೆಯಾಗಿ ಮಣಿಪುರದ ಖಾದ್ಯಗಳಾದ ಛಿಂಜೊ ಉತಿ, ಎರೊಂಬಾ, ಕೊಂಗ್ಹೌ, ಹಿಯೊಂಥೊವಾ ಮೊಯ್ರಾಂಗುಗಳನ್ನೊಳಗೊಂಡ ಅದ್ಧೂರಿ ಭೋಜನವನ್ನು ಏರ್ಪಡಿಸಲಾಗಿತ್ತು.
ನಿಂಗೊಲ್ ಚಕೋಬ ಆಚರಣೆಯ ಮೂಲಕ ಮಣಿಪುರ ರಾಜ್ಯದ ಸಂಸ್ಕೃತಿ, ಸಂಪ್ರದಾಯವನ್ನು ಕನ್ನಡಿಗರಿಗೆ ಪರಿಚಯಿಸುವ ಪ್ರಯತ್ನ ನಡೆಯಿತು.