ವಿಶಿಷ್ಟ ಪ್ರತಿಭಟನೆ ಬಳಿಕ ಮಣಿಪಾಲ್ ರಸ್ತೆ ಹೊಂಡಕ್ಕೆ ಮುಕ್ತಿ
ಉಡುಪಿ, ಆ.12 : ಮಣಿಪಾಲದ ಟೈಗರ್ ಸರ್ಕಲ್ ಬಳಿಯ ಬಸ್ ನಿಲ್ದಾಣದ ರಸ್ತೆ ರಿಪೇರಿ ಕಂಡಿದೆ. ರಸ್ತೆ ದುರಸ್ಥಿ ಮಾಡುವಂತೆ ಆಗ್ರಹಿಸಿ ರಸ್ತೆ ಹೊಂಡದಲ್ಲಿ ಈಜಾಡುವ ಮೂಲಕ ಸಾಮಾಜಿಕ ಕಾರ್ಯಕರ್ತ ನಿತ್ಯಾನಂದ ಒಳಕಾಡು ಪ್ರತಿಭಟನೆ ನಡೆಸಿದ್ದರು.
ಮಣಿಪಾಲ ಬಸ್ ನಿಲ್ದಾಣದ ಎದುರಿನ ಶುಕ್ರವಾರ ಮುಕ್ತಿ ಸಿಕ್ಕಿದೆ. ಭಾರೀ ಗಾತ್ರದ ಹೊಂಡಗಳಿಗೆ ಮೇಟ್ ವೇಲ್ಸ್ ಹಾಕಿ ಮುಚ್ಚಿ ವಾಹನ ಸಂಚಾರಕ್ಕೆ ಅನುಕೂಲ ಕಲ್ಪಿಸಲಾಗಿದೆ. ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ ಯಂತ್ರೋಪಕರಣಗಳನ್ನು ಬಳಸಿ ಹೊಂಡವನ್ನು ಮುಚ್ಚಿ ಸಮತಟ್ಟು ಮಾಡಿದೆ.
'ಮಳೆ ಬರುತ್ತಿರುವುದರಿಂದ ಡಾಂಬರ್ ಹಾಕಲು ಸಾಧ್ಯವಾಗುತ್ತಿಲ್ಲ. ಮಳೆ ಮುಗಿದ ಕೂಡಲೇ ಡಾಂಬರು ಹಾಕುತ್ತೇವೆ ಸದ್ಯಕ್ಕೆ ಮೇಟ್ ವೇಲ್ಸ್ ಹಾಕಿ ಹೊಂಡ ಮುಚ್ಚಿದ್ದೇವೆ' ಎಂದು ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ಸಹಾಯಕ ಎಂಜಿನಿಯರ್ ಮಂಜುನಾಥ್ ನಾಯಕ್ ತಿಳಿಸಿದ್ದಾರೆ.
ರಸ್ತೆಯನ್ನು ದುರಸ್ಥಿ ಮಾಡುವಂತೆ ಆಗ್ರಹಿಸಿ ಹಲವು ಬಾರಿ ಪ್ರತಿಭಟನೆ ನಡೆಸಲಾಗಿತ್ತು. ಆದರೆ, ಯಾರೂ ಇತ್ತ ಗಮನ ಹರಿಸಲಿಲ್ಲ. ಆದ್ದರಿಂದ, ಗುರುವಾರ ರಸ್ತೆಯ ಹೊಂಡದ ನೀರಿನಲ್ಲಿ ಈಜುವ ಮೂಲಕ ವಿಶಿಷ್ಟ ರೀತಿಯಲ್ಲಿ ಪ್ರತಿಭಟನೆ ನಡೆಸಲಾಗಿತ್ತು.
ಸಾಮಾಜಿಕ ಕಾರ್ಯಕರ್ತ ನಿತ್ಯಾನಂದ ಒಳಕಾಡು ನಡೆಸಿದ್ದ ವಿಶಿಷ್ಟ ಪ್ರತಿಭಟನೆಯ ಚಿತ್ರಗಳು ಸಾಮಾಜಿಕ ಜಾಲ ತಾಣದಲ್ಲಿ ವೈರಲ್ ಆಗಿದ್ದವು. ತಕ್ಷಣ ಎಚ್ಚೆತ್ತ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ಅಧಿಕಾರಿಗಳು ರಸ್ತೆಗುಂಡಿಯನ್ನು ಮುಚ್ಚಿದ್ದಾರೆ.