ಮಂಗಳೂರಲ್ಲಿ ಮಹಮ್ಮದ್ ಫೈಜ್ ಖಾನ್ ಅವರ 'ಒಂದು ಗೋವಿನ ಕಥಾ'
ಮಂಗಳೂರು, ನವೆಂಬರ್, 18: ನಗರದ ಯುವಬ್ರಿಗೇಡ್ ನ ಸದ್ಭಾವನ ವಿಭಾಗವು ಖ್ಯಾತ ಗೋಕಥಾ ನಿರೂಪಕ ಮಹಮ್ಮದ್ ಫೈಜ್ ಖಾನ್ ಅವರಿಂದ 'ಒಂದು ಗೋವಿನ ಕಥಾ' ಉಪನ್ಯಾಸ ಕಾರ್ಯಕ್ರಮವನ್ನು ನವೆಂಬರ್ 28ರ ಶನಿವಾರದಂದು, ಸಂಜೆ 5.30ಕ್ಕೆ, ಮಂಗಳೂರಿನ ಸಂಘ ನಿಕೇತನ ಆವರಣದಲ್ಲಿ ಆಯೋಜಿಸಿದೆ.
ಮುಸ್ಲಿಂ ಧರ್ಮದಲ್ಲಿ ಹುಟ್ಟಿ, ಧರ್ಮದ ಬಗ್ಗೆ ಬಹಳಷ್ಟು ನಿಷ್ಠೆಯಿರುವ ಫೈಜ್ ಖಾನ್ ಅವರು ಗೋವಿನ ಶ್ರೇಷ್ಠತೆ ಇನ್ನಿತರ ವಿಚಾರಗಳನ್ನು ಮನಮುಟ್ಟುವಂತೆ ತಿಳಿಸಲಿದ್ದಾರೆ, ಈ ಸಂದರ್ಭದಲ್ಲಿ ಯುವಬ್ರಿಗೇಡ್ ಸಂಸ್ಥೆಯ ಮಾರ್ಗದರ್ಶಕರಾದ ಚಕ್ರವರ್ತಿ ಸೂಲಿಬೆಲೆ ಹಾಗೂ ಮಂಗಲ್ಪಾಡಿ ನರೇಶ್ ಶೆಣೈ ಕಾರ್ಯಕ್ರಮದ ಉಪಸ್ಥಿತಿ ವಹಿಸಲಿದ್ದಾರೆ.[ಸತ್ತ ಕರುವಿಗೆ ನ್ಯಾಯ ಕೇಳುತ್ತಿರುವ 'ಪುಣ್ಯಕೋಟಿ'ಯ ಕಥೆ]
ಯಾರಿದು ಗೋಕಥಾ ನಿರೂಪಕ ಮಹಮ್ಮದ್ ಫೈಜ್ ಖಾನ್ ?
ಮಹಮ್ಮದ್ ಫೈಜ್ ಖಾನ್ ಜುಲೈ 10ರ 1980ರಂದು ಛತ್ತೀಸ್ ಘಡ್ ನ ರಾಯ್ಪುರದಲ್ಲಿ ಜನಿಸಿದರು. ಹಿಂದಿ ಹಾಗೂ ರಾಜಕೀಯ ವಿಜ್ಞಾನ ಶಾಸ್ತ್ರದಲ್ಲಿ ಎಂ.ಎ ಪದವಿ ಪಡೆದಿರುವ ಇವರು ಎರಡು ವರ್ಷಗಳ ಕಾಲ ಸರ್ಕಾರಿ ಕಾಲೇಜಿನಲ್ಲಿ ಉಪನ್ಯಾಸಕರಾಗಿ ಕಾರ್ಯನಿರ್ವಹಿಸಿದ್ದಾರೆ. ಭಾರತೀಯತೆ, ಧಾರ್ಮಿಕತೆ ಮತ್ತು ಸಾಮಾಜಿಕ, ರಾಜಕೀಯ ವಿಷಯದಲ್ಲಿ ಸಂಶೋಧನೆ ಕೈಗೊಂಡಿದ್ದಾರೆ.
ವೃತ್ತಿ ತೊರೆದ ಬಳಿಕ ಗೋ ಸಂರಕ್ಷಣಾ ಚಟುವಟಿಕೆಯಲ್ಲಿ ತಮ್ಮನ್ನು ಸಕ್ರಿಯವಾಗಿ ತೊಡಗಿಸಿಕೊಂಡ ಇವರು ಗೋವಿನ ವಿಚಾರವಾಗಿ ದೇಶಾದ್ಯಂತ ಸುಮಾರು 20 ಗೋಕಥಾ ಹಾಗೂ 200ಕ್ಕೂ ಹೆಚ್ಚು ಉಪನ್ಯಾಸ ನೀಡಿದ್ದಾರೆ. ಗೋ ಹತ್ಯೆ ನಿಷೇಧಿಸಿ ದೆಹಲಿಯ ಜಂತರ್ ಮಂತರ್ ನಲ್ಲಿ ೨೨ ದಿನಗಳ ಉಪವಾಸ ಸತ್ಯಾಗ್ರಹ ಕೈಗೊಂಡಿದ್ದರು.[ಪತ್ರ : ಗಟ್ಟಿಮುಟ್ಟಾದ ತರ್ಕವಿಲ್ಲದ ಬಾಲಿಶ ವಿಚಾರಧಾರೆ]
ಫೈಜ್ ಖಾನ್ ರವರು ಉದಯಪುರದಲ್ಲಿ ನಡೆದ 'ನ್ಯಾಷನಲ್ ಯೂತ್ ಫೆಸ್ಟಿವಲ್' ನ ಭಾಷಣ ಸ್ಪರ್ಧೆಯಲ್ಲಿ ಚಿನ್ನದ ಪದಕ ಮಂಗಳೂರು ಹಾಗೂ ಅಮೃತಸರದಲ್ಲಿ ನಡೆದ 'ನ್ಯಾಷನಲ್ ಯೂತ್ ಫೆಸ್ಟಿವಲ್' ನಲ್ಲಿ ಬೆಳ್ಳಿ ಪದಕ ಪಡೆದಿದ್ದಾರೆ. ಅಲ್ಲದೇ ಇವರು "ಗಾಯ್ ಔರ್ ಇಸ್ಲಾಂ" ಎಂಬ ಪುಸ್ತಕವನ್ನು ಬರೆದಿದ್ದಾರೆ.
ಇದೀಗ ಫೈಜ್ ಖಾನ್ ಮುಸ್ಲಿಂ ರಾಷ್ಟ್ರೀಯ ಮಂಚ್ ನ ಧಾರ್ಮಿಕ ಗೋ ಘಟಕದ ರಾಷ್ಟ್ರೀಯ ಸಂಚಾಲಕರಾಗಿದ್ದು, ಉತ್ತರ ಪ್ರದೇಶಧ ಬಿಜ್ನೂರಿನಲ್ಲಿ ಕೃಷ್ಣ ಗೋಶಾಲೆಯ ಆಶ್ರಯದಾತರಾಗಿದ್ದಾರೆ. ಹರಿಯಾಣದಲ್ಲಿ ನಡೆದ ಅಖಿಲ ಭಾರತ್ ಮುಸ್ಲಿಂ ಗೋಪಾಲಕ್ ಸಮ್ಮೇಳನದಲ್ಲಿ ಪಾಲ್ಗೊಂಡಿದ್ದಾರೆ. ಬಕ್ರೀದ್ ಹಬ್ಬದಂದು ನಡೆಯುವ 12,000 ಗೋಹತ್ಯೆಗೆ ಲಗಾಮು ಹಾಕಲು ಸರ್ಕಾರಕ್ಕೆ ಆದೇಶಿಸಿದ್ದಾರೆ.