ಮಂಗಳೂರು: ಮೇಯರ್ ಮೀಸಲಾತಿ ಪ್ರಶ್ನೆ, ಅರ್ಜಿ ವಜಾಗೊಳಿಸಿದ ಹೈಕೋರ್ಟ್
ಮಂಗಳೂರು ಮಹಾನಗರ ಪಾಲಿಕೆಯ ಮೇಯರ್ ಚುನಾವಣೆಗೆ ಈಗ ಹಾದಿ ಸುಗಮವಾಗಿದೆ. ಮೇಯರ್ ಮೀಸಲಾತಿ ಪ್ರಶ್ನಿಸಿ ಮೇಯರ್ ಆಯ್ಕೆ ಚುನಾವಣೆಗೆ ತಡೆ ಕೋರಿ ಸಲ್ಲಿಸಿದ್ದ ರಿಟ್ ಅರ್ಜಿಯನ್ನು ಕರ್ನಾಟಕ ಹೈಕೋರ್ಟ್ ವಜಾಗೊಳಿಸಿದೆ.
ಮಂಗಳೂರು, ಫೆಬ್ರವರಿ 9 : ಮಂಗಳೂರು ಮಹಾನಗರ ಪಾಲಿಕೆಯ ಮೀಸಲಾತಿ ಪ್ರಶ್ನಿಸಿ ಮೇಯರ್ ಆಯ್ಕೆ ಚುನಾವಣೆಗೆ ತಡೆ ಕೋರಿ ಸಲ್ಲಿಸಿದ್ದ ರಿಟ್ ಅರ್ಜಿಯನ್ನು ರಾಜ್ಯ ಹೈಕೋರ್ಟ್ ವಜಾಗೊಳಿಸಿದೆ. ಈ ಹಿನ್ನಲೆಯಲ್ಲಿ ನಿಗದಿಯಯಂತೆ ಮಾರ್ಚ್ 12ರ ಒಳಗೆ ಮಂಗಳೂರು ಮಹಾನಗರ ಪಾಲಿಕೆಯ ಮೇಯರ್ ಮತ್ತು ಉಪಮೇಯರ್ ಸ್ಥಾನಕ್ಕೆ ಚುನಾವಣೆ ನಡೆಯುವ ಸಾಧ್ಯತೆ ಇದೆ.
ಮುಂದಿನ ಮೇಯರ್ ಸ್ಥಾನವನ್ನು ಸಾಮಾನ್ಯ ಮಹಿಳೆಗೆ ಹಾಗೂ ಉಪಮೇಯರ್ ಸ್ಥಾನವನ್ನು ಪರಿಶಿಷ್ಟ ಜಾತಿಗೆ ಮೀಸಲಿಟ್ಟು ಸರಕಾರ ಆದೇಶ ಹೊರಡಿಸಿತ್ತು. ಇದನ್ನು ಪ್ರಶ್ನಿಸಿ ಕಾರ್ಪೊರೇಟರ್ ಅಬ್ದುಲ್ ಅಜೀಜ್ ಅವರು ಹೈಕೋರ್ಟ್ಗೆ ರಿಟ್ ಅರ್ಜಿ ಸಲ್ಲಿಸಿದ್ದರು. ವಾದ ಪ್ರತಿವಾದವನ್ನು ಆಲಿಸಿದ ನ್ಯಾಯಾಲಯ ಅರ್ಜಿಯನ್ನು ವಜಾಗೊಳಿಸಿದೆ. ಸರ್ಕಾರದ ಪರವಾಗಿ ಹೆಚ್ಚುವರಿ ಅಡ್ವಾಕೇಟ್ ಜನರಲ್ ಪೊನ್ನಣ್ಣ ವಾದಿಸಿದ್ದರು.[ಮಂಗಳೂರು: ಜಿಲ್ಲಾ ಯೋಜನಾ ಸಮಿತಿಗೆ ಮಾ. 6ಕ್ಕೆ ಚುನಾವಣೆ]
ಈ ಹಿಂದೆ ಎರಡನೇ ಅವಧಿಯಲ್ಲಿ ಮೇಯರ್ ಸ್ಥಾನಕ್ಕೆ ಸಾಮಾನ್ಯ ಮಹಿಳೆ ಮೀಸಲಾತಿಯಡಿ ಜೆಸಿಂತಾ ವಿಜಯ ಆಲ್ಫ್ರೆಡ್ ಮೇಯರ್ ಆಗಿದ್ದರು. ಈ ಬಾರಿಯೂ ಇದೇ ಮೀಸಲಾತಿ ಬಂದಿದ್ದು ಆಡಳಿತ ಪಕ್ಷ ಕಾಂಗ್ರೆಸ್ನ 14 ಮಹಿಳಾ ಕಾರ್ಪೊರೇಟರ್ಗಳು ಮೇಯರ್ ಚುನಾವಣೆಗೆ ಸ್ಪರ್ಧಿಸಲು ಅರ್ಹತೆ ಪಡೆದಿದ್ದಾರೆ. ಇನ್ನು ಹಾಲಿ ಮೇಯರ್ ಹರಿನಾಥ್ ಅವರ ಅಧಿಕಾರಾವಧಿ 2017 ರ ಮಾರ್ಚ್ 11ಕ್ಕೆ ಕೊನೆಗೊಳ್ಳಲಿದ್ದು , ನಾಲ್ಕು ತಿಂಗಳ ಮೊದಲೇ ಸರ್ಕಾರ ಮೇಯರ್ ಹಾಗೂ ಉಪಮೇಯರ್ ಸ್ಥಾನಕ್ಕೆ ಮೀಸಲಾತಿ ಪ್ರಕಟಿಸಿದೆ.[ಮಂಗಳೂರು: ತಲಪಾಡಿ ಟೋಲ್ ಗೇಟ್ ವಿರುದ್ಧ ರೊಚ್ಚಿಗೆದ್ದ ಜನ]