ಮಂಗಳೂರು: ಎತ್ತಿನಹೊಳೆ ಯೋಜನೆ ವಿರುದ್ಧ ಉಗ್ರ ಪ್ರತಿಭಟನೆ ಆರಂಭ
ಎತ್ತಿನಹೊಳೆ ಯೋಜನೆ ವಿರುದ್ಧ ಮತ್ತೆ ಪ್ರತಿಭಟನೆ ಆರಂಭವಾಗಿದೆ. ಮಂಗಳೂರಿನ ಜಿಲ್ಲಾಧಿಕಾರಿ ಕಚೇರಿ ಮುಂಭಾಗ 'ನೇತ್ರಾವತಿ ರಕ್ಷಣಾ ಸಂಯುಕ್ತ ಸಮಿತಿ'ಯ ನೇತೃತ್ವದಲ್ಲಿ ಅಮರಾಣಾಂತ ಉಪವಾಸ ಸತ್ಯಾಗ್ರಹ ಆರಂಭಿಸಲಾಗಿದೆ.
ಮಂಗಳೂರು, ಫೆಬ್ರವರಿ 10 : ಎತ್ತಿನಹೊಳೆ ಯೋಜನೆ ವಿರುದ್ಧ ಮತ್ತೆ ಪ್ರತಿಭಟನೆ ಆರಂಭವಾಗಿದೆ. ಮಂಗಳೂರಿನ ಜಿಲ್ಲಾಧಿಕಾರಿ ಕಚೇರಿ ಮುಂಭಾಗ 'ನೇತ್ರಾವತಿ ರಕ್ಷಣಾ ಸಂಯುಕ್ತ ಸಮಿತಿ'ಯ ನೇತೃತ್ವದಲ್ಲಿ ಅಮರಾಣಾಂತ ಉಪವಾಸ ಸತ್ಯಾಗ್ರಹ ಆರಂಭಿಸಲಾಗಿದೆ.[ನೇತ್ರಾವತಿ ನದಿಗೆ ಸಮುದ್ರದೊಳಗೆ ಅಣೆಕಟ್ಟು: ಐ.ಐ.ಎಸ್.ಸಿಯಿಂದ ನೂತನ ಯೋಜನೆ]
ಈ ಸಂದರ್ಭ ಮಾತನಾಡಿದ ಒಡಿಯೂರು ಶ್ರೀಗಳು 'ಎತ್ತಿನಹೊಳೆ ಯೋಜನೆ ವಿರುದ್ಧ ನಾವು ಹಲವಾರು ಹೋರಾಟಗಳನ್ನು ನಡೆಸಿದ್ದೇವೆ. ಆದರೂ ಇನ್ನೂ ರಾಜ್ಯ ಸರ್ಕಾರ ಎಚ್ಚೆತ್ತುಕೊಂಡಿಲ್ಲ. ಒಂದು ವೇಳೆ ಈ ಯೋಜನೆಯನ್ನು ರದ್ದುಗೊಳಿಸದಿದ್ದರೆ ನಾವು ಹೋರಾಟ ಮುಂದುವರೆಸುತ್ತೇವೆ' ಎಂದು ಎಚ್ಚರಿಕೆ ನೀಡಿದ್ದಾರೆ.[ಎತ್ತಿನಹೊಳೆ ವಿರೋಧಿಸಿ ಫೆ.10ರಿಂದ ಆಮರಣಾಂತ ಉಪವಾಸ]
ಯೋಜನೆ ಅವೈಜ್ಞಾನಿಕ
ಇದೇ ವೇಳೆ ಮಾತನಾಡಿದ ಮೂಡುಬಿದಿರೆ ಜೈನ ಮಠದ ಚಾರುಕೀರ್ತಿ ಭಟ್ಟಾರಕ ಸ್ವಾಮೀಜಿ, 'ಎತ್ತಿನಹೊಳೆ ಯೋಜನೆ ಮೂಲಕ ದಕ್ಷಿಣ ಕನ್ನಡ ಜಿಲ್ಲೆಯ ಸಾಮರಸ್ಯವನ್ನು ಕೆಡಿಸುವ ಪ್ರಯತ್ನ ನಡೆಯುತ್ತಿದೆ. ನಮ್ಮ ತಾಳ್ಮೆಯನ್ನು ಪರೀಕ್ಷಿಸುವ ಪ್ರಯತ್ನ ಬೇಡ. ನೇತ್ರಾವತಿ ನದಿ ತಿರುವು ಯೋಜನೆ ಅವೈಜ್ಞಾನಿಕ. ಹೀಗಾಗಿ ನಾವು ಈ ಯೋಜನೆಯನ್ನ ವಿರೋಧಿಸುತ್ತಿದ್ದೇವೆ' ಎಂದು ಹೇಳಿದರು.
25 ಜನರಿಂದ ನಿರಶನ
ಸಂಸದ ನಳಿನ್ ಕುಮಾರ್ ಸೇರಿ 25ಮಂದಿ ಅನಿರ್ಧಿಷ್ಟಾವಧಿ ಉಪವಾಸ ಸತ್ಯಾಗ್ರಹ ಕೂತಿದ್ದಾರೆ. ಜಿಲ್ಲಾಧಿಕಾರಿ ಕಚೇರಿ ಮುಂಭಾಗ ಶಾಮಿಯಾನ ಹಾಕಿ ನಿರಶನಕ್ಕೆ ವ್ಯವಸ್ಥೆ ಮಾಡಲಾಗಿದೆ. ಈ ಹಿಂದೆ ನಳಿನ್ ಕುಮಾರ್ ಕಟೀಲ್ ಯೋಜನೆ ನಿಲ್ಲಿಸದಿದ್ದರೆ ಉಪವಾಸ ಕೂರುವುದಾಗಿ ಹೇಳಿದ್ದರು. ಅದರಂತೆ ಈಗ ಉಪವಾಸ ಕೂತಿದ್ದಾರೆ. ಆದರೆ ಎಷ್ಟು ದಿನ ಎಂಬುದನ್ನು ಕಾದು ನೋಡಬೇಕಷ್ಟೆ.
ಗಾಂಧಿ ಪ್ರತಿಮೆಗೆ ಮಾಲಾರ್ಪಣೆ
ಪ್ರತಿಭಟನೆಗೂ ಮೊದಲು ನಗರದ ಪುರಭವನದಲ್ಲಿರುವ ಗಾಂಧಿ ಪ್ರತಿಮೆಗೆ ಸಂಸದ ನಳೀನ್ ಕುಮಾರ್ ಕಟೀಲ್, ಮುಸ್ಲಿಂ ಸಂಘಟನೆಯ ಹಿರಿಯ ಮುಖಂಡ ಮಸೂದ್, ಒಡಿಯೂರು ಶ್ರೀ ಸೇರಿದಂತೆ ಹಲವಾರು ಗಣ್ಯರು ಮಾಲಾರ್ಪಣೆ ಮಾಡಿದರು.
ನೇತ್ರಾವತಿ ನಮ್ಮವಳು..
ನಂತರ ಪುರಭವನದಿಂದ ಡಿಸಿ ಕಚೇರಿಯವರೆಗೂ ಪ್ರತಿಭಟನಾ ಮೆರವಣಿಗೆ ನಡೆಯಿತು. ಈ ವೇಳೆ ' ನೇತ್ರಾವತಿ ನಮ್ಮವಳು.. ನೇತ್ರಾವತಿಗಾಗಿ ಜೀವ ಬಿಡುವೆವು' ಎಂಬ ಘೋಷಣೆಯನ್ನ ಕೂಗಲಾಯಿತು.
ಸಾವಿರಾರು ಜನ ಸಾಥ್
ಈ ಬೃಹತ್ ಪ್ರತಿಭಟನೆಯಲ್ಲಿ ಸ್ವಾಮೀಜಿಗಳು ಸೇರಿದಂತೆ ಹೋರಾಟಗಾರರು, ಸರ್ವಧರ್ಮದ ಮುಖಂಡರು, ನೂರಾರು ವಿದ್ಯಾರ್ಥಿಗಳು, ಶಿಕ್ಷಣ ಸಂಸ್ಥೆ ಪ್ರಮುಖರು ಸೇರಿ ಸಾವಿರಾರು ಮಂದಿ ಭಾಗಿಯಾಗಿದ್ದಾರೆ. ಅಲ್ಲದೇ ಸ್ಥಳೀಯ ಮೀನು ವ್ಯಾಪಾರಿ ಮಹಿಳೆಯರೂ ಪ್ರತಿಭಟನೆಯಲ್ಲಿ ಪಾಲ್ಗೊಂಡರು.