ಸಿಎಂ ವಿರುದ್ಧ ಎಫ್ಐಆರ್ ದಾಖಲಿಸಲು ಅನುಮತಿ ಕೋರಿ ರಾಜ್ಯಪಾಲರಿಗೆ ಮನವಿ
ಮಂಗಳೂರು, ಮಾರ್ಚ್ 2: ಸಾರ್ವಜನಿಕ ತೆರಿಗೆ ಹಣವನ್ನು ದುರುಪಯೋಗ ಮಾಡಿದ್ದಾರೆ ಎಂದು ಆರೋಪಿಸಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ವಿರುದ್ದ ಮಂಗಳೂರಿನ ಆರ್.ಟಿ.ಐ ಕಾರ್ಯಕರ್ತರೋರ್ವರು ರಾಜ್ಯಪಾಲರಿಗೆ ದೂರು ನೀಡಿದ್ದಾರೆ.
ಶಶಿಧರ್ ಶೆಟ್ಟಿ ಎನ್ನುವವರು ಆರ್.ಟಿ.ಐ ಮುಖಾಂತರ ದಾಖಲೆಗಳನ್ನು ಕಲೆ ಹಾಕಿದ್ದು ಸಿಎಂ ಸಿದ್ದರಾಮಯ್ಯ ಸೇರಿದಂತೆ ಮೂವರು ಸಚಿವರ ವಿರುದ್ದ ರಾಜ್ಯಪಾಲರಿಗೆ ದೂರು ಸಲ್ಲಿಸಿದ್ದಾರೆ. ಮತ್ತು ಎಫ್ಐಆರ್ ದಾಖಲಿಸಲು ಅನುಮತಿ ನೀಡಿ ಎಂದು ಅವರು ಮನವಿಯಲ್ಲಿ ಕೇಳಿಕೊಂಡಿದ್ದಾರೆ.
ಸರಕಾರಿ ಕಾರ್ಯಕ್ರಮದಲ್ಲಿ ರಾಜಕೀಯ ಭಾಷಣ
ದಕ್ಷಿಣ ಕನ್ನಡ ಜಿಲ್ಲೆಯ ಬಂಟ್ವಾಳ ತಾಲೂಕಿನ ಮಿನಿ ವಿಧಾನಸೌಧ ಉದ್ಘಾಟನೆಗೆ ಬಂದ ಸಂದರ್ಭದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಸೇರಿದಂತೆ ಸಚಿವ ಡಿ.ಕೆ. ಶಿವಕುಮಾರ್ , ರಮಾನಾಥ ರೈ, ಯು.ಟಿ. ಖಾದರ್ ಅವರು ರಾಜಕೀಯ ಭಾಷಣ ಮಾಡಿದ್ದಾರೆ ಎಂದು ಶಶಿಧರ್ ಶೆಟ್ಟಿ ಆರೋಪಿಸಿದ್ದಾರೆ.
ಖರ್ಚು ಮಾಡಿದ್ದೆಲ್ಲಾ ಸರಕಾರಿ ಹಣ
ಕಳೆದ ಅಕ್ಟೋಬರ್ 22ರಂದು ಸಿದ್ದರಾಮಯ್ಯನವರು ಬಂಟ್ವಾಳದಲ್ಲಿ ಮಿನಿ ವಿಧಾನಸೌಧ ಉದ್ಘಾಟನೆ ಮತ್ತು ವಿವಿಧ ಅಭಿವೃದ್ಧಿ ಕಾರ್ಯಗಳಿಗೆ ಶಂಕುಸ್ಥಾಪನೆ ಮಾಡಿದ್ದರು. ಈ ಸಂದರ್ಭದಲ್ಲಿ ಕಾರ್ಯಕ್ರಮದ ವೇದಿಕೆ, ಊಟೋಪಚಾರ, ಸಾರಿಗೆ, ಮೈಕ್, ಶಾಮಿಯಾನ ಮತ್ತು ಇತರ ಖರ್ಚುಗಳಿಗೆ ಸರ್ಕಾರಿ ತೆರಿಗೆ ಹಣವನ್ನು ಉಪಯೋಗಿಸಲಾಗಿದೆ.
ಜನರ ಹಣದಲ್ಲಿ ಚುನಾವಣಾ ಪ್ರಚಾರ
ನಂತರ ನಡೆದ ಸಭಾ ಕಾರ್ಯಕ್ರಮದಲ್ಲಿ ಅಧಿಕಾರಿಗಳ ಸಮ್ಮುಖದಲ್ಲೇ ಕಾಂಗ್ರೆಸ್ ಪಕ್ಷದ ಚುನಾವಣಾ ಪ್ರಚಾರವನ್ನು ಮಾಡಿದ್ದಾರೆ. ಈ ಮೂಲಕ ಜನರ ಹಣವನ್ನು ಚುನಾವಣಾ ಪ್ರಚಾರಕ್ಕೆ ಬಳಸಿ ತೆರಿಗೆ ಹಣ ದುರುಪಯೋಗ ಮಾಡಿಕೊಂಡಿದ್ದಾರೆ ಎಂದು ಆರೋಪಿಸಲಾಗಿದೆ.
ಪಕ್ಷದ ಕಾರ್ಯಕ್ರಮಕ್ಕೆ ಹಣ ವ್ಯಯ
ಒಟ್ಟು 2 ಲಕ್ಷ ರೂಪಾಯಿಯನ್ನು ಇದಕ್ಕಾಗಿ ವ್ಯಯಿಸಿದ್ದು ಪಕ್ಷದ ಕಾರ್ಯಕ್ರಮಕ್ಕೆ ಸಾರ್ವಜನಿಕರ ತೆರಿಗೆ ಹಣವನ್ನು ಉಪಯೋಗಿಸಿದ್ದಾರೆ ಎಂದು ಅವರು ದೂರಿನಲ್ಲಿ ತಿಳಿಸಿದ್ದಾರೆ.
ಎಫ್ಐಆರ್ ಗೆ ಅನುಮತಿ ನೀಡಿ
ಮುಖ್ಯಮಂತ್ರಿ ಸಿದ್ದರಾಮಯ್ಯ, ಡಿ.ಕೆ.ಶಿವಕುಮಾರ್, ರಮಾನಾಥ ರೈ, ಯು.ಟಿ. ಖಾದರ್ ವೇದಿಕೆಯಲ್ಲಿ ಪಕ್ಷದ ಪರವಾದ ಭಾಷಣವನ್ನು ಮಾಡಿದ್ದು ಈ ನಾಲ್ವರ ವಿರುದ್ದವೂ ರಾಜ್ಯಪಾಲರಿಗೆ ದೂರು ನೀಡಿರುವ ಶಶಿಧರ ಶೆಟ್ಟಿ, ಎಫ್ಐಆರ್ ದಾಖಲಿಸಲು ಅನುಮತಿ ಕೊಡುವಂತೆ ಮನವಿ ಸಲ್ಲಿಸಿದ್ದಾರೆ.