ಮಂಗಳೂರಲ್ಲಿ ಎಎಸ್ಐ ಮೇಲೆ ಕಾರು ಹರಿಸಿ ಕೊಲೆಗೆ ಯತ್ನಿಸಿದ ರೌಡಿ
ಮಂಗಳೂರು, ಜುಲೈ 21: ದಕ್ಷಿಣಕನ್ನಡ ಜಿಲ್ಲೆಯಲ್ಲಿ ರೌಡಿಗಳ ಅಟ್ಟಹಾಸ ಮಿತಿ ಮೀರುತ್ತಿದ್ದು, ಕಾನೂನು ಸುವ್ಯವಸ್ಥೆ ಹದಗೆಟ್ಟಿದೆ. ಹಾಗೂ ಪೋಲೀಸರ ಮೇಲೆ ಇಂಥ ರೌಡಿಗಳಿಗೆ ಭಯ ಇಲ್ಲ ಎನ್ನುವುದಕ್ಕೆ ಸಾಕ್ಷಿಯಾಗಿದೆ ಮಂಗಳೂರಿನಲ್ಲಿ ನಡೆದ ಈ ಘಟನೆ.
ಮಂಗಳುರಿನ ಪಣಂಬೂರು ಠಾಣೆಯ ಎಎಸ್ಐ ಮೇಲೆ ರೌಡಿಯೋರ್ವ ಕಾರು ಚಲಾಯಿಸಿ ಕೊಲೆಗೆ ಯತ್ನಿಸಿದ ಘಟನೆ ಗುರುವಾರ ತಡರಾತ್ರಿ ನಡೆದಿದೆ. ರೌಡಿಶೀಟರ್ ಹ್ಯಾರಿಸ್ ಈ ಕೃತ್ಯ ಎಸಗಿದ್ದಾನೆ. ಈ ಅಪಘಾತದಲ್ಲಿ ಪಣಂಬೂರು ಠಾಣೆ ಎಎಸ್ಐ ಪುರಂದರ ಗೌಡ ಗಾಯಗೊಂಡಿದ್ದು ಆಸ್ಪತ್ರೆಗೆ ದಾಖಲಾಗಿದ್ದಾರೆ.
ಹ್ಯಾರೀಸ್ ದರೋಡೆಗೆ ಸಂಚು ರೂಪಿಸಿದ್ದ ವಿಚಾರ ತಿಳಿದ ಪಣಂಬೂರು ಪೊಲೀಸರು ಎರಡು ತಂಡಗಳಾಗಿ ಮಂಗಳೂರಿನ ಕಸಬಾ ಬೆಂಗ್ರೆಯಲ್ಲಿ ರೌಡಿಶೀಡರ್ ಹ್ಯಾರೀಸ್ ನನ್ನು ಹಿಡಿಯಲು ಹೊಂಚು ಹಾಕಿದ್ದರು.
ಈ ವೇಳೆ ಸಾಗಿಬಂದ ಹ್ಯಾರಿಸ್ ಕಾರನ್ನು ನಿಲ್ಲಿಸಲು ಸೂಚಿಸಿದಾಗ ಆತ ನೇರವಾಗಿ ಎಎಸ್ಐಗೆ ಮೇಲೆ ಕಾರನ್ನು ಹಾಯಿಸಲು ಯತ್ನಿಸಿದ್ದಾನೆ.ದರಿಂದ ಎಎಸ್ಐ ಪುರಂದರ ಗೌಡರಿಗೆ ಗಾಯವಾಗಿದ್ದು ಅಪಾಯದಿಂದ ಸ್ವಲ್ಪದರಲ್ಲೇ ಪಾರಾಗಿದ್ದಾರೆ. . ಅವರೀಗ ಮಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ದಾಖಲಾಗಿದ್ದು ಚಿಕಿತ್ಸೆ ಪಡೆಯುತ್ತಿದ್ದಾರೆ.
ಹದಿನೈದಕ್ಕೂ ಹೆಚ್ಚು ಪ್ರಕರಣದಲ್ಲಿ ಆರೋಪಿಯಾಗಿರುವ ಹ್ಯಾರಿಸ್ ವಿರುದ್ಧ ಇದೀಗ ಪಣಂಬೂರು ಠಾಣೆಯಲ್ಲಿ ಕೊಲೆಯತ್ನ ದೂರು ದಾಖಲಾಗಿದೆ.