ಮಂಗಳೂರು ಪೋಸ್ಟ್ ಮ್ಯಾನ್ ಇನ್ನು ಆನ್ ಲೈನ್
ಮಂಗಳೂರು, ಜನವರಿ. 03 : ಜನರು, ಸಂಸ್ಥೆಗಳು, ಸರ್ಕಾರಗಳು ಪರಸ್ಪರವಾಗಿ ಸಂಪರ್ಕವನ್ನು ವೃದ್ಧಿಪಡಿಸಿಕೊಳ್ಳುವುದಕ್ಕೂ ವ್ಯವಹಾರಗಳನ್ನು ಬೆಳೆಸುವುದಕ್ಕೂ ನೆರವಾಗಿರುವ ಸಾಧನಗಳಲ್ಲಿ ಅಂಚೆ ವ್ಯವಸ್ಥೆ ಮುಖ್ಯವಾದದ್ದು.
ಆದರೆ, ಇದೀಗ ಆಧುನಿಕತೆಯ ಕಾಲದಲ್ಲಿ ಅಂಚೆ ಇಲಾಖೆ ಮರೆಯಾಗುವ ಅಪಾಯದಲ್ಲಿದ್ದು, ಈ ಇಲಾಖೆ ಆಧುನಿಕ ಸ್ಪರ್ಶ ಪಡೆಯುವ ಸಾಧ್ಯತೆಗಳಿವೆ. ಈಗಾಗಲೇ ಪ್ರಧಾನಿ ನೋಟು ನಿಷೇಧ ಮಾಡಿರುವ ಬೆನ್ನಲ್ಲೇ ಎಲ್ಲೆಡೆ ನಗದು ರಹಿತ ವ್ಯವಹಾರ ಆರಂಭವಾಗಿದೆ.
ಈ ಕಾರಣದಿಂದ ಡಿಜಿಟಲ್ ಇಂಡಿಯಾ ಪರಿಕಲ್ಪನೆ ಅಂಚೆ ಇಲಾಖೆಯಲ್ಲಿ ಕ್ರಾಂತಿಕಾರಿ ಬದಲಾವಣೆ ತರುತಿದ್ದು, ಇನ್ನು ಕೆಲವೇ ದಿನಗಳಲ್ಲಿ ಎಚ್ಎಚ್ ಡಿ ಎಂಬ ವಿಶಿಷ್ಟ ಸಾಧನ ಅಂಚೆ ಕಚೇರಿಗಳಲ್ಲಿ ಜಾರಿಗೆ ಬರಲಿದೆ.
ಎಚ್ಎಚ್ ಡಿ ವ್ಯವಸ್ಥೆ ಡಿಜಿಟಲ್ ಇಂಡಿಯಾದ ಎರಡನೇ ಹಂತದ ಪೈಲಟ್ ಯೋಜನೆಯಡಿಯಲ್ಲಿ ಮಂಗಳೂರು ಹಾಗೂ ಉಡುಪಿ ನಗರಗಳಲ್ಲಿ ಅನುಷ್ಟಾನಗೊಳ್ಳುತ್ತಿದೆ.
ಹೌದು. ಈಗ ಅಂಚೆ ಇಲಾಖೆಯು ಸದ್ದಿಲ್ಲದೆ ಪೇಪರ್ ಲೆಸ್ ವ್ಯವಹಾರ ನಡೆಸಲು ಮುಂದಾಗಿದೆ. 'ಅಂಚೆ ತಲುಪದ ಅಂಚಿಲ್ಲ' ಎಂಬ ಮಾತಿನಲ್ಲಿ ಸುಳ್ಳಿಲ್ಲ. ಜನಸಂಖ್ಯೆ, ಜನವಸತಿಗಳು ಬೆಳೆದಂತೆ, ಅದರ ಜೊತೆಗೆ ಬೆಳೆಯಲೇಬೇಕಾದ ಒಂದು ವ್ಯವಸ್ಥೆ ಅಂದರೆ ಅಂಚೆ ವ್ಯವಸ್ಥೆ.
ಮುಂದಿನ ದಿನಗಳಲ್ಲಿ ಅಂಚೆ ಕಚೇರಿಗಳಲ್ಲಿ ನಗದು ರಹಿತ ವ್ಯವಹಾರದ ಬೆಳವಣಿಗೆ ಆಗುತ್ತಿದ್ದು, ಈ ನಿಟ್ಟಿನಲ್ಲಿ ಐಆರ್ ಸಿಟಿ(ಇಂಟಿಗ್ರೇಟೆಡ್ ರೂರಲ್ ಕನೆಕ್ಟಿವಿಟಿ) ವ್ಯವಸ್ಥೆ ಜಾರಿಗೆ ಬರಲಿದೆ. ಇದು ಹ್ಯಾಂಡ್ ಹೆಲ್ಡ್ ಡಿವೈಸ್ ಎಂಬ ಸಾಧನ.
ಈ ಸಾಧನದಲ್ಲಿ ಇಂಟರ್ನೆಟ್ ಸಂಪರ್ಕ ಇದ್ದು, ಇದಲ್ಲದೆ ಡಿಜಿಟಲ್ ಸಹಿ ಹಾಕುವ ವ್ಯವಸ್ಥೆಯೂ ಇದೆ. ಗ್ರಾಹಕರಿಗೆ ಬರುವ ಅಂಚೆ ಪತ್ರಗಳನ್ನು ಈಗ ಪೇಪರ್ ಮೂಲಕ ಮ್ಯಾನುವೇಲ್ ದಾಖಲೆ ನಿರ್ವಹಣೆ ಮಾಡಲಾಗುತ್ತಿದೆ.
ಈ ಸಾಧನ ಜಾರಿಗೆ ಬಂದ ಬಳಿಕ ಸ್ಥಳದಲ್ಲೇ ಎಲ್ಲಾ ಮಾಹಿತಿ ಅಪ್ ಲೋಡ್ ಮಾಡಿ ಗ್ರಾಹಕರ ಡಿಜಿಟಲ್ ಸಹಿ ಪಡೆಯಲಾಗುತ್ತದೆ.
ಕಾರ್ಯ ನಿರ್ವಹಣೆ ಹೇಗೆ?: ಇನ್ನು ಈ ಎಚ್ಎಚ್ ಡಿ ವ್ಯವಸ್ಥೆ ಡಿಜಿಟಲ್ ಇಂಡಿಯಾದ ಎರಡನೇ ಹಂತದ ಪೈಲಟ್ ಯೋಜನೆಯಡಿಯಲ್ಲಿ ಮಂಗಳೂರು ಹಾಗೂ ಉಡುಪಿ ನಗರಗಳಲ್ಲಿ ಅನುಷ್ಠಾನಗೊಳ್ಳುತ್ತಿದೆ.
ಹ್ಯಾಂಡ್ ಹೆಲ್ಡ್ ಡಿವೈಸ್ ಎಂಬ ಹೆಸರಿನ ಸಾಧನ ತನ್ನಲ್ಲಿ ದಾಖಲಾದ ಎಲ್ಲಾ ಮಾಹಿತಿಗಳನ್ನು ತಕ್ಷಣವೇ ಸೆಂಟ್ರಲ್ ಸರ್ವರ್ ಗೆ ರವಾನಿಸುತ್ತದೆ. ನಂತರ ವರದಿಯೂ ಸಂಬಂಧ ಪಟ್ಟ ಪ್ರಧಾನ ಅಂಚೆ ಕಚೇರಿಗೆ ಇ-ಮೇಲ್ ಮೂಲಕ ರವಾನೆಯಾಗುತ್ತದೆ.
ಇದಲ್ಲದೆ ಡಿಜಿಟಲ್ ಸಹಿ, ಸ್ವೈಪಿಂಗ್ ಅವಕಾಶ , ಪ್ರಿಂಟರ್ ಹೀಗೆ ಹಲವಾರು ವ್ಯವಸ್ಥೆಗಳು ಇದರಲ್ಲಿರುತ್ತದೆ. ಮುಂದಿನ ದಿನಗಳಲ್ಲಿ ಈ ವ್ಯವಸ್ಥೆ ಆನ್ಲೈನ್ ಗೊಳ್ಳಲಿದೆ.
ಈಗಾಗಲೇ ಕರಾವಳಿಯಲ್ಲಿ ಅಂಚೆ ಇಲಾಖೆ ಮೈ ಸ್ಟ್ಯಾಂಪ್ ಯೋಜನೆಯನ್ನು ಜಾರಿಗೆ ತಂದಿದ್ದು ಗ್ರಾಹಕರು ಕೇವಲ 300 ರು ನೀಡಿದರೆ ಸ್ಥಳದಲ್ಲೇ ಗ್ರಾಹಕರ ಪೋಟೋ ತೆಗೆದು ಆ ಫೋಟೋವನ್ನು ಅಂಚೆ ಚೀಟಿಗಳಲ್ಲಿ ಮುದ್ರಣಮಾಡಲಾಗುತ್ತದೆ.
ಹೀಗೆ ಅಲ್ಲೇ 12 ಚೀಟಿಗಳನ್ನು ಪ್ರಿಂಟ್ ಮಾಡಿ ಕೊಡಲಾಗುತ್ತಿದೆ. ಇದನ್ನು ಯಾವುದೇ ಪೋಸ್ಟಿಗೂ ಬಳಸಬಹುದಾಗಿದೆ. ಹೀಗೆ ನಮ್ಮ ಕರಾವಳಿ ಪ್ರಗತಿಯ ಪಥದತ್ತ ಹೆಜ್ಜೆಹಾಕುತ್ತಿದೆ.