ಮಂಗಳೂರಿನಲ್ಲಿ ಸಂಚಾರ ದಟ್ಟಣೆ ತಪ್ಪಿಸಲು ಬಂತು 'ಕುಡ್ಲ ಟ್ರಾಫಿಕ್' ವಾಟ್ಸ್ಆಪ್
ಮಂಗಳೂರು, ಮೇ 24 : ಮಂಗಳೂರಿನಲ್ಲಿ ದಿನದಿಂದ ದಿನಕ್ಕೆ ಟ್ರಾಫಿಕ್ ಸಮಸ್ಯೆ ಹೆಚ್ಚಾಗುತ್ತಿದೆ. ಮುಂಜಾನೆ ಹಾಗು ಸಂಜೆ ನಗರದಾದ್ಯಂತ ಟ್ರಾಫಿಕ್ ಜಾಮ್ ಸರ್ವೇಸಾಮಾನ್ಯ. ಕೆಲವೆಡೆ ನಗರದಲ್ಲಿರುವ ಅವೈಜ್ಞಾನಿಕ ಟ್ರಾಫಿಕ್ ವ್ಯವಸ್ಥೆಯೇ ಇದಕ್ಕೆ ಕಾರಣ ಎಂದು ಜನರು ಆಕ್ರೋಶ ವ್ಯಕ್ತ ಪಡಿಸಿದ್ದಾರೆ.
ಈ ಹಿನ್ನೆಲೆಯಲ್ಲಿ ನಗರದಲ್ಲಿ ಟ್ರಾಫಿಕ್ ವ್ಯವಸ್ಥೆಗೆ ಸಾಮಾನ್ಯ ನಾಗರೀಕರ ಸಲಹೆ ಪಡೆಯಲು ಪೊಲೀಸ್ ಇಲಾಖೆ ಮುಂದಾಗಿದೆ. ಇನ್ನು ಮುಂದೆ ಮಂಗಳೂರು ನಗರ ಕಮಿಷನರೇಟ್ ವ್ಯಾಪ್ತಿಯಲ್ಲಿ ಸಾರ್ವಜನಿಕರೇ ಸಂಚಾರ ವ್ಯವಸ್ಥೆಯ ಮೇಲೆ ಹದ್ದಿನ ಕಣ್ಣಿಡಲಿದ್ದಾರೆ.
ಬೆಂಗಳೂರಿನ ಪ್ರಮುಖ ರಸ್ತೆಗಳಲ್ಲಿ ಭಾರೀ ಟ್ರಾಫಿಕ್ ಜಾಮ್
ಮಂಗಳೂರು ಕಮಿಷನರೇಟ್ ವ್ಯಾಪ್ತಿಯಲ್ಲಿ ಸಾರ್ವಜನಿಕರು ಸಂಚಾರ ಸುಧಾರಣೆಯ ಕುರಿತಂತೆ ಮಾಹಿತಿ, ದೂರು, ಸಲಹೆ, ಅಹವಾಲು ಮತ್ತು ಸಂಚಾರ ಉಲ್ಲಂಘನೆಗೆ ಸಂಬಂಧಿಸಿದಂತೆ ಮಾಹಿತಿಯನ್ನು ಪೊಲೀಸ್ ಇಲಾಖೆಯೊಂದಿಗೆ ಹಂಚಿಕೊಳ್ಳುವ ದೃಷ್ಟಿಯಿಂದ "ಕುಡ್ಲ ಟ್ರಾಫಿಕ್" ಎಂಬ ವಾಟ್ಸ್ಆಪ್ ನ್ನು ಪ್ರಾರಂಭಿಸಲು ಚಿಂತನೆ ನಡೆಸಿದ್ದಾರೆ.
ಮಂಗಳೂರು ನಗರದ ಸಂಚಾರ ಸುವ್ಯವಸ್ಥೆಗೆ ಸಂಬಂಧಿಸಿದ ಮಾಹಿತಿ, ದೂರು, ಸಲಹೆ, ಅಹವಾಲು ಮತ್ತು ಸಂಚಾರ ನಿಯಮ ಉಲ್ಲಂಘನೆ ಮಾಡುವವರ ಮಾಹಿತಿಯನ್ನು ಹೊಸದಾಗಿ ತೆರೆಯಲಾದ ವಾಟ್ಸ್ಆಪ್ ನಂಬರ್ 9480802303 ಗೆ ಕಳುಹಿಸಿಕೊಡುವಂತೆ ಕೋರಲಾಗಿದೆ.
ಇದು ಸಂಚಾರಿ ಪೊಲೀಸರಿಗೆ ಚೆಳ್ಳೆ ಹಣ್ಣು ತಿನ್ನಿಸಿ ಎಸ್ಕೇಪ್ ಆಗುತ್ತಿದ್ದವರನ್ನು ಚಿಂತೆಗೆ ದೂಡಿದೆ. ಒಂದು ವೇಳೆ ಪೊಲೀಸರ ಕಣ್ಣು ತಪ್ಪಿಸಿದರೂ ಜನಸಾಮಾನ್ಯರ ಮೊಬೈಲ್ ಕ್ಯಾಮರಾಗಳಿಂದ ತಪ್ಪಿಸಿಕೊಳ್ಳುವುದಾರೂ ಹೇಗೆ ಎಂಬ ಚಿಂತೆ ಕಾನೂನು ಬಂಜಕರಿಗೆ ಕಾಡತೊಡಗಿದೆ.
ಸಾರ್ವಜನಿಕರು ಸಂಚಾರ ನಿಯಮ ಉಲ್ಲಂಘನೆ ಮತ್ತು ಸಂಚಾರ ಸುವ್ಯವಸ್ಥೆಗೆ ಅಡ್ಡಿ ಪಡಿಸುವ ವಾಹನಗಳ ಮಾಹಿತಿ, ವಾಹನಗಳ ಸಂಖ್ಯೆಯು ಸ್ಪಷ್ಟ ರೀತಿಯಲ್ಲಿ ಕಾಣುವ ಹಾಗೆ ಫೋಟೋ ತೆಗೆದು ಈ ವಾಟ್ಸ್ ಆಪ್ ಗೆ ಅಪ್ ಲೋಡ್ ಮಾಡಬಹುದಾಗಿದೆ.
ಇದನ್ನು ಆಧರಿಸಿ ಕಾನೂನಿನ ರೀತಿ ಕ್ರಮ ಕೈಗೊಳ್ಳಲಾಗುವುದು. ಸೂಕ್ತ ಪರಿಹಾರವನ್ನು ಸಂಬಂಧಿಸಿದ ಪ್ರಾಧಿಕಾರದದಿಂದ ಕಂಡುಕೊಳ್ಳಲಾಗುವುದು ಎಂದು ಹಿರಿಯ ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ.