ದರೋಡೆ ಯತ್ನ, ಭೂಗತ ಪಾತಕಿ ವಿಕ್ಕಿಶೆಟ್ಟಿ ಸಹಚರರ ಬಂಧನ
ಮಂಗಳೂರು,ಜನವರಿ,08: ಎರಡು ಪ್ರತ್ಯೇಕ ಪ್ರಕರಣಗಳಿಗೆ ಸಂಬಂಧಿಸಿದಂತೆ ವಿಕ್ಕಿ ಶೆಟ್ಟಿಯ ಎಂಟು ಸಹಚರರನ್ನು ಬಂಧಿಸಲಾಗಿದೆ ಎಂದು ಮಂಗಳೂರಲ್ಲಿ ಶುಕ್ರವಾರ ನಡೆದ ಪತ್ರಿಕಾಗೋಷ್ಠಿ ವೇಳೆ ಮಂಗಳೂರು ಪೊಲೀಸ್ ಆಯುಕ್ತ ಚಂದ್ರಶೇಖರ್ ತಿಳಿಸಿದರು.
ಬಜಾಲ್ ನಿವಾಸಿ ಗೌರೀಶ್ (26), ಕಾವೂರು ನಿವಾಸಿ ಜಯೇಶ್ (23), ಆಕಾಶಭವನ ನಿವಾಸಿ ನವೀನ್ ಶೆಟ್ಟಿ (34), ಬಂಟ್ವಾಳ ನಿವಾಸಿ ಪ್ರವೀಣ್ ಕುಮಾರ್ (26), ಕುಲಶೇಖರ್ ನಿವಾಸಿ ಹರ್ಷಿತ್ (22) ಮತ್ತು ಬಜಾಲ್ ನಿವಾಸಿ ಗುರುಪ್ರಸಾದ್ (30) ಎಂಬ ವ್ಯಕ್ತಿಗಳನ್ನು ಬಂಧಿಸಲಾಗಿದೆ. ಇವರು ನಗರದ ಕಾವೂರು ಮರಕಡದಲ್ಲಿ ದರೋಡೆಗೆ ಹೊಂಚು ಹಾಕಿ ಕಾಯುತ್ತಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ.[ಕರಾವಳಿ ಭಾಗದಲ್ಲಿ ಒಂದು ವರ್ಷದಲ್ಲಿ 217 ಕೊಲೆ]
ಬಂಧಿತರಲ್ಲಿ ಜಯೇಶ್, ನವೀನ್ ಮತ್ತು ಪ್ರವೀಣ್ ಈ ಹಿಂದೆ ನಗರದ ಕಂಕನಾಡಿ ವಲೆನ್ಸಿಯಾದಲ್ಲಿ ನಡೆದ ಪ್ರಶಾಂತ್ ಹತ್ಯೆಯಲ್ಲಿ ಭಾಗಿಯಾಗಿದ್ದರು. ಗೌರೀಶ್, ಹರ್ಷಿತ್ ಮತ್ತು ಗುರುಪ್ರಸಾದ್ ಇತ್ತೀಚೆಗೆ ತೊಕ್ಕೊಟ್ಟುವಿನಲ್ಲಿ ನಡೆದ ವಿಕ್ಕಿ ಬೋಳಾರ ಹತ್ಯೆಯಲ್ಲಿ ಭಾಗಿಯಾಗಿದ್ದರು. ಬಂಧಿತರಿಂದ ಎರಡು ಕಾರು ಮತ್ತು ಮಾರಕಾಸ್ತ್ರಗಳನ್ನು ವಶಪಡಿಸಲಾಗಿದೆ ಎಂದು ಪೊಲೀಸರು ವಿವರಿಸಿದ್ದಾರೆ.[ಮಂಗಳೂರಲ್ಲಿ ಇಂದಿನಿಂದ ದಿಲ್ ಹೇ ರಾಜಸ್ಥಾನಿ!]
ನಗರದ ಕೀರ್ತಿ ಮಹಲ್ ಲಾಡ್ಜ್ ನಲ್ಲಿ ನಾಡ ಪಿಸ್ತೂಲ್ ನ್ನು ಅನಧಿಕೃತವಾಗಿ ಇರಿಸಿದ್ದ ಆಪಾದನೆ ಮೇರೆಗೆ ವಿಕ್ಕಿ ಶೆಟ್ಟಿ ಸಹಚರರಾದ ಬಿಜೈ ನಿವಾಸಿ ಸಚಿನ್ ಗೌಡ (31) ಮತ್ತು ಶಕ್ತಿನಗರ ನಿವಾಸಿ ಪವನ್ ಶೆಟ್ಟಿ (21) ಎಂಬುವರನ್ನು ಬಂಧಿಸಲಾಗಿದೆ. ಒಂದು ಪಿಸ್ತೂಲ್, 5 ಗುಂಡುಗಳನ್ನು ವಶಪಡಿಸಿಕೊಳ್ಳಲಾಗಿದೆ. ಈ ಬಗ್ಗೆ ಹೆಚ್ಚಿನ ತನಿಖೆ ನಡೆಯುತ್ತಿದೆ ಎಂದು ಆಯುಕ್ತರು ತಿಳಿಸಿದರು. ಉಪ ಆಯುಕ್ತ ಶಾಂತರಾಜು ಮತ್ತು ಡಾ. ಸಂಜೀವ ಪಾಟೀಲ್ ಹಾಜರಿದ್ದರು.