ಮೂವರ ವಿರುದ್ಧ ಗೂಂಡಾ ಕಾಯ್ದೆ ಪ್ರಯೋಗಿಸಿದ ಮಂಗಳೂರು ಪೊಲೀಸ್
ಮಂಗಳೂರು, ಜುಲೈ 19 : ಮಂಗಳೂರು ನಗರ ಪೊಲೀಸರು ಗೂಂಡಾ ಕಾಯ್ದೆಯಡಿ ಮೂವರು ಆರೋಪಿಗಳನ್ನು ಬಂಧಿಸಿದ್ದಾರೆ. ನಗರ ಪೊಲೀಸ್ ಆಯುಕ್ತ ಎಂ.ಚಂದ್ರಶೇಖರ್ ಅವರ ಆದೇಶದಂತೆ ಮೂವರ ವಿರುದ್ಧ ಗೂಂಡಾ ಕಾಯ್ದೆ ದಾಖಲು ಮಾಡಲಾಗಿದೆ.
ಜೊಕಟ್ಟೆಯ ತೋಕೂರಿನ ವಿಶ್ವನಾಥ ಪೂಜಾರಿ ಅಲಿಯಾಸ್ ವಿಶ್ವ (33), ಬಜ್ಪೆ ಹೊಸನಗರದ ಹನೀಫ್ ಅಲಿಯಾಸ್ ಹನೀಫ್ ಅದ್ಯಪಾಡಿ (37), ಕಾವೂರು ಶಾಂತಿನಗರದ ಮುಸ್ತಫಾ (30) ಬಂಧಿತರು.[ಗೂಂಡಾ ಕಾಯ್ದೆ ಏನಿದು?]
ಜೊಕಟ್ಟೆಯ ತೋಕೂರಿನ ವಿಶ್ವನಾಥ ಪೂಜಾರಿಯ ಮೇಲೆ ಕೊಲೆ, ಕೊಲೆಗೆ ಯತ್ನ, ದರೋಡೆಗೆ ಸಂಚು, ಹಲ್ಲೆ, ದೊಂಬಿ, ಒಳಸಂಚು ಮತ್ತು ಕೊಲೆ ಬೆದರಿಕೆ ಸೇರಿದಂತೆ ಮಂಗಳೂರು ನಗರ ಮತ್ತು ಉಡುಪಿ ಜಿಲ್ಲೆಯಾದ್ಯಂತ ವಿವಿಧ ಠಾಣೆಗಳಲ್ಲಿ 9 ಪ್ರಕರಣಗಳು ದಾಖಲಾಗಿತ್ತು. ಈತನನ್ನು ಗೂಂಡಾ ಕಾಯ್ದೆಯಡಿಯಲ್ಲಿ ಬಂಧಿಸಿರುವ ಪೊಲೀಸರು ವಿಜಯಪುರ ಕೇಂದ್ರ ಕಾರಾಗೃಹಕ್ಕೆ ಕಳುಹಿಸಿದ್ದಾರೆ.[ಅತ್ಯಾಚಾರ ವಿರುದ್ಧ ಗೂಂಡಾ ಕಾಯ್ದೆ: ಭಾರಿ ಹಿನ್ನಡೆ]
ಹನೀಫ್ ಅದ್ಯಪಾಡಿಯ ವಿರುದ್ಧ ಕೊಲೆ, ಕೊಲೆ ಯತ್ನ ಮತ್ತು ಹಲ್ಲೆ ಸೇರಿದಂತೆ ಮಂಗಳೂರು ನಗರದಾದ್ಯಂತ ವಿವಿಧ ಠಾಣೆಗಳಲ್ಲಿ ಸುಮಾರು 6 ಪ್ರಕರಣಗಳು ದಾಖಲಾಗಿತ್ತು. ಈತನನ್ನು ಗೂಂಡಾ ಕಾಯ್ದೆಯಡಿಯಲ್ಲಿ ಬಂಧಿಸಿ ಬೆಳಗಾವಿ ಕೇಂದ್ರ ಕಾರಾಗೃಹಕ್ಕೆ ಕಳುಹಿಸಲಾಗಿದೆ.
ಮುಸ್ತಫಾನ ಮೇಲೆ ಕೊಲೆ ಮತ್ತು ಕೊಲೆ ಯತ್ನ ಸೇರಿದಂತೆ ಮಂಗಳೂರು ನಗರದಾದ್ಯಂತ ವಿವಿಧ ಠಾಣೆಗಳಲ್ಲಿ 4 ಪ್ರಕರಣಗಳು ದಾಖಲಾಗಿತ್ತು. ಈತನನ್ನು ಗೂಂಡಾ ಕಾಯ್ದೆಯಡಿಯಲ್ಲಿ ಬಂಧಿಸಿ ಮೈಸೂರು ಕೇಂದ್ರ ಕಾರಾಗೃಹಕ್ಕೆ ಕಳುಹಿಸಲಾಗಿದೆ.