ಟ್ರಾಫಿಕ್ ಪೊಲೀಸ್ ಮೇಲೆ ಶಾಸಕ ಬಾವಾ ಅಧಿಕಾರ ದರ್ಪ
ಮಂಗಳೂರು, ಡಿಸೆಂಬರ್ 26: ಮಂಗಳೂರು ಉತ್ತರ ವಿಧಾನ ಸಭಾ ಕ್ಷೇತ್ರದ ಶಾಸಕ ಮೊಯಿದ್ದೀನ್ ಬಾವಾ ಅವರು ಟ್ರಾಫಿಕ್ ಪೊಲೀಸರೊಬ್ಬರನ್ನು ಸಾರ್ವಜನಿಕರ ಎದುರೇ ನಿಂದಿಸಿದ ಘಟನೆ ಮಂಗಳೂರಿನಲ್ಲಿ ನಡೆದಿದೆ.
ಆಂಬ್ಯುಲೆನ್ಸ್ ಗೆ ದಾರಿ ಮಾಡಿಕೊಡುವುದಕ್ಕೆ ಶಾಸಕ ಮೊಯಿದ್ದೀನ್ ಬಾವಾ ಅವರ ಕಾರು ತಡೆದಿದ್ದರಿಂದ ಟ್ರಾಫಿಕ್ ಪೊಲೀಸ್ ಮೇಲೆ ರೇಗಾಡಿ ನಿಂದಿಸಿ ಅಧಿಕಾರದ ದರ್ಪ ಮರೆದಿದ್ದಾರೆ.
ಶಾಸಕ ಬಾವಾ ಪೊಲೀಸಪ್ಪನ ಮೇಲೆ ರೇಗಾಡಿದ್ಯಾಕೆ? ಘಟನೆ ಆಗಿದ್ದೇನು? ಮುಂದೆ ಓದಿ.
ಘಟನೆ ವಿವರ: ಕ್ರಿಸ್ಮಸ್ ಹಬ್ಬ ಹಾಗೂ ಭಾನುವಾರದ ರಜೆ ಹಿನ್ನೆಲೆಯಲ್ಲಿ ನಗರದಲ್ಲಿ ವಿಪರೀತ ಟ್ರಾಫಿಕ್ ಸಮಸ್ಯೆ ಇತ್ತು. ಹೀಗಾಗಿ ನಂತೂರು ಸರ್ಕಲ್ ಬಳಿ ಭಾರೀ ಟ್ರಾಫಿಕ್ ಸಮಸ್ಯೆ ಕಾಡಿತ್ತು. ರಾ.ಹೆ. 66 ರ ಉದ್ದಕ್ಕೂ ಸರದಿ ಸಾಲಿನಲ್ಲಿ ವಾಹನಗಳು ಜಾಮ್ ಆಗಿದ್ದವು.
ಈ ವೇಳೆ ಶಾಸಕ ಮೊಯಿದ್ದೀನ್ ಬಾವಾ ಪಂಪ್ ವೆಲ್ ಸರ್ಕಲ್ ನಿಂದ ಸುರತ್ಕಲ್ ಕಡೆಗೆ ತೆರಳುತ್ತಿದ್ದರು.
ಇದೇ ವೇಳೆ ರೋಗಿಯನ್ನು ಕರೆದುಕೊಂಡು ಹೋಗುತ್ತಿದ್ದ ಆಂಬ್ಯುಲೆನ್ಸ್ ನಂತೂರು ಸರ್ಕಲ್ ಬಳಿ ಬಂದಾಗ ಟ್ರಾಫಿಕ್ ಪೊಲೀಸ್ ಮಾನವೀಯ ದೃಷ್ಟಿಯಿಂದ ಅಂಬ್ಯುಲೆನ್ಸ್ ಗೆ ಮೊದಲು ಹೋಗಲು ಅವಕಾಶ ಮಾಡಿಕೊಡಲು ಇತ್ತ ಕಡೆಯಿಂದ ಬಂದ ಬಾವಾ ಕಾರಿಗೆ ತಡೆಯೊಡ್ಡಿದ್ದರು.
ಇದರಿಂದ ಕೋಪಗೊಂಡ ಶಾಸಕ ಬಾವಾ ಅಧಿಕಾರ, ಹಣದ ದರ್ಪದಿಂದ ಟ್ರಾಫಿಕ್ ಪೇದೆಗೆ ಬೈದಿದ್ದಾರೆ. ಈ ವೇಳೆ ಪೇದೆ ನಿಖರ ಕಾರಣ ಹೇಳಿ ಸ್ಪಷ್ಟನೆ ನೀಡಿದರೂ ಬಾವಾ ಬಾಯಿಗೆ ಬಂದಂತೆ ಬೈದಿದ್ದಾರೆ.
ಈ ವೇಳೆ ಸಾರ್ವಜನಿಕರು ತೆಗೆದ ಫೋಟೋ ಘಟನೆಯ ವಾಸ್ತವತೆಯನ್ನ ಎತ್ತಿ ಹಿಡಿದಿದೆ.