ಪ್ರಶಾಂತ್ ಪೂಜಾರಿ ಹತ್ಯೆ ವಿಚಾರಣೆ ವಿಳಂಬ ಖಂಡಿಸಿ ಪ್ರತಿಭಟನೆ
ಮೂಡುಬಿದಿರೆ, ಅ, 17 : ಭಜರಂಗ ದಳ ಕಾರ್ಯಕರ್ತ ಪ್ರಶಾಂತ್ ಪೂಜಾರಿ ಹತ್ಯೆಗೈದ ದುಷ್ಕರ್ಮಿಗಳನ್ನು ಬಂಧಿಸಲು ರಾಜ್ಯಸರ್ಕಾರ ತೋರುತ್ತಿರುವ ವಿಳಂಬ ಖಂಡಿಸಿ ಅಕ್ಟೋಬರ್ 20 ರ ಮಂಗಳವಾರ ಮಂಗಳೂರು ಪುರಭವನ ಎದುರು ಬೃಹತ್ ಪ್ರತಿಭಟನೆ ನಡೆಸಲಾಗುವುದು' ಎಂದು ಸಂಸದ ನಳಿನ್ ಕುಮಾರ್ ಕಟೀಲ್ ಹೇಳಿದ್ದಾರೆ.
ಇತ್ತೀಚಿನ ದಿನಗಳಲ್ಲಿ ಹಿಂದೂಗಳ ಮೇಲೆ ನಿರಂತರ ದಾಳಿ ನಡೆಯುತ್ತಿದೆ. ಪ್ರಶಾಂತ್ ಪೂಜಾರಿ ಹತ್ಯೆಯಾದ ಸ್ಥಳದಲ್ಲಿಯೇ ಹಿಂದೆ ಮೂರು ಜನರ ಹತ್ಯೆಯಾಗಿತ್ತು. ಈ ಎಲ್ಲಾ ಘಟನೆಗಳ ನಡುವೆ ಸಂಬಂಧ ಇರುವಂತೆ ಕಾಣುತ್ತಿದೆ. ಹಾಗಾಗಿ ಹಂತಕರನ್ನು ಸಾಧ್ಯವಾದಷ್ಟು ಬೇಗ ಪತ್ತೆ ಹಚ್ಚಬೇಕು. ಇಲ್ಲದಿದ್ದರೆ ನಮ್ಮ ಹೋರಾಟ ಇನ್ನಷ್ಟು ಉಗ್ರರೂಪ ತಾಳಲಿದೆ ಎಂದು ನಳಿನ್ ಕುಮಾರ್ ಗುಡುಗಿದ್ದಾರೆ.[ದ.ಕ ಬಿಜೆಪಿ ಅಭ್ಯರ್ಥಿ ನಳಿನ್ ಕುಮಾರ್ ಕಟೀಲ್ ಸಂದರ್ಶನ]
'ಇದುವರೆಗೆ ಕಾಂಗ್ರೆಸ್ ನಾಯಕರು ಪ್ರಶಾಂತ್ ಪೂಜಾರಿ ಮನೆಗೆ ಭೇಟಿ ನೀಡಿಲ್ಲ. ಪರಿಹಾರ ಘೋಷಿಸಿಲ್ಲ. ಆರೋಪಿಗಳ ಬಗ್ಗೆ ಯಾವುದೇ ಮಾಹಿತಿ ಸಂಗ್ರಹಿಸಿಲ್ಲ. ಅಲ್ಲದೇ ಪೊಲೀಸ್ ಇಲಾಖೆ ನಿರ್ಲಕ್ಷ ತೋರುತ್ತಿದೆ. ಹಾಗಾಗಿ ಪ್ರಶಾಂತ್ ಪೂಜಾರಿ ಹತ್ಯೆಯನ್ನು ಖಂಡಿಸಿ ಹಾಗೂ ಆರೋಪಿಗಳ ಶೀಘ್ರ ಬಂಧನಕ್ಕೆ ಆಗ್ರಹಿಸಿ ರಾಜ್ಯ ನಾಯಕರ ಬೆಂಬಲದೊಂದಿಗೆ ಅಕ್ಟೋಬರ್ 20 ರ ಮಂಗಳವಾರದಂದು ಮಂಗಳೂರಿನ ಪುರಭವನದ ಎದುರು ಬೃಹತ್ ಪ್ರತಿಭಟನೆ ನಡೆಸಲಾಗುವುದು' ಎಂದು ನಳಿನ್ ಕುಮಾರ್ ಮಾಹಿತಿ ನೀಡಿದರು.
ಪ್ರತಿಭಟನೆಯಲ್ಲಿ ಪಕ್ಷದ ಹಿರಿಯ ನಾಯಕರಾದ ಮಾಜಿ ಮುಖ್ಯಮಂತ್ರಿ ಯಡ್ಯೂರಪ್ಪ, ಮಾಜಿ ಸಚಿವರಾದ ಈಶ್ವರಪ್ಪ, ಆರ್.ಆಶೋಕ್, ಸುರೇಶ್ ಕುಮಾರ್, ಸಂಸದೆ ಶೋಭಾ ಕರಾಂದ್ಲಾಜೆ, ಬಿಜೆಪಿ ರಾಜ್ಯಾಧ್ಯಕ್ಷ ಪ್ರಹ್ಲಾದ್ ಜೋಷಿ ಸೇರಿದಂತೆ ಪಕ್ಷದ ಪ್ರಮುಖ ನಾಯಕರು ಪಾಲ್ಗೊಳ್ಳಲ್ಲಿದ್ದಾರೆ ಎಂದು ನಳಿನ್ ಕುಮಾರ್ ತಿಳಿಸಿದರು.['ನಳೀನ್ ಕುಮಾರ್ ಕಟೀಲ್ ನಂ.1 ಸಂಸದರಲ್ಲ']
ಅಲ್ಲದೇ ಹತ್ಯೆಗೀಡಾದ ಭಜರಂಗ ದಳದ ಕಾರ್ಯಕರ್ತ ಪ್ರಶಾಂತ್ ಪೂಜಾರಿ ಹತ್ಯೆ ಮಾಡಿದ ದುಷ್ಕರ್ಮಿಗಳನ್ನು ಕಣ್ಣಾರೆ ಕಂಡಿದ್ದ ಪ್ರತ್ಯಕ್ಷದರ್ಶಿ ಅಕ್ಟೋಬರ್ 9ರ ಬೆಳಗ್ಗೆ ನಗರದ ಕಡ್ದಬೆಟ್ಟುವಿನಲ್ಲಿ ಆತ್ಮಹತ್ಯೆ ಮಾಡಿಕೊಂಡಿದ್ದಾನೆ.
ವಾಮನ ಕೋಟ್ಯಾನ್ (60) ಎಂಬಾತ ಪ್ರಶಾಂತ್ ಪೂಜಾರಿ ಹತ್ಯೆಯ ಪ್ರತ್ಯಕ್ಷಿ. ಈತ ಎಳನೀರು ವ್ಯಾಪಾರಿಯಾಗಿದ್ದನು. ಈತನಿಗೆ ಕೊಲೆ ನಡೆದ ಮರುದಿನದಿಂದ ಪಾಕಿಸ್ಥಾನದಿಂದ ಫೋನ್ ಕರೆಗಳು ಬರಲು ಆರಂಭಿಸಿದೆ. ಈ ಬಳಿಕ ಇವರು ತನ್ನ ಮಗಳ ಮನೆಯ ಶೆಡ್ಡಿನಲ್ಲಿ ನೇಣು ಬಿಗಿದುಕೊಂಡು ಆತ್ಮಹತ್ಯೆಗೆ ಶರಣಾಗಿದ್ದಾರೆ ಎಂದು ತಿಳಿಸಿದರು.