ಕಟೀಲು ದೇವಸ್ಥಾನದ ಮೊಕ್ತೇಸರ ಡಾ. ರವೀಂದ್ರನಾಥ ಪೂಂಜಾ ಇನ್ನಿಲ್ಲ
ಮಂಗಳೂರು, ಫೆಬ್ರವರಿ. 02 : ಕಟೀಲು ದುರ್ಗಾಪರಮೇಶ್ವರಿ ದೇವಸ್ಥಾನದ ಅನುವಂಶೀಯ ಮೊಕ್ತೇಸರ(ಆಡಳಿತ ಮುಖ್ಯಸ್ಥ) ಡಾ. ರವೀಂದ್ರನಾಥ ಪೂಂಜಾ(74) ಅವರು ಗುರುವಾರ ಮಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ನಿಧನರಾಗಿದ್ದಾರೆ.
ರವೀಂದ್ರನಾಥ ಪೂಂಜಾ ಅವರು ವೃತ್ತಿಯಲ್ಲಿ ವೈದ್ಯರಾಗಿದ್ದರು. ಕಳೆದ ಕೆಲವು ದಿನಗಳಿಂದ ಅಸ್ವಸ್ಥರಾಗಿದ್ದ ಅವರು ಇಂದು ಮಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ನಿಧನರಾಗಿದ್ದಾರೆ.
ದೇವಸ್ಥಾನದ ಮೊಕ್ತೇಸರ ವಿಚಾರಕ್ಕೆ ಸಂಬಂಧಿಸಿದ ವ್ಯಾಜ್ಯದ ತೀರ್ಪು ಕಳೆದ ವರ್ಷ ಕೊಡೆತ್ತೂರು ಗುತ್ತಿನ ಡಾ,ರವೀಂದ್ರನಾಥ ಪೂಂಜಾ ಅವರ ಪರವಾಗಿ ಬಂದಿತ್ತು.
ಅದೇ ವರ್ಷ ಅವರು ಮೊಕ್ತೇಶ್ವರರಾಗಿ ಅಧಿಕಾರ ಕೂಡ ಸ್ವೀಕರಿಸಿದ್ದರು. ಶ್ರೀ ಕ್ಷೇತ್ರ ಕಟೀಲು ದೇವಸ್ಥಾನದ ಆಡಳಿತದಲ್ಲಿ ಕೊಡೆತ್ತೂರು ಗುತ್ತಿನವರಿಗೆ ಹಿಂದಿನಿಂದಲೂ ಅಧಿಕಾರದ ಗೌರವವಿದ್ದು, 1888ರಿಂದ 1998ರವರೆಗೂ ಕೊಡೆತ್ತೂರು ಗುತ್ತಿನ ಮನೆತನಕ್ಕೆ ಆಡಳಿತ ಮೊಕ್ತೇಸರಿಕೆ ನೋಡಿಕೊಂಡಿತ್ತು.
ಕಾರಣಾಂತರದಿಂದ ಕಳೆದ 16 ವರ್ಷದ ಹಿಂದೆ ಈ ಅಧಿಕಾರದ ವಿವಾದವು ನ್ಯಾಯಾಲಯದ ಮೆಟ್ಟಿಲೇರಿತ್ತು. ನ್ಯಾಯಾಲಯದಲ್ಲಿ ವಾದ ಪ್ರತಿವಾದವನ್ನು ಆಲಿಸಿ ಉಚ್ಚ ನ್ಯಾಯಾಲಯವು ಮೇ 3ರಂದು ತೀರ್ಪಿನಂತೆ ಕರ್ನಾಟಕ ಸರ್ಕಾರದ ಹಿಂದೂ ಧಾರ್ಮಿಕ ಸಂಸ್ಥೆಗಳು ಧರ್ಮಾದಾಯ ದತ್ತಿ ಇಲಾಖೆಯ ಆಯುಕ್ತರು ನೀಡಿದ ಆದೇಶದಂತೆ ಕೊಡೆತ್ತೂರು ಗುತ್ತಿನ ಹಿರಿಯರಾದ ಡಾ.ಕೆ.ರವೀಂದ್ರನಾಥ ಪೂಂಜಾರವರು ಅಧಿಕಾರವನ್ನು ಪಡೆದಿದ್ದರು.